ಮೌಲ್ಯಮಾಪನ ಆರಂಭವಾಗಿ 30 ದಿನಗಳಲ್ಲಿ ಫಲಿತಾಂಶವನ್ನು ಪ್ರಕಟ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಏಪ್ರಿಲ್ 14 ರಂದು, ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ನಿರ್ಣಾಯಕ ಪರೀಕ್ಷೆಗಳಲ್ಲೊಂದಾದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಮೇ 10 ರಂದು ಹೊರಬೀಳಲಿದೆ ಎಂದು ಹೇಳಿದ್ದಾರೆ.
ಸೂಕ್ತ ಮುನ್ನೆಚ್ಚರಿಕೆಯಿಂದಾಗಿ ಈ ಬಾರಿ ಪರೀಕ್ಷಾ ಅಕ್ರಮವನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದ್ದು, ಮೌಲ್ಯ ಮಾಪನ ಕಾರ್ಯವೂ ಯಾವುದೇ ಸಮಸ್ಯೆಯಿಲ್ಲದೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಾರ್ಚ್ 30 ರಿಂದ ಏಪ್ರಿಲ್ 12 ರ ವರೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿದ್ದು, ಏಪ್ರಿಲ್ 20 ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಂಥ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದು ಸಮಾಧಾನದ ಸಂಗತಿ.
ಒಟ್ಟು 2770 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಈ ಬಾರಿ 8.77 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 4.69 ಲಕ್ಷ ಬಾಲಕರು ಹಾಗೂ 4.07 ಲಕ್ಷ ಬಾಲಕಿಯರಿದ್ದಾರೆ.
225 ಮೌಲ್ಯಮಾಪನ ಕೇಂದ್ರಗಳು
ಈ ಬಾರಿಯ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ರಾಜ್ಯದ 225 ಕಡೆ ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸಲಾಗಿದ್ದು, 33 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರತಿ ವಿಷಯಕ್ಕೆ ಒಂದು ಮೌಲ್ಯಮಾಪನ ಕೇಂದ್ರವನ್ನು ನಿಗದಿಪಡಿಸಲಾಗಿದೆ.
ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಡೆ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗಿದ್ದು ಫಲಿತಾಂಶವನ್ನು ಬೇಗ ನೀಡುವ ಉದ್ದೇಶದಿಂದ ಹೆಚ್ಚಿನ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ 68,567 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ಅವರಿಗೆ ಸೂಚನಾ ಪತ್ರ ಕಳುಹಿಸಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮೌಲ್ಯಮಾಪನದ ಸಹಾಯಕ್ಕೆ ಮಾದರಿ ಉತ್ತರ ಪತ್ರಿಕೆಗಳು
ಮೌಲ್ಯಮಾಪನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಉತ್ತರ ಪತ್ರಿಕೆಗಳ ಮಾದರಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ.
ಮೌಲ್ಯಮಾಪನಕ್ಕೆ ಸಹಾಯವಾಗುವಂತೆ ಈ ಉತ್ತರ ಪತ್ರಿಕೆಗಳನ್ನು ಸಿದ್ಧಪಡಿಸಿದ್ದು ಮೌಲ್ಯಮಾಪಕರು ಇದರ ಉಪಯೋಗ ಪಡೆಯಲಿದ್ದಾರೆ. ಮೌಲ್ಯಮಾಪಕರಿಗೆ ಸಹಾಯವಾಗಲೆಂದು ಬಿಡುಗಡೆ ಮಾಡಿರುವ ಈ ಮಾದರಿ ಉತ್ತರಗಳನ್ನು ಸಾರ್ವಜನಿಕರು, ವಿದ್ಯರ್ಥಿಗಳು, ಶಿಕ್ಷಕರು ಕೂಡ ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.
ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಮಾದರಿ ಉತ್ತರಗಳು ಪ್ರಕಟ


Click it and Unblock the Notifications











