ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶದ ದಿನವನ್ನು ಅದೆಷ್ಟೋ ವಿದ್ಯಾರ್ಥಿಗಳು ಆತಂಕದಿಂದ ಎದುರು ನೋಡುತ್ತಿರುತ್ತಾರೆ ಆದರೆ ಈಗಾಗಲೆ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸಿದ್ದು ಕೆಲವರು ಸಂಭ್ರಮದಿಂದಿದ್ದರೆ ಮತ್ತೆ ಕೆಲವರು ನಿರಾಸೆಯಿಂದ ಸಪ್ಪೆ ಮೋರೆ ಹಾಕಿಕೊಂಡಿರುತ್ತೀರಿ ಮತ್ತೆ ಕೆಲವರು ಪೂರಕ ಪರೀಕ್ಷೆಯ ತಯಾರಿಯನ್ನು ನಡೆಸುತ್ತಿರುತ್ತೀರಿ.ಇಂತಹ ವಿದ್ಯಾರ್ಥಿಗಳ ಬಗೆಗೆ ಪೋಷಕರು ಹೆಚ್ಚು ಗಮನವಹಿಸುವುದು ಅತ್ಯಗತ್ಯ.

ನೀವು ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ ? ಅಥವಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದೀರಾ ? ಹಾಗಿದ್ದರೆ ಚಿಂತೆ ಮಾಡಬೇಡಿ. ಈ ನೋವಿನಿಂದ ಹೊರಬರಲು ಹೀಗೆ ಮಾಡಿ
1. ಸಕಾರಾತ್ಮ ಆಲೋಚನೆ ಮಾಡಿ:
ಸೋಲೆ ಗೆಲುವಿನ ಮೆಟ್ಟಿಲು ಅನ್ನುವ ಮಾತಿದೆ ಜೀವನದಲ್ಲಿ ಯಾರು ಸೋತಿಲ್ಲ ಹೇಳಿ? ಪ್ರತಿಯೊಬ್ಬ ವ್ಯಕ್ತಿಯೂ ಒಮ್ಮೆಯಾದರೂ ಸೋತಿರುತ್ತಾನೆ . ನಿಮ್ಮ ಪ್ರಯತ್ನದಲ್ಲಿ ಯಾವಾಗಲು ಜಯವಿದ್ದರೆ ಅದು ಪರಿಪೂರ್ಣವಾಗುವುದಿಲ್ಲ, ಒಮ್ಮೆ ಸೋತಾಗ ಮಾತ್ರ ಎಲ್ಲ ಅನುಭವನ್ನು ಪಡೆಯಲು ಸಾಧ್ಯ ಅದರಿಂದ ಜೀವನದ ಮೌಲ್ಯ ಮತ್ತು ಸಮಯದ ಮೌಲ್ಯವನ್ನು ಅರಿಯಬಹುದು. ಹಾಗಾಗಿ ಕಡಿಮೆ ಅಂಕ ಬಂದಿದೆ ಮತ್ತು ನಾನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದೇನೆ ಎಂದು ಬೇಸರಿಸದಿರಿ ಆತ್ಮಸ್ಥೈರ್ಯದಿಂದ ಸಕಾರಾತ್ಮ ಆಲೋಚನೆಗಳಲ್ಲಿ ತೊಡಗಿಕೊಳ್ಳಿ.
2. ಅನುತ್ತೀರ್ಣರಾದ ಕಾರಣ ತಿಳಿದುಕೊಳ್ಳಿ :
ಪರೀಕ್ಷೆಯಲ್ಲಿ ಫೇಲ್ ಆದೆ ಎನ್ನುವುದಕ್ಕಿಂತ ಯಾಕೆ ಫೇಲ್ ಆದೆ ?ಎಲ್ಲಿ ತಪ್ಪು ಮಾಡಿದ್ದೀರಿ ಎಂದು ಆಲೋಚಿಸಿಕೊಳ್ಳಿ ಆಗ ನಿಮ್ಮ ತಪ್ಪು ನಿಮಗೆ ಅರಿವಾಗುವುದು. ನಿಮ್ಮ ತಪ್ಪಿನ ಅರಿವಾದ ನಂತರ ಮುಂದೆ ಹೇಗೆ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಆಲೋಚಿಸಿ ಆದರೆ ಯಾವುದೇ ನಕರಾತ್ಮಕ ಚಿಂತನೆಗಳಿಗೆ ತೊಡಗಬೇಡಿ. ಯಾವ ವಿಷಯದಿಂದ ಅಂಕವನ್ನು ಕಳೆದುಕೊಂಡಿದ್ದೀರಿ ಮತ್ತು ನೀವು ಓದಿ ಗಮನವಿಟ್ಟು ಬರೆದ ವಿಷಯದಲ್ಲಿ ಯಾಕೆ ಕಡಿಮೆ ಅಂಕಗಳು ಬಂದಿದೆ ಎಂದು ಕಂಡುಕೊಳ್ಳುವುದರ ಜೊತೆಗೆ ಅದರೆಡೆಗೆ ಲಕ್ಷ್ಯವಹಿಸಿ.
3. ಪೂರಕ ಪರೀಕ್ಷೆಗೆ ತಯಾರಿ ನಡೆಸಿ:
ವಿದ್ಯಾರ್ಥಿಗಳು ತಾವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಈ ನೋವನ್ನು ಕಳೆಯಲು ಪೂರಕ ಪರೀಕ್ಷೆಯೆಂಬ ಅವಕಾಶವಿದೆ ಹಾಗಾಗಿ ಧೃತಿಗೆಡದೆ ಓದಿನಲ್ಲಿ ತೊಡಗಿ. ಹೆಚ್ಚು ಹೆಚ್ಚು ವಿಷಯಗಳನ್ನು ಅರಿತು ಅಭ್ಯಸಿಸಿ ಆಗ ಜಯ ಕಂಡಿತ ಲಭಿಸುವುದು. ಓದುವ ಜೊತೆಗೆ ಸಮಯ ನಿರ್ವಹಣೆಯ ಬಗೆಗೆ ಕೂಡ ಗಮನ ಕೊಡಿ.
4. ಪೋಷಕರೊಂದಿಗೆ ಚರ್ಚೆ ನಡೆಸಿ:
ಫೇಲ್ ಆದೆನೆಂದು ಸಪ್ಪೆ ಮೋರೆ ಹಾಕಿ ಪೋಷಕರೆದುರು ತಲೆತಗ್ಗಿಸಬೇಡಿ ಬದಲಾಗಿ ಅವರೊಂದಿಗೆ ಖುಷಿಯಿಂದ ಮಾತನಾಡಿ. ಅವರೊಂದಿಗೆ ನಿಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಿ, ಅವರಲ್ಲಿಯೂ ನೀವು ನಡೆಸುವ ಅಧ್ಯಯನದ ಬಗೆಗೆ ಆತ್ಮವಿಶ್ವಾಸ ತುಂಬಿ ಆಗ ಅವರೂ ನಿಮಗೆ ಬೆಂಬಲ ನೀಡುತ್ತಾರೆ.
5. ನಿಸರ್ಗದೊಂದಿಗೆ ಕೆಲ ಸಮಯ ಕಳೆಯಿರಿ:
ಕೆಲವೊಮ್ಮೆ ಆತಂಕ ಮತ್ತು ಆಘಾತಗಳು ಮನಸ್ಸನ್ನು ದಿಗ್ಭ್ರಾಂತಗೊಳಿಸುತ್ತವೆ ಹಾಗಾಗಿ ನೀವು ಪೂರಕ ಪರೀಕ್ಷೆಗೆ ತಯಾರಿ ನಡೆಸುವಾಗ ಆಗಾಗ್ಗೆ ನಿಸರ್ಗದೊಂದಿಗೆ ಕೆಲ ಸಮಯ ಕಳೆಯಿರಿ ಆಗ ಮನಸ್ಸಲ್ಲಿ ಆತಂಕ ದೂರಗೊಳ್ಳುವುದು ಮುಂದಿನ ಭವಿಷ್ಯದ ಬಗೆಗೆ ಉತ್ತಮ ಆಲೋಚನೆಗಳು ಮನದಲ್ಲಿ ಮೂಡುವುವು.
6. ಶಿಕ್ಷಕ / ಶಿಕ್ಷಕಿಯ ಸಹಾಯ ಪಡೆಯಿರಿ:
ನಿಮ್ಮ ಶಾಲಾ ಅಥವಾ ಕಾಲೇಜು ಶಿಕ್ಷಕ ಅಥವಾ ಶಿಕ್ಷಕಿಯನ್ನು ಸಂಪರ್ಕಿಸಿ ಅವರಿಂದ ಹೆಚ್ಚು ಸಹಾಯ ತೆಗೆದುಕೊಳ್ಳಿ ಇದರಿಂದ ನಿಮಗೆ ಅಧ್ಯಯನದಲ್ಲಿ ಹೆಚ್ಚು ಪ್ರಯೋಜನವಾದೀತು. ಅವರು ಕೂಡ ನಿಮ್ಮ ಆಸಕ್ತಿಯನ್ನು ಕಂಡು ಇನ್ನಷ್ಟು ಸಂತಸದಿಂದ ನೀಡುವ ವಿಶೇಷ ಮಾರ್ಗದರ್ಶನದಿಂದ ನಿಮಗೆ ಯಶಸ್ಸು ಸಿಗಬಹುದು.
7. ಆಹಾರ ಮತ್ತು ಆರೋಗ್ಯದ ಬಗೆಗೆ ಕಾಳಜಿ ವಹಿಸಿ:
ಇದೆಲ್ಲಾ ಸಾಮಾನ್ಯ ವಿಚಾರ ಇಂದು ಸೋತರೆ ನಾಳೆ ಗೆದ್ದೇ ಗೆಲ್ಲುತ್ತೇವೆ ಹಾಗಾಗಿ ವಿದ್ಯಾರ್ಥಿಗಳಾದವರು ಫೇಲ್ ಆದೆನೆಂದು ಚಿಂತೆಗೆ ಒಳಗಾಗದೆ ಮೊದಲು ಉತ್ತಮ ಆಹಾರ ಸೇವಿಸುವುದರ ಜೊತೆಗೆ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ವಹಿಸಿ. ಇದರ ಫಲವಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರುತ್ತೀರಿ.
ಬದುಕು ಎನ್ನುವುದು ನಾವಂದುಕೊಂಡಂತೆ ಇಲ್ಲ ಶಿಕ್ಷಣ ಅಗತ್ಯ , ಹಾಗಂತ ಶಿಕ್ಷಣವೇ ಎಲ್ಲಾ ಅಲ್ಲಾ. ಇಲ್ಲಿ ಕಲಿತದ್ದೂ ಇದೆ ಕಲಿಯುವುದೂ ಸಾಕಷ್ಟಿದೆ ಯಾಕೆ ಅಂತೀರಾ ನೀವು ಎಲ್ಲೆಡೆಯೂ ಜೈ ಎನ್ನಿಸಿಕೊಂಡು ನೂರಕ್ಕೆ ನೂರರಷ್ಟು ಅಂಕಗಳಿಸಿ ಭೇಷ್ ಎನ್ನಿಸಿಕೊಳ್ಳುವುದಕ್ಕಿಂತ ಒಮ್ಮೆ ಪರೀಕ್ಷೆಯಲ್ಲಿ ಫೇಲ್ ಆದಾಗ ನಿಮ್ಮ ಗುರಿ ಮತ್ತು ನಿಮ್ಮ ತಪ್ಪುಗಳು ನಿಮಗೆ ಅರಿವಾಗುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಈ ಬಗೆಗೆ ಬೇಜಾರು ಪಡದೆ ಮೇಲೆ ತಿಳಿಸಿರುವ ಎಲ್ಲಾ ಸಲಹೆಗಳನ್ನು ಪಾಲಿಸಿ ಆಗ ಪರೀಕ್ಷೆಯಲ್ಲಿ ಪಾಸ್ ಆಗೋದು ಖಚಿತ.


Click it and Unblock the Notifications











