ನಮ್ಮ ಜೀವನದಲ್ಲಿ ಶಿಕ್ಷಕರು ಅತೀ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಾವು ಬದುಕಿನುದ್ದಕ್ಕೂ ಅವರನ್ನು ನೆನೆಯುವ ಹಲವಾರು ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಅದರಲ್ಲೂ ಪ್ರತಿ ವರ್ಷ ಸೆಪ್ಟೆಂಬರ್ 5 ಬಂತೆಂದರೆ ಸಾಕು ನಮ್ಮೆಲ್ಲರ ಬದುಕನ್ನು ಬೆಳಗಿದ ಶಿಕ್ಷಕರು ಕಣ್ಣ ಮುಂದೆ ಹಾದು ಹೋಗುತ್ತಾರೆ.
ಭಾರತದ ರಾಷ್ಟ್ರಪತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ ಈ ದಿನವು 1962 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎಲ್ಲರ ಜೀವನದಲ್ಲಿ ಶಿಕ್ಷಕರ ಪ್ರಾಮುಖ್ಯತೆಯನ್ನು ನೆನಪಿಸಲು ಡಾ. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯಂದು ದೇಶಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.
ಶಿಕ್ಷಕರ ದಿನ 2022 ಇತಿಹಾಸ:
ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿರುವ ಡಾ. ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5, 1888 ರಂದು ತಿರುಟಾನಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶ ಶಿಕ್ಷಕ ಎಂದು ಪರಿಗಣಿಸಲಾಗಿದೆ.
"ನನ್ನ ಹುಟ್ಟುಹಬ್ಬವನ್ನು ಆಚರಿಸುವ ಬದಲು, ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಅದು ನನಗೆ ಹೆಮ್ಮೆ" ಎಂದು ಅವರು ಹೇಳಿದ್ದರು. ಆದ್ದರಿಂದ ಅವರ ಜನ್ಮದಿನವನ್ನು 1962 ರಿಂದ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶಿಕ್ಷಕರ ದಿನ 2022 ಮಹತ್ವ :
ಜೀವನದ ಕದನದಲ್ಲಿ ಹೋರಾಡಲು ಮತ್ತು ಉತ್ತಮ ಮಾನವರಾಗಲು ಶಿಕ್ಷಕರು ನಮಗೆ ಮಾರ್ಗದರ್ಶನ ನೀಡುತ್ತಾರೆ. ನಮಗೆ ನೈತಿಕತೆಯನ್ನು ಕಲಿಸುತ್ತಾರೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ನೆಲೆಯನ್ನು ದೃಢಪಡಿಸುತ್ತಾರೆ. ಆದ್ದರಿಂದ ಈ ದಿನವನ್ನು ಶಿಕ್ಷಕರಿಗೆ ಸಮರ್ಪಿಸಲಾಗಿದೆ.
ಡಾ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಪ್ರಮುಖ ಉದ್ದೇಶವೇ ಶಿಕ್ಷಕರ ಮಹತ್ವವನ್ನು ಸಾರುವುದು ಜೊತೆಗೆ ಶಿಕ್ಷಣದಲ್ಲಿ ಯುವಜನತೆಗೆ ಪ್ರೋತ್ಸಾಹಿಸುವುದು.
ಶಿಕ್ಷಕರ ದಿನ 2022 ಆಚರಣೆಗಳು :
ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸುತ್ತಾರೆ. ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಸಂಭ್ರಮಿಸುತ್ತಾರೆ.
ಕೆಲವು ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಾದ ಪ್ರಬಂಧ ಬರೆಯುವುದು, ಭಾಷಣಗಳನ್ನು ಮಾಡುವುದು, ಶಿಕ್ಷಕರಿಗೆ ಆಟಗಳನ್ನು ಆಡಿಸುವ ಮೂಲಕವು ಆಚರಣೆ ಮಾಡಲಾಗುತ್ತದೆ.