ದೇಶದಾದ್ಯಂತ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಏಕರೂಪ ಪ್ರವೇಶ ಪರೀಕ್ಷೆಗೆ ಕೆಲ ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ವಿಷಯದಲ್ಲಿ ಎಲ್ಲ ರಾಜ್ಯಗಳ ನಡುವೆ ಒಮ್ಮತ ಮೂಡುವವರೆಗೂ ಈ ನಿರ್ಧಾರ ಜಾರಿಯಾಗುವುದಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ.
ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಸಮರ್ಪಕವಾಗಿ ನಡೆಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಪ್ರವೇಶ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಗಟ್ಟಿ ಪಾರದರ್ಶಕತೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಏಕರೂಪ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತರುವ ಯೋಜನೆ ರೂಪಿಸಲಾಗಿತ್ತು.
ಮುಂದಿನ ವರ್ಷದಿಂದಲೇ ಒಂದೇ ಪ್ರವೇಶ ಪರೀಕ್ಷೆ ನಡೆಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿರ್ಧರಿಸಿತ್ತು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮಾದರಿಯಲ್ಲೇ, ಎಂಜಿನಿಯರಿಂಗ್ ಕೋರ್ಸ್ಗಳಿಗೂ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು ಸಚಿವಾಲಯ ಮುಂದಾಗಿತ್ತು. [ಬಿಇಡಿ ಗೂ ಬರಲಿದೆ ಏಕರೂಪ ಪ್ರವೇಶ ಪರೀಕ್ಷೆ]
ಎಐಸಿಟಿಇ ಅನುಮೋದನೆ
ಎಂಜಿನಿಯರಿಂಗ್ ಕೋರ್ಸುಗಳಿಗೆ ದೇಶಾದ್ಯಂತ ಏಕರೂಪ ಪ್ರವೇಶ ಪರೀಕ್ಷೆ 2018 ರಿಂದ ಆರಂಭವಾಗಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಕೆಲ ತಿಂಗಳ ಹಿಂದೆ ಅನುಮೋದನೆ ನೀಡಿತ್ತು.
ಏಕರೂಪದ ಪ್ರವೇಶ ಪರೀಕ್ಷೆಯಿಂದಾಗಿ ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಗಳು ರದ್ದಾಗಲಿದ್ದು, ದೇಶಕ್ಕೊಂದೆ ಸಿಇಟಿ ಇರಲಿದೆ. ಇದರಿಂದ ವಿದ್ಯಾರ್ಥಿಗಳು ಬೇರೆ ಬೇರೆ ಪ್ರವೇಶ ಪರೀಕ್ಷೆ ಬರೆಯುವುದು ತಪ್ಪುತ್ತದೆ ಎಂದು ತಿಳಿಸಿತ್ತು.
ಏಕರೂಪ ಸಿಇಟಿಗೆ ವಿರೋಧ
ಈ ಹಿಂದೆ ಏಕರೂಪ ಸಿಇಟಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಮಾರಕವಾಗಿ ಪರಿಣಮಿಸಲಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಇನ್ನು ಏಕರೂಪ ಸಿಇಟಿ ಬಂದರೆ ಪಠ್ಯಕ್ರಮದಲ್ಲೂ ಅನೇಕ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಅಲ್ಲದೆ ಏಕರೂಪ ಸಿಇಟಿ ಕೇಂದ್ರ ಮತ್ತು ರಾಜ್ಯ ಅನುಸರಿಸುತ್ತಿರುವ ಮೀಸಲು ನೀತಿಗೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಅನೇಕ ರಾಜ್ಯ ಸರ್ಕಾರಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳು ವಿರೋಧ ವ್ಯಕ್ತಪಡಿಸಿದ್ದವು.