ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ರತ್ನ ಪ್ರಶಸ್ತಿಯಾಗಿ ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಖೇಲ್ ರತ್ನ ಪ್ರಶಸ್ತಿಗೆ ಭಾರತೀಯ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಹೆಸರಿಡುವಂತೆ ಅನೇಕರಿಂದ ನನಗೆ ಮನವಿ ಬಂದಿತ್ತು. ಹಾಗಾಗಿ ಹಲವರ ಕೋರಿಕೆಯನ್ನು ನಾನು ಗೌರವಿಸುತ್ತೇನೆ. ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್ ಹೆಸರಿಡಲಾಗಿದೆ ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂಬ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುವುದು ಎಂದು ಮೋದಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದು ಮೇಜರ್ ಧ್ಯಾನ್ ಚಂದ್ ಖೇಲ್ರತ್ನ ಪ್ರಶಸ್ತಿ, ಈ ಪ್ರಶಸ್ತಿ ಪಡೆಯಲು ಅರ್ಹತೆಗಳೇನಿರಬೇಕು, ಪ್ರಶಸ್ತಿಗಿರುವ ಮಾನದಂಡಗಳೇನು ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಮೇಜರ್ ಧ್ಯಾನ್ ಚಂದ್ ಖೇಲ್ರತ್ನ ಪ್ರಶಸ್ತಿ :
ಭಾರತದ ಕ್ರೀಡಾ ಕ್ಷೇತ್ರದಲ್ಲಿ ನೀಡಲಾಗುವ ಪ್ರಮುಖ ಪ್ರಶಸ್ತಿ ಇದಾಗಿದೆ. ಆಟಗಾರರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು 1991ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದವರು ವಿಶ್ವನಾಥನ್ ಆನಂದ್. ಕ್ರೀಡಾ ಮತ್ತು ಯುವ ಸಚಿವಾಲಯವು ರಚಿಸಿದ ಸಮಿತಿಯು ಪ್ರತಿವರ್ಷ ಬಹುಮಾನ ವಿಜೇತರನ್ನು ಆಯ್ಕೆ ಮಾಡುತ್ತದೆ.
1991 ರಿಂದ ಈ ವರೆಗೆ 38 ಆಟಗಾರರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ 38 ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಈ ನಾಲ್ಕು ಕ್ರಿಕೆಟಿಗರು ಮಾತ್ರ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. 1992 ರಿಂದ 2014 ರವರೆಗೆ ಒಂದು ವರ್ಷದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ನೀಡಲಾಯಿತು. ಆದರೆ 2014 ರ ನಂತರ ಪ್ರಶಸ್ತಿ ಆಯ್ಕೆ ಸಮಿತಿ ನೀಡಿದ ಸಲಹೆಯನ್ನು ಅನುಸರಿಸಿ ಕ್ರೀಡಾ ಮತ್ತು ಯುವ ಸಚಿವಾಲಯವು ಈ ಪ್ರಶಸ್ತಿಯ ಮಾನದಂಡಗಳನ್ನು ನೀಡಿದೆ. ಈಗ ನಾಲ್ಕು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಮತ್ತು ಕ್ರೀಡಾಪಟುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
ಪ್ರಶಸ್ತಿಗೆ ಆಟಗಾರರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ?:
ಖೇಲ್ ರತ್ನ ಪ್ರಶಸ್ತಿಗೆ ಆಟಗಾರನ ನಾಲ್ಕು ವರ್ಷಗಳ ಸಾಧನೆಯನ್ನು ಪರಿಗಣಿಸಲಾಗುತ್ತದೆ. ಒಂದು ವೇಳೆ ಆಟಗಾರರು ಒಲಿಂಪಿಕ್ನಲ್ಲಿ ಪದಕಗಳನ್ನು ಗೆದ್ದಿದ್ದರೆ ಅವರು ಈ ಪ್ರಶಸ್ತಿಗೆ ನೇರವಾಗಿ ಅರ್ಹರಾಗುತ್ತಾರೆ. ಇದಲ್ಲದೆ ತೀರ್ಪುಗಾರರು ಆಟಗಾರರಿಗೆ ಅಂಕಗಳನ್ನು ನೀಡುತ್ತಾರೆ, ಅದನ್ನು ನೋಡಿ ವಿಜೇತರನ್ನು ಘೋಷಿಸಲಾಗುತ್ತದೆ.
ಶೇಕಡಾ 90 ಅಂಕಗಳನ್ನು ಕ್ರೀಡಾ ಸ್ಪರ್ಧೆಗಳಲ್ಲಿ ಅವರ ಸಾಧನೆಯ ಆಧಾರದ ಮೇಲೆ ಕೊಡಾಲಾಗುತ್ತದೆ. ಆದರೆ ಅವರ ನಡವಳಿಕೆಯ ಮೇಲೆ (ಕ್ರೀಡಾ ಕೌಶಲ್ಯ ಮತ್ತು ಶಿಸ್ತು) ಶೇಕಡಾ 10 ಅಂಕಗಳನ್ನು ನೀಡಲಾಗುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಚಾಂಪಿಯನ್ಶಿಪ್ ಅಥವಾ ವಿಶ್ವಕಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅವರು 40 ಅಂಕಗಳನ್ನು, ಬೆಳ್ಳಿಗೆ 30 ಮತ್ತು ಕಂಚಿಗೆ 20 ಅಂಕಗಳನ್ನು ಪಡೆಯುತ್ತಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನಕ್ಕೆ 30, ಬೆಳ್ಳಿಗೆ 25 ಮತ್ತು ಕಂಚಿಗೆ 20 ಅಂಕಗಳನ್ನು ನೀಡಲಾಗುತ್ತದೆ.
ಪ್ರತಿ ವರ್ಷ ಅಥವಾ ಎರಡು ವರ್ಷಗಳಲ್ಲಿ ನಡೆಯುವ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನಕ್ಕೆ 25, ಬೆಳ್ಳಿಗೆ 20 ಮತ್ತು ಕಂಚಿಗೆ 15 ಅಂಕಗಳನ್ನು ನೀಡಲಾಗುತ್ತದೆ. ಕಾಮನ್ವೆಲ್ತ್ ಚಾಂಪಿಯನ್ಶಿಪ್ ಅಥವಾ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನಕ್ಕೆ 15, ಬೆಳ್ಳಿಗೆ 10 ಮತ್ತು ಕಂಚಿಗೆ ಏಳು ಅಂಕಗಳನ್ನು ನೀಡಲಾಗುತ್ತದೆ. ಅದಾಗ್ಯೂ ತೀರ್ಪುಗಾರರು ಬೇರೆ ಯಾವುದೇ ಪಂದ್ಯಾವಳಿಯ ಯಶಸ್ಸಿನ ಅಂಕಗಳನ್ನು ನಿರ್ಧರಿಸುತ್ತಾರೆ. ಅದೇ ಸಮಯದಲ್ಲಿ ಕ್ರಿಕೆಟ್ನಂತಹ ಒಲಿಂಪಿಕ್ ಅಲ್ಲದ ಕ್ರೀಡೆಗಳ ನಾಮನಿರ್ದೇಶಿತ ಆಟಗಾರರ ಬಗ್ಗೆಯೂ ಮಂಡಳಿ ನಿರ್ಧರಿಸುತ್ತದೆ.
ಪ್ರಶಸ್ತಿಗೆ ಮಾನದಂಡಗಳು :
ಪ್ರತಿವರ್ಷ ನೀಡಲಾಗುವ ಈ ಪ್ರಶಸ್ತಿಯನ್ನು ಹನ್ನೆರಡು ಸದಸ್ಯರ ಸಮಿತಿಯು ನೋಡಿಕೊಳ್ಳುತ್ತದೆ. ಇದು ಒಲಿಂಪಿಕ್ ಕ್ರೀಡಾಕೂಟ, ಪ್ಯಾರಾಲಿಂಪಿಕ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಂತಹ ವಿವಿಧ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿಯೊಬ್ಬ ಆಟಗಾರನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅವುಗಳನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸುತ್ತದೆ.
ಈ ಪ್ರಶಸ್ತಿಯಲ್ಲಿ ಆಟಗಾರರಿಗೆ ಪದಕಗಳನ್ನು, ಉಲ್ಲೇಖ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತದೆ. 2018 ರವರೆಗೆ ಪಡೆದ ಮಾಹಿತಿಯ ಪ್ರಕಾರ ಮೇಜರ್ ಧ್ಯಾನ್ ಚಂದ್ ಖೇಲ್ರತ್ನ ಪ್ರಶಸ್ತಿಯಲ್ಲಿ 7.5 ಲಕ್ಷ ರೂ ಜೊತೆಗೆ ಗೌರವಾನ್ವಿತ ಆಟಗಾರನಿಗೆ ರೈಲ್ವೆ ಉಚಿತ ಪ್ರಯಾಣದ ಅನುಕೂಲವನ್ನು ನೀಡಲಾಗುತ್ತದೆ.