ವಿದ್ಯಾರ್ಥಿಗಳಿಗೆ ನೀಡುವ ಶೈಕ್ಷಣಿಕ ದಾಖಲೆಗಳ ಸುರಕ್ಷತಾ ಅಂಶಗಳಲ್ಲಿ ವೈಯಕ್ತಿಕ ಗುರುತಿನ ವಿವರಗಳಾದ ಭಾವಚಿತ್ರ ಮತ್ತು ಆಧಾರ್ ಸಂಖ್ಯೆಗಳನ್ನು ತಕ್ಷಣದಿಂದ ನಮೂದಿಸುವಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಎಲ್ಲ ವಿವಿಗಳ ಕುಲಪತಿಗಳಿಗೆ ನಿರ್ದೇಶನ ನೀಡಿದೆ.
ನಕಲಿ ಪ್ರಮಾಣಪತ್ರಗಳ ಹಾವಳಿ ಮತ್ತು ಪರೀಕ್ಷಾ ಅಕ್ರಮ ತಡೆಯುವ ಉದ್ದೇಶದಿಂದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳಲ್ಲಿ ಅವರ ಭಾವಚಿತ್ರ ಮತ್ತು ಆಧಾರ್ ಸಂಖ್ಯೆಗಳನ್ನು ಮುದ್ರಿಸುವಂತೆ ಕೇಂದ್ರ ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.
ವಿಶ್ವವಿದ್ಯಾನಿಲಯಗಳು ನೀಡುವ ಶೈಕ್ಷಣಿಕ ಪ್ರಮಾಣಪತ್ರದಲ್ಲಿ ಪದವಿ ಪಡೆದ ಅಭ್ಯರ್ಥಿಯು ವಿದ್ಯಾರ್ಥಿಯಾಗಿ ಅಥವಾ ದೂರ ಶಿಕ್ಷಣ ಪದ್ಧತಿ ಅಥವಾ ಅರೆ ಕಾಲಿಕ ವಿಧಾನದಿಂದ ಶಿಕ್ಷಣ ಪಡೆದಿದ್ದಾರೆಯೇ ಎಂಬ ವಿವರಗಳನ್ನು ಕೂಡ ನಮೂದಿಸಬೇಕು ಎಂದು ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಎಸ್. ಸಂಧು ಅವರು ಕುಲಪತಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ವಿದ್ಯಾರ್ಥಿಗಳು ವಿವಿಧ ಉದ್ದೇಶಗಳಿಗಾಗಿ ತಮ್ಮ ಜೀವನದುದ್ದಕ್ಕೂ ಬಳಸುವ ಪ್ರಮಾಣ ಪತ್ರಗಳಲ್ಲಿ ಈ ವಿವರಗಳು ಇರುವುದು ಅತ್ಯಂತ ಮುಖ್ಯ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ಸಲಹೆಗಳನ್ನು ತಕ್ಷಣವೇ ಜಾರಿಗೊಳಿಸಿದರೆ ಉತ್ತಮ ಎಂದು ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಎಸ್. ಸಂಧು ತಿಳಿಸಿದಿದ್ದಾರೆ.
ಅಕ್ರಮ ತಡೆಯಲು ಕ್ರಮ
ಇತ್ತೀಚೆಗಷ್ಟೇ ನಕಲಿ ವಿವಿಗಳ ಪಟ್ಟಿ ಬಿಡುಗಡೆ ಮಾಡಿರುವ ಯುಜಿಸಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಅಕ್ರಮ ಅಂಕಪಟ್ಟಿಗಳ ಮೇಲೆ ಕಡಿವಾಣ ಹಾಕಲು ಈ ಕ್ರಮಕ್ಕೆ ಮುಂದಾಗಿದೆ. ಪದವಿ, ಅಂಕಪಟ್ಟಿ, ಪ್ರಮಾಣ ಪತ್ರ ಮತ್ತು ಇತರ ಶೈಕ್ಷಣಿಕ ದಾಖಲೆಗಳಲ್ಲಿ ಛಾಯಾಚಿತ್ರ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸುವುದರಿಂದ ನಕಲಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳ ಹಾವಳಿಯನ್ನು ನಿಯಂತ್ರಿಸಬಹುದು ಎಂಬುದು ಯುಜಿಸಿಯ ಲೆಕ್ಕಾಚಾರ.
ಆಧಾರ್
ಆಧಾರ್ ಸಂಖ್ಯೆಯು , ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾಗಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾಗಿ ಪೂರ್ಣಗೊಂಡನಂತರ ಭಾವಿಗುಪ್ರಾವು ("ಪ್ರಾಧಿಕಾರ") ಭಾರತದ ನಿವಾಸಿಗಳಿಗೆ ನೀಡುವ 12 ಅಂಕೆಗಳ ಯಾದೃಚ್ಛಿಕ ಸಂಖ್ಯೆಯಾಗಿರುತ್ತದೆ. ಯಾವುದೇ ವ್ಯಕ್ತಿಯು, ವಯಸ್ಸು ಎಷ್ಟೇ ಆಗಿರಲಿ ಹಾಗೂ ಲಿಂಗವು ಯಾವುದೇ ಆಗಿರಲಿ, ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುವ ಸಲುವಾಗಿ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿ ಮಾಡಿಸಿಕೊಳ್ಳಲು ಸಿದ್ಧವಿರುವ ವ್ಯಕ್ತಿಯು ಕನಿಷ್ಟ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಒಟ್ಟಾರೆ ಉಚಿತವಾಗಿರುವ ಅಂದರೆ ಯಾವುದೇ ಮೊತ್ತವನ್ನೂ ಪಾವತಿಸಬೇಕಾಗಿರದ ನೋಂದಣಿ ಪ್ರಕ್ರಿಯೆಯ ವೇಳೆಯಲ್ಲಿ ಒದಗಿಸಬೇಕಾಗುತ್ತದೆ.
ಆಧಾರ್ ಸಂಖ್ಯೆಯು ಯಾವುದೇ ಗುಪ್ತಚರ ಮಾಹಿತಿ ರಹಿತವಾಗಿರುತ್ತದೆ ಹಾಗೂ ಜಾತಿ, ಮತ, ಆದಾಯ, ಆರೋಗ್ಯ, ಭೌಗೋಳಿಕ ಆಧಾರದ ಮೇರೆಗೆ ಜನತೆಯ ಪಾರ್ಶ್ವಚಿತ್ರಣವನ್ನು ನೀಡುವುದಿಲ್ಲ. ಆಧಾರ್ ಸಂಖ್ಯೆಯು ಗುರುತಿನ ಒಂದು ಸಾಕ್ಷಾಧಾರವಾಗಿರುತ್ತದೆ, ಆದಾಗ್ಯೂ, ಅದು ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸಂಬಂಧಿಸಿದಂತೆ ಅದು ನಾಗರಿಕತೆಯ ಹಕ್ಕನ್ನು ನೀಡುವುದಿಲ್ಲ.
ಸಾಮಾಜಿಕ ಹಾಗೂ ಹಣಕಾಸಿನ ಒಳಗೂಡಿಸುವಿಕೆ, ಸಾರ್ವಜನಿಕ ವಲಯದ ವಿತರಣಾ ಸುಧಾರಣೆಗಳು, ವಿತ್ತೀಯ ಆಯವ್ಯಯಗಳ ನಿರ್ವಹಣೆ, ಅನುಕೂಲತೆಯನ್ನು ಹೆಚ್ಚಿಸಿ ಹಾಗೂ ಅಡಚನೆ-ಮುಕ್ತ ಜನತೆಯನ್ನು-ಕೇಂದ್ರೀಕೃತ ಆಡಳಿತವನ್ನು ಪ್ರೋತ್ಸಾಹಿಸುವುದಕ್ಕೆ ಆಧಾರ್ ಒಂದು ಚಾತುರ್ಯತೆಯಿಂದ ಕೂಡಿದ ಕಾರ್ಯನೀತಿಯಾಗಿದೆ.
ಇದನ್ನು ಗಮನಿಸಿ:ದೇಶದಲ್ಲಿವೆ 23 ನಕಲಿ ಶಿಕ್ಷಣ ಸಂಸ್ಥೆಗಳು