ಕರ್ನಾಟಕ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕಗಳನ್ನು ಸೆಪ್ಟೆಂಬರ್ 11ರ ವರೆಗೆ ವಿಸ್ತರಿಸಿರುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಶಾಲೆ ಮತ್ತು ಕಾಲೇಜು ಆರಂಭಕ್ಕೆ ಸೂಚನೆ ನೀಡಿದ ಬಳಿಕ ಶಿಕ್ಷಣ
ಇಲಾಖೆ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಗಳನ್ನು ಆರಂಭಿಸಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ದಾಖಲಾತಿಗೆ ಸೆಪ್ಟೆಂಬರ್ 1,2021ರ ವರೆಗೆ ಮತ್ತು ದ್ವಿತೀಯ ಪಿಯುಸಿ ದಾಖಲಾತಿಗೆ ಆಗಸ್ಟ್ 30,2021ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ ಪೋಷಕರು, ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪ್ರಾಂಶುಪಾಲರ ಮನವಿಯ ಮೇಲೆ ದಾಖಲಾತಿ ದಿನಾಂಕಗಳನ್ನು ವಿಸ್ತರಿಸಲಾಗಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾತಿ ದಿನಾಂಕಗಳನ್ನು ಸೆಪ್ಟೆಂಬರ್ 11,2021ರ ವರೆಗೆ ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳು ಯಾವುದೇ ದಂಡಶುಲ್ಕ ಪಾವತಿಸದೆ ಸೆಪ್ಟೆಂಬರ್ 11,2021ರೊಳಗೆ ದಾಖಲಾತಿ ಪಡೆಯಬಹುದು. ತದನಂತರ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳು 670/-ರೂ ದಂಡಶುಲ್ಕದೊಂದಿಗೆ ಸೆಪ್ಟೆಂಬರ್ 13,2021 ರಿಂದ ಸೆಪ್ಟೆಂಬರ್ 25,2021ರೊಳಗೆ ದಾಖಲಾಗಬಹುದು. ಇನ್ನೂ ತಡವಾದಲ್ಲಿ 2,890/-ರೂ ವಿಶೇಷ ದಂಡಶುಲ್ಕದೊಂದಿಗೆ ಸೆಪ್ಟೆಂಬರ್ 27,2021 ರಿಂದ ಅಕ್ಟೋಬರ್ 5,2021ರ ವರೆಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ಪಡೆಯಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸಕ್ತ 2021-22ನೇ ಸಾಲಿಗೆ ರಾಜ್ಯದ ಎಲ್ಲ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶದಲ್ಲಿ ಪ್ರತಿ ಸಂಯೋಜನೆಗೆ (ಕಾಂಬಿನೇಷನ್) ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅವಕಾಶ ನೀಡಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಪ್ರಥಮ ಪಿಯುಸಿಗೆ ಒಂದೊಂದು ಕಾಂಬಿನೇಷನ್ ಅಥವಾ ವಿಭಾಗದಲ್ಲಿ 80 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು. 2021-22ನೇ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿ ಕಾಂಬಿನೇಷನ್ ಅಥವಾ ವಿಭಾಗದಲ್ಲಿ ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳನ್ನು ಅಂದರೆ 100 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಮಾಡಿಕೊಡಲಾಗಿದೆ.
ಈ ಭಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಿರುವುದರಿಂದ ಪಿಯುಸಿ ಪ್ರವೇಶಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮಕ್ಕಳ ದಾಖಲಾತಿಗೆ ಅನುಮತಿ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕಾಲೇಜುಗಳಲ್ಲಿ ಲಭ್ಯವಿರುವವ ಹೆಚ್ಚುವರಿ ಮೂಲಸೌಕರ್ಯಗಳಿಗೆ ತಕ್ಕಂತೆ, ಬೇಡಿಕೆ ಅನುಸಾರ, ಮಂಜೂರಾತಿ ಪಡೆದು ಬೋಧಿಸುತ್ತಿರುವ ಪ್ರತಿ ಸಂಯೋಜನೆಗೆ 20 ಹೆಚ್ಚುವರಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ವಿಭಾಗಗಳಿದ್ದಲ್ಲಿ, ಪ್ರತಿ ವಿಭಾಗಕ್ಕೂ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡಲಾಗಿದೆ. ಈ ಸಂಬಂಧ ಜಿಲ್ಲಾ ಉಪನಿರ್ದೇಶಕರು ತಮ್ಮ ಹಂತದಲ್ಲೇ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕು ಎಂದು ಸೂಚಿಸಿದೆ.


Click it and Unblock the Notifications











