ಮಕ್ಕಳ ವಿದ್ಯಾಭ್ಯಾಸದ ಮಹತ್ವ ಹಂತ ಅಂದ್ರೆ ಅದು ಬೋರ್ಡ್ ಎಕ್ಸಾಂ, ಯಾಕಂದ್ರೆ ಇಲ್ಲಿ ಪೋಷಕರಿಗೆ ಮತ್ತು ಮಕ್ಕಳಿಗೆ ತಟ್ಟುವ ಬಿಸಿ ಅಂತೂ ನಿಜಕ್ಕೂ ಹೇಳತೀರದು. ಇನ್ನು ನನ್ ಮಗ ಎಸ್ಎಸ್ಎಲ್ಸಿ, ನನ್ ಮಗ ದ್ವಿತೀಯ ಪಿಯುಸಿ ಅನ್ನೋ ಪೋಷಕರ ತೊಳಲಾಟವೇ ಹೆಚ್ಚಿರುತ್ತೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ವಿದ್ಯಾಭ್ಯಾಸದಲ್ಲಿ ಏರುಪೇರುಗಳನ್ನ ಕಾಣುವ ಸಂದರ್ಭ ಬರತ್ತೆ.
ವರ್ಷವೆಲ್ಲಾ ಶಾಲೆ ಕಾಲೇಜು ಕಳೆದೋಯ್ತು ಇನ್ನೇನಿದ್ರು ಪರೀಕ್ಷಾ ಸಮಯ ಅಂತ ಬೆಳಗ್ಗೆ ಸಂಜೆ ಓದೋದೆ ಕೆಲ್ಸ ಅದ್ರಲ್ಲೂ ನಾವ್ ಹೇಳೋದಾದ್ರೆ ವಿದ್ಯಾರ್ಥಿಗಳು ಇದ್ಯಾವ ಬಗೆಗೂ ಕಂಗಾಲಾಗೋ ಅಗತ್ಯನೇ ಇಲ್ಲ. ಯಾಕಂದ್ರೆ ಪ್ರತಿ ಮಕ್ಕಳೂ ಒಂದು ಒಂದು ಬಗೆಯ ಟ್ಯಾಲೆಂಟ್ ಹೊಂದಿರುತ್ತಾರೆ, ತಮ್ಮದೇ ಆದ ಗುರಿಯನ್ನು ಹೊಂದಿರುತ್ತಾರೆ ಮತ್ತು ತಮ್ಮದೇ ಆದ ಕನಸುಗಳನ್ನು ಹೊಂದಿರುತ್ತಾರೆ. ಓದಿನ ವಿಷಯ ಅಂತ ಬಂದಾಗ ತಮ್ಮದೇ ಆದ ಶೈಲಿಯಲ್ಲಿ ಓದುವ ಕ್ರಮವನ್ನು ಹೊಂದಿರುತ್ತಾರೆ. ಬೋರ್ಡ್ ಎಕ್ಸಾಂ ಆದ್ರಿಂದ ಹೆಚ್ಚಿನ ಜಾಗ್ರತೆ ವಹಿಸಬೇಕಿರೋದ್ರಿಂದ ವಿದ್ಯಾರ್ಥಿಗಳು ಒಂದಷ್ಟು ಅಂಕಗಳನ್ನು ಗಮನದಲ್ಲಿಟ್ಟರೆ ಸಾಕು, ಈ ಪೋಷಕರ ಆತಂಕಕ್ಕೆ ಪೂರ್ಣ ವಿರಾಮವನ್ನು ಹಾಕಬಹುದು.
ವಿದ್ಯಾರ್ಥಿಗಳಿಗೆ ವಿಶ್ರಾಂತಿ ಹೆಚ್ಚು ಅಗತ್ಯ:
ಪರೀಕ್ಷೆ ಬಂತು ಅಂತ ಹಗಲು ರಾತ್ರಿ ಪುಸ್ತಕ ಹಿಡಿದ್ರೆ ತಲೆಗೆ ಏನು ಹೋಗಲ್ಲ. ಯಾಕಂದ್ರೆ ಓದಲು ಎಷ್ಟು ಕಾಲವಕಾಶ ನೀಡ್ತೇವೆ ಅನ್ನುವುದಕ್ಕಿಂತ ಓದುವಾಗ ಗಮನವನ್ನು ಎಷ್ಟು ಕೇಂದ್ರೀಕರಿಸ್ತೇವೆ ಅನ್ನುವುದು ಮುಖ್ಯವಾಗಿರತ್ತೆ. ಇನ್ನು ಬೆಳಗ್ಗೆ ರಾತ್ರಿ ಯಾವಾಗಲೂ ಓದೋದು ನಿದ್ದೆ ಕಡಿಮೆ ಮಾಡೋದ್ರಿಂದ ಏನು ಲಾಭ ಇಲ್ಲ. ವಿದ್ಯಾರ್ಥಿಗಳು ಹೆಚ್ಚು ನಿದ್ದೆ ಅಂದರೆ ಗರಿಷ್ಟ ೮ ರಿಂದ ೯ ಗಂಟೆಗಳ ಕಾಲ ನಿದ್ದೆ ಮಾಡಿದಾಗ ಓದಿದ ವಿಚಾರ ನೆನಪಿನಲ್ಲಿ ಉಳಿಯೋಕೆ ಸಾಧ್ಯವಾಗತ್ತೆ. ಹಾಗಾಗಿ ವಿದ್ಯಾರ್ಥಿಗಳು ಟೆನ್ಷನ್ ಕಡಿಮೆ ಮಾಡಿ ನಿದ್ದೆ ಚೆನ್ನಾಗಿ ಮಾಡಿ.
ಉತ್ತಮ ಆಹಾರ ಸೇವನೆ ಅತ್ಯಗತ್ಯ:
ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಓದಿಗೆ ಹೆಚ್ಚು ಮಹತ್ವ ಕೊಡುತ್ತಾರೆಯೇ ಹೊರತು ಆಹಾರದ ಬಗೆಗೆ ಹೆಚ್ಚು ಗಮನ ಕೊಡದಿರುವುದಿರುವುದಿಂದಲೇ ಮಕ್ಕಳ ಆರೋಗ್ಯ ಏರುಪೇರಾಗಿ ಓದಿನಲ್ಲಿ ಕುಂಟಿತಗೊಳಗಾಗುತ್ತಾರೆ. ವಿದ್ಯಾರ್ಥಿಗಳು ಉತ್ತಮ ಆಹಾರ ಸೇವನೆ ಮಾಡುವುದರಿಂದ ಅವರ ಆರೋಗ್ಯ ಚೆನ್ನಾಗಿರುತ್ತದೆ. ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುವುದಿಲ್ಲ. ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ನನ್ನ ಆರೋಗ್ಯ ಸರಿಯಿರಲಿಲ್ಲ ಹಾಗಾಗಿ ಉತ್ತಮ ಅಂಕ ಬರಲಿಲ್ಲ ಎನ್ನುವುದನ್ನ ಅನೇಕರ ಮಾತುಗಳಲ್ಲಿ ಕೇಳಿರುತ್ತೇವೆ ಹಾಗಾಗಿ ವಿದ್ಯಾರ್ಥಿಗಳು ಆರೋಗ್ಯಯುತ ಆಹಾರ ಸೇವಿಸಿ ಮತ್ತು ನೀರನ್ನು ಕುಡಿದು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯವಾದದ್ದು.
ದೈಹಿಕ ವ್ಯಾಯಾಮ ಅಗತ್ಯ:
ವಿದ್ಯಾರ್ಥಿಗಳಿಗೆ ಓದು ಮುಖ್ಯವಾಗಿರತ್ತೆ ಹಾಗಾಗಿ ತಮ್ಮ ಆರೋಗ್ಯ ಮತ್ತು ಮನಸ್ಸಿನ ಮೇಲಾಗುವ ಒತ್ತಡದ ಬಗೆಗೆ ನಿರ್ಲಕ್ಷ್ಯ ತೋರುತ್ತಾರೆ ಹೀಗಾದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾದುದರಿಂದ ದೈಹಿಕ ವ್ಯಾಯಾಮ ಅಗತ್ಯವಾದುದು. ಪ್ರತಿನಿತ್ಯ ಯೋಗ, ಧ್ಯಾನ ಅಥವಾ ಉತ್ತಮ ವ್ಯಾಯಾಮ ಮಾಡುವುದರಿಂದ ಆರೋಗ್ಯ ಚೆನ್ನಾಗಿರುವುದರ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ಒತ್ತಡರಹಿತ ಬದುಕಬಹುದು. ಅಲ್ಲದೇ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಸಕಾರಾತ್ಮಕ ಆಲೋಚನೆಗಳನ್ನು ಬಿತ್ತುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವುದು.
ಟೈಂ ಮ್ಯಾನೇಜ್ಮೆಂಟ್ ಅಗತ್ಯ:
ಏನಿದು ಎಲ್ಲರೂ ಟೈಂ ಮ್ಯಾನೇಜ್ಮೆಂಟ್ ಅಂತಾರೆ ಹೇಗೆ ಅದು ಉಪಯುಕ್ತ ಆಗತ್ತೆ ಅಂತೀರಾ. ಕೆಲವೊಬ್ರಿಗೆ ಬೆಳಗಿನ ಜಾವ ಓದುವುದು ಇಷ್ಟ ಮತ್ತು ಇನ್ನೂ ಕೆಲವರಿಗೆ ಸಂಜೆಯ ವೇಳೆ ಹೆಚ್ಚು ಓದುವುದು ಇಷ್ಟ. ಹಾಗಾಗಿ ಬೋರ್ಡ್ ಎಕ್ಸಾಂ ಬರೆಯಲಿರುವ ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆಯ ವೇಳೆ ಟೈಂ ಟೇಬಲ್ ಹಾಕಿಕೊಂಡು ನಿರ್ಧಿಷ್ಟ ಸಮದಲ್ಲಿ ಓದುವುದು ಒಳಿತು ಅದರಿಂದ ನಿಮ್ಮ ದಿನನಿತ್ಯದ ಕೆಲಸಗಳಿಗೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳುವುದು ಒಳಿತು.
ಓದಲು ನಿರ್ಧಿಷ್ಟ ಜಾಗ ಆಯ್ಕೆ ಮಾಡಿ:
ಈ ಹಂತದಲ್ಲಿ ಅನೇಕ ವಿದ್ಯಾರ್ಥಿಗಳು ತಪ್ಪು ಮಾಡುತ್ತಾರೆ. ಯಾಕಂದ್ರೆ ಹಲವು ವಿದ್ಯಾರ್ಥಿಗಳು ಬೆಳಗ್ಗೆ ಎದ್ದ ಬಳಿಕ ಹಾಸಿಗೆ ಮೇಲೆ ಕುಳಿತು ಓದುವುದು ಮತ್ತು ಮನೆಯಲ್ಲಿ ಜನರ ಗುಂಪಿನ ನಡುವೆ ಓದುವುದು, ಟಿ.ವಿ ಮುಂದೆ ಕುಳಿತು ಓದುವುದು, ಮೊಬೈಲ್ ಹಿಡಿದು ಓದುವುದು ಮತ್ತು ಗಾಳಿ ಬೆಳಕು ಇಲ್ಲದೆಡೆ ಕುಳಿತು ಓದುವುದು ಈ ರೀತಿಯ ತಪ್ಪುಗಳನ್ನು ಹೆಚ್ಚು ಮಾಡುತ್ತಾರೆ. ಹಾಗಾಗಿ ತಮ್ಮ ಮನಸ್ಸಿನ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲದೆ ಉತ್ತಮ ಗಾಳಿ ಮತ್ತು ಬೆಳಕು ಇರುವ ಜಾಗದಲ್ಲಿ ಮತ್ತು ಕಡಿಮೆ ಜನರಿರುವೆಡೆ ಕುಳಿತು ಕೇವಲ ಓದಿನೆಡೆಗೆ ಗಮನ ಹರಿಸಿ ಓದುವುದರಿಂದಲೂ ನಿಮಗೆ ಓದುವುದಕ್ಕೆ ಸುಲಭವಾಗುತ್ತದೆ ಹಾಗಾಗಿ ಓದಲು ಕುಳಿತಾಗ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ.
ಓದಿದನ್ನು ಇತರರೊಂದಿಗೆ ಚರ್ಚಿಸಿ:
ವಿದ್ಯಾರ್ಥಿಗಳು ಓದುವುದರ ಜೊತೆಗೆ ಆ ವಿಷಯಗಳನ್ನು ಮನನ ಮಾಡುವುದೂ ಅಷ್ಟೇ ಮುಖ್ಯವಾದುದು. ಹಾಗಾಗಿ ನೀವು ಓದಿದ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆ ಮಾಡುವುದು. ಅವರೊಂದಿಗೆ ತಿಳಿದಿರುವ ವಿಚಾರಗಳನ್ನು ಹೇಳಿಕೊಡುವುದರಿಂದಲೂ ನೀವು ಓದಿದ ವಿಷಯ ಹೆಚ್ಚಿನ ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ತಾವು ಸ್ನೇಹಿತರೊಂದಿಗೆ ಓದುವುದು ಚರ್ಚೆ ಮಾಡುವುದರಿಂದಲೂ ನಿಮ್ಮ ಓದಿಗೆ ಪೂರಕವಾಗಿರುತ್ತದೆ.
ಸ್ಟಡಿ ಚಾರ್ಟ್ ಹಾಕಿಕೊಳ್ಳಿ:
ಕೆಲವರಿಗೆ ಕೆಲವು ವಿಷಯಗಳು ಹೆಚ್ಚು ಸುಲಭ ಮತ್ತು ಕೆಲವರಿಗೆ ಕೆಲವು ವಿಷಯಗಳು ಕಷ್ಟಕರ ಎನಿಸಬಹುದು. ಹಾಗಾಗಿ ಪ್ರತಿ ವಿಷಯಗಳಿಗೂ ಪ್ರಾಮುಖ್ಯತೆಯನ್ನು ನೀಡಬೇಕಾದ ಉದ್ದೇಶದಿಂದ ವಿದ್ಯಾರ್ಥಿಗಳು ಸ್ಟಡಿ ಚಾರ್ಟ್ ಹಾಕಿಕೊಳ್ಳಬೇಕು. ಯಾವುದೋ ಒಂದು ಸಬ್ಜೆಕ್ಟ್ ಅನ್ನೇ ಮೂರು ತಾಸು ಓದಿ ಬೋರ್ ಆಗುವಂತೆ ಮಾಡಿಕೊಳ್ಳುವ ಬದಲು ಎಲ್ಲಾ ವಿಷಯಗಳಿಗೂ ಪ್ರಾಮುಖ್ಯತೆಯನ್ನು ನೀಡುವಂತೆ ಚಾರ್ಟ್ ಹಾಕಿಕೊಂಡು ಫಾಲೋ ಮಾಡಿ ಕೆಲವೊಮ್ಮೆ ಓದುವುದು ಬೋರ್ ಮತ್ತು ನಾಟ್ ಇಂಟರೆಸ್ಟಿಂಗ್ ಅನಿಸಿದಾಗ ನಿಮಗಿಷ್ಟವಾದ ವಿಷಯವನ್ನು ಓದಿ ಮತ್ತೆ ಆ ಕಷ್ಟವಾದ ವಿಷಯವನ್ನು ಓದಲು ತೊಡಗಿಕೊಳ್ಳಿ ಇದರಿಂದ ನಿಮಗೆ ಓದಿನಲ್ಲಿ ಬ್ಯಾಲೆನ್ಸ್ ಮಾಡುವುದು ಸುಲಭವಾಗುವುದು.
ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಧ್ಯಯನ:
ವಿದ್ಯಾರ್ಥಿಗಳು ಕಳೆದ ವರ್ಷ ನಡೆದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಬಗೆಗೆ ಹೆಚ್ಚು ಗಮನ ಕೊಡುವುದು ಮತ್ತು ಅಲ್ಲಿ ಕೇಳಲಾಗಿರು ಪ್ರಶ್ನೆಗಳನ್ನು ನೋಟ್ ಮಾಡಿಕೊಳ್ಳುವುದು ಒಳಿತು. ಅನೇಕ ಪ್ರಶ್ನೆ ಪತ್ರಿಕೆಗಳನ್ನು ಕೂಲಂಕುಶವಾಗಿ ಗಮನಿಸಿದಾಗ ಯಾವ ಪ್ರಶ್ನೆಗಳು ಅತಿ ಮುಖ್ಯವಾದದ್ದು ಎಂದು ತಿಳಿಯುವುದು ಮತ್ತು ಆ ವಿಚಾರಗಳ ಬಗ್ಗೆ ಹೆಚ್ಚು ಗಮನವಹಿಸಲು ಇದು ಹೆಚ್ಚು ಸಹಕಾರಿಯಾಗುತ್ತದೆ.
ಎಸ್.ಎಸ್.ಎಲ್.ಸಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಲು ಸಿದ್ಧರಿರುವ ವಿದ್ಯಾರ್ಥಿಗಳು ಈ ಎಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟಾಗ ಯಶಸ್ಸು ನಿಮ್ಮದಾಗುತ್ತದೆ ಮತ್ತು ನಿಮ್ಮ ಗುರಿಯನ್ನು ತಲುಪಲು ಸುಲಭವಾಗುತ್ತದೆ.