ಮೈಸೂರು ರಂಗಾಯಣದಲ್ಲಿ ಪ್ರಸ್ತುತ 2020-21ನೇ ಸಾಲಿನ ರಂಗ ಶಿಕ್ಷಣ ಡಿಪ್ಲೊಮಾ ಕೋರ್ಸಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 25 ರಿಂದ ಜುಲೈ 10,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಕೋರ್ಸಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ದೊರಕಿದೆ. ಈ ಕೋರ್ಸಿನ ಶಿಕ್ಷಣದ ಪಠ್ಯಕ್ರಮ, ಬೋಧನಾ ವಿಧಾನ, ಪರೀಕ್ಷೆಗಳು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾರ್ಗಸೂಚಿ ಅನ್ವಯ ನಡೆಯುತ್ತದೆ.
ಉತ್ತೀರ್ಣರಾದವರಿಗೆ ವಿಶ್ವವಿದ್ಯಾಲಯವು ಪ್ರಮಾಣ ಪತ್ರವನ್ನು ನೀಡುತ್ತದೆ. ತರಬೇತಿಯ ಮೊದಲನೇ ವರ್ಷ ಪಠ್ಯಾಧಾರಿತ ವಿಷಯ ಬೋಧನೆಯ ಜೊತೆಗೆ, ರಂಗಭೂಮಿಯ ಪ್ರಾಥಮಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು ನೀಡಲಾಗುವುದು.
ಪ್ರವೇಶಕ್ಕೆ ಅರ್ಹತೆ:
ವಿಶ್ವವಿದ್ಯಾಲಯದ ನಿಯಮಾವಳಿಗೆ ಅನುಗುಣವಾಗಿ ರಂಗಶಿಕ್ಷಣಕ್ಕೆ ಸೇರಬಯಸುವ ಅಭ್ಯರ್ಥಿಗೆ ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ/ತತ್ಸಮಾನ ಪಾಸಾಗಿರಬೇಕು. 18 ರಿಂದ 28 ವರ್ಷದೊಳಗಿನವರಾಗಿರಬೇಕು. ಕನ್ನಡ ಭಾಷೆ ಓದಲು, ಬರೆಯಲು ಬರುವುದು ಕಡ್ಡಾಯ.
ಭಾರತೀಯ ರಂಗಶಿಕ್ಷಣ ಕೇಂದ್ರ:
ಭಾರತೀಯ ರಂಗ ಶಿಕ್ಷಣ ಕೇಂದ್ರವನ್ನು ರಂಗಾಸಕ್ತ ಯುವಕರಿಗೆ ರಂಗ ಶಿಕ್ಷಣ ನೀಡುವ ಉದ್ದೇಶದಿಂದ 2010-11ರಲ್ಲಿ ಪ್ರಾರಂಭಿಸಲಾಯಿತು.
ರಂಗ ಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸ್:
ರಂಗ ಶಿಕ್ಷಣದಲ್ಲಿ ತರಬೇತಿ ನೀಡುವ ಡಿಪ್ಲೋಮಾ ಒಂದು ವರ್ಷದ ಅವಧಿಯದ್ದಾಗಿದೆ. ಪಠ್ಯಕ್ರಮ, ಭೋಧನಾ ವಿಧಾನ, ಪರೀಕ್ಷೆಗಳು ಮಾನ್ಯತೆ ಪಡೆದ ವಿಶ್ವವಿದ್ಯಲಯದ ಮಾರ್ಗಸೂಚಿ ಅನ್ವಯ ನಡೆಯುತ್ತದೆ. ಉತ್ತೀರ್ಣರಾದವರಿಗೆ ರಂಗಾಯಣದ ದೃಢೀಕರಣದೊಂದಿಗೆ ವಿಶ್ವವಿದ್ಯಾಲಯದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ತರಬೇತಿಯ ಮೊದಲನೇ ವರ್ಷ ಪಠ್ಯಾಧಾರಿತ ವಿಷಯ ಬೋಧನೆಯ ಜೊತೆಗೆ, ರಂಗಭೂಮಿಯ ಪ್ರಾಥಮಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು ನೀಡಲಾಗುವುದು.
ರಂಗಾಯಣದ ಸಂಚಾರಿ ರಂಗಘಟಕಕ್ಕೆ (ಮಿನಿ ರೆಪರ್ಟರಿ) ಪ್ರತಿವರ್ಷ 15 ಜನ ಕಲಾವಿದರನ್ನು ಆಯ್ಕೆ ಮಾಡುವಾಗ ರಂಗಾಯಣದಲ್ಲಿ ರಂಗಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಬೋಧನೆಯ ಮಾಧ್ಯಮ:
ರಂಗಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡಲಾಗುವುದು. ಅಗತ್ಯವಿದ್ದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಲಾಗುವುದು. ವಿದ್ಯಾರ್ಥಿಗಳು ಕನ್ನಡದಲ್ಲಿ ವ್ಯವಹರಿಸುವುದು ಅನಿವಾರ್ಯ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 25,2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 10,2020
ಆಯ್ಕೆ ವಿಧಾನ:
ಅಭ್ಯರ್ಥಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಸಂದರ್ಶನಕ್ಕಾಗಿ ಕರೆಯಲಾಗುವುದು. ಮುಕ್ತ ಸಂದರ್ಶನದ ಮೂಲಕ ವಿದ್ಯಾರ್ಥಿಗಳ ಆಯ್ಕೆಯನ್ನು ಮಾಡಲಾಗುವುದು. ವಿದ್ಯಾರ್ಥಿಯ ಪ್ರತಿಭೆ ಮತ್ತು ರಂಗಾಸಕ್ತಿಯನ್ನು ಪ್ರಧಾನವಾಗಿ ಪರಿಗಣಿಸಲಾಗುವುದು. ಸರ್ಕಾರದ ನಿಯಮಾನುಸಾರ ಮೀಸಲಾತಿಯ ಕ್ರಮವನ್ನು ಅನುಸರಿಸಲಾಗುವುದು. ಅಭ್ಯರ್ಥಿಯು ತನ್ನ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಪ್ರವೇಶ ಪರೀಕ್ಷೆ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಪರೀಕ್ಷಿಸುವ ಸಂದರ್ಶನ ರೂಪದ್ದಾಗಿರುತ್ತದೆ.
ಪ್ರತಿ ವರ್ಷದಂತೆ ಈ ವರ್ಷ ಗರಿಷ್ಠ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಸಂದರ್ಶನದ ದಿನ ಮಧ್ಯಾಹ್ನ ಲಘುಉಪಹಾರದ ವ್ಯವಸ್ಥೆಯನ್ನು ಮಾತ್ರ ರಂಗಾಯಣದಿಂದ ಮಾಡಲಾಗುವುದು. ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ. ಕೋವಿಡ್ ನಿರ್ಬಂಧಗಳ ಹಿನ್ನಲೆಯಲ್ಲಿ ಸರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕೋರ್ಸ್ ಆರಂಭವಾಗುವ ದಿನಾಂಕ ಮತ್ತು ಮುಕ್ತಾಯಗೊಳ್ಳುವ ದಿನಾಂಕವನ್ನು ನಿಗದಿಗೊಳಿಸಲಾಗುವುದು.
ಅರ್ಜಿ ಶುಲ್ಕ:
ರಂಗಶಾಲೆಯ ಸಂದರ್ಶನಕ್ಕೆ ಅಗತ್ಯವಾದ ರಂಗ ಕೈಪಿಡಿ ಒಳಗೊಂಡಂತೆ ಡಿಪ್ಲೋಮಾ ಕೋರ್ಸ್ ಅರ್ಜಿ ಶುಲ್ಕ ಸಾಮಾನ್ಯ ವರ್ಗ 200/-ರೂ, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 150/-ರೂ ಗಳ ಡಿಡಿಯನ್ನು ಜಂಟಿ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು -570005 ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜುಲೈ 10.2020ರೊಳಗೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದು. ಅಥವಾ ಖುದ್ದಾಗಿ ರಂಗಾಯಣದ ಕಛೇರಿಗೆ ಜುಲೈ 10,2020ರ ಸಂಜೆ 5:30 ಗಂಟೆಯೊಳಗೆ ತಲುಪಿಸುವುದು.
ಅಂಚೆ ಮೂಲಕ ಅರ್ಜಿ ಕಳುಹಿಸುವವರು ನಿಮಗೆ ಕಛೇರಿಯಿಂದ ಕಳುಹಿಸಬೇಕಾಗಿರುವ ರಂಗಕೈಪಿಡಿ ಅಂಚೆ ವೆಚ್ಚ ರೂ.30/- ಅನ್ನು ಒಳಗೊಂಡ ಮೊತ್ತದ ಡಿ.ಡಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕದಿಂದ 10 ದಿನದೊಳಗೆ ಸಂದರ್ಶನದ ದಿನಾಂಕವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುವುದು.
ರಂಗಶಿಕ್ಷಣಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಪ್ರಾಯೋಗಿಕ ತರಬೇತಿಗಳ ನಿರ್ವಹಣಾ ವೆಚ್ಚವಾಗಿ ರೂ. 3,000/- (ಸಾಮಾನ್ಯ ವರ್ಗ) ಹಾಗೂ 2,000/-ರೂ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ) ಗಳನ್ನು ಪ್ರವೇಶಾತಿಯ ಸಂದರ್ಭದಲ್ಲಿ ಮೂಲ ದಾಖಲೆಗಳೊಂದಿಗೆ ಪಾವತಿಸಬೇಕು. ಅಲ್ಲದೆ ಮಾನ್ಯತೆ ನೀಡಿರುವ ವಿಶ್ವವಿದ್ಯಾನಿಲಯವು ನಿಗದಿಪಡಿಸುವ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳೇ ಭರಿಸಬೇಕು.
ಅಭ್ಯರ್ಥಿಗಳಿಗೆ ರಂಗಾಯಣ ಒದಗಿಸುವ ಸೌಲಭ್ಯಗಳು:
ಆಯ್ಕೆಯಾದ ಅಭ್ಯರ್ಥಿಗೆ ಕೋರ್ಸಿನ ಒಂದು ವರ್ಷಕ್ಕೆ ಉಚಿತವಾಗಿ ವಸತಿಯನ್ನು ಒದಗಿಸಲಾಗುವುದು. ಮಾಹೆಯಾನ ಅಭ್ಯರ್ಥಿಗೆ ರೂ.3,000/- ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಮತ್ತು ಊಟೋಪಚಾರಕ್ಕಾಗಿ 2,000/-ರೂ ಗಳನ್ನು ನೀಡಲಾಗುವುದು.
ಪರೀಕ್ಷಾ ವಿಧಾನ:
ಆಂತರಿಕ ಮೌಲ್ಯಮಾಪನವನ್ನು ತರಗತಿ ನಡೆಸುವ ಅಧ್ಯಾಪಕರು ನಡೆಸುತ್ತಾರೆ. ನಿಗದಿತ ಸಮಯದಲ್ಲಿ ವಿಷಯಾಧಾರಿತ ಬರವಣಿಗೆ, ಗುಂಪು ಚಟುವಟಿಕೆಯಲ್ಲಿ ಭಾಗವಹಿಸುವಿಕೆ, ಅಭಿನಯ, ಶಿಸ್ತುಪಾಲನೆ ಮುಂತಾದ ವಿಷಯಗಳ ಕುರಿತು ನಡೆಸಲಾಗುವುದು. ವರ್ಷಾಂತ್ಯದಲ್ಲಿ ವಿಶ್ವವಿದ್ಯಾಲಯದ ನಿಯಮಾನುಸಾರ ಪರೀಕ್ಷೆಯನ್ನು ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.
ತರಬೇತಿ ಶುಲ್ಕ:
ಭಾರತೀಯ ರಂಗಶಿಕ್ಷಣ ಕೇಂದ್ರವು ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯವು ಸೂಚಿಸುವ ಪ್ರವೇಶ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ಶಾಲೆಯ ವೇಳಾಪಟ್ಟಿ:
ಈ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಯು ರಂಗಾಯಣ ಒದಗಿಸುವ ವಸತಿಗೃಹದಲ್ಲಿ ವಾಸಿಸಬೇಕು. ಶಾಲೆಯ ವೇಳೆ, ವಿರಾಮಗಳು ಸೇರಿದಂತೆ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತರಗತಿಗಳು ನಡೆಯುವುದು. ಅವಶ್ಯವಿದ್ದಲ್ಲಿ ಸಂದರ್ಭಾನುಸಾರ ಬದಲಾವಣೆಯನ್ನು ಮಾಡಲಾಗುವುದು.
ಅರ್ಜಿ ಪಡೆಯುವ ಮತ್ತು ಸಲ್ಲಿಸುವ ವಿಧಾನ:
ರಂಗಾಯಣದ ವೆಬ್ಸೈಟ್ www.rangayana.org ನ ಮೂಲಕ ಡೌನ್ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿ.ಡಿ. ಮೂಲಕ ನಿರ್ದೇಶಕರು, ರಂಗಾಯಣ, ಕಲಾಮಂದಿರ, ಹುಣಸೂರು ರಸ್ತೆ, ಮೈಸೂರು-5, ಇವರ ಹೆಸರಿಗೆ ಪಡೆದು ನಿಗದಿತ ದಿನಾಂಕದೊಳಗೆ ರಂಗಾಯಣ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಸಲ್ಲಿಸಬಹುದಾಗಿದೆ ಅಥವಾ ಖುದ್ದಾಗಿ ಕಚೇರಿ ಅವಧಿಯಲ್ಲಿ ಬಂದು ಸಲ್ಲಿಸಬಹುದಾಗಿದೆ. ಅಪೂರ್ಣ ಮಾಹಿತಿ ಇರುವ ಹಾಗೂ ಸೂಕ್ತ ದಾಖಲೆ ಇಲ್ಲದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿಯೊಂದಿಗೆ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಸಹಿ ಪಡೆದು ಸಲ್ಲಿಸುವುದು.
ವಿದ್ಯಾರ್ಹತೆಯ ಪ್ರಮಾಣಪತ್ರ ಜಾತಿಯ ಪ್ರಮಾಣ ಪತ್ರ
ವಯಸ್ಸನ್ನು ದೃಢೀಕರಿಸುವ ಪ್ರಮಾಣಪತ್ರ
ನಾಲ್ಕು ಸ್ಟಾಂಪ್ ಸೈಜಿನ ಹಾಗೂ ಒಂದು ಪಾಸ್ಪೋರ್ಟ್ ಸೈಜಿನ ಭಾವಚಿತ್ರ
ರೂ.5/-ಗಳ ಅಂಚೆಚೀಟಿ ಅಂಟಿಸುವ ಸ್ವವಿಳಾಸವಿರುವ ಲಕೋಟೆ, ಜೊತೆಗಿರಬೇಕು.
ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಹೆಚ್ಚಿನ ವಿವರಕ್ಕಾಗಿ ರಂಗಾಯಣ ಕಚೇರಿಯ ವೇಳೆಯಲ್ಲಿ ಸಂಪರ್ಕಿಸುವುದು. ದೂರವಾಣಿ: 0821-2512639
ಅಭ್ಯರ್ಥಿಗಳು ಪ್ರವೇಶಾತಿ ಬಗೆಗೆ ಅಧಿಕೃತ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ