ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಿರ್ಧಾರ ಕೈಗೊಂಡಿದೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್-ಏಪ್ರಿಲ್ 2022 ರ ಪೂರ್ವಸಿದ್ಧತಾ ಮತ್ತು ಅಂತಿಮ ಪರೀಕ್ಷೆಗಳನ್ನು ನಡೆಸಲು ಇತ್ತೀಚೆಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು ಅದರಲ್ಲಿ ಬದಲಾವಣೆಯನ್ನು ಕುರಿತು ತಿಳಿಸಲಾಗಿದೆ.
ಕೋವಿಡ್-19 ಕಾರಣಕ್ಕೆ 2020-2021ನೇ ಸಾಲಿನಲ್ಲಿ ಪಠ್ಯಕ್ರಮವು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಹುಆಯ್ಕೆ ಪ್ರಶ್ನೆಗಳನ್ನೊಳಗೊಂಡ ಪರೀಕ್ಷೆಯನ್ನು ಜಾರಿಗೊಳಿಸಲಾಗಿತ್ತು.
ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ನಿರ್ಧಾರ :
ಈ ವರ್ಷ ಕೂಡ ಬಹು ಆಯ್ಕೆ ಪ್ರಶ್ನೆಗಳುಳ್ಳ ಪರೀಕ್ಷೆಯನ್ನು ನಡೆಸಲು ಚಿಂತನೆ ನಡೆಸಲಾಗಿತ್ತು. ಆದರೆ ಶಿಕ್ಷಕರು ಮತ್ತು ತಜ್ಞರ ಅಭಿಪ್ರಾಯಗಳನ್ನು ಪಡೆದು ಬಹು ಆಯ್ಕೆಯ ಪ್ರಶ್ನೆಗಳನ್ನು ಕೈಬಿಡಲಾಗಿದೆ. ವಿದ್ಯಾರ್ಥಿಗಳ ಹಿತಾಸಕ್ತಿಯಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವರವಾಗಿ ಉತ್ತರ ಬರೆಯುವ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಮತ್ತು ಅವರ ಆಲೋಚನಾ ಕ್ರಮ ಇನ್ನಷ್ಟು ವೃದ್ಧಿಯಾಗುತ್ತದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ವಿಷಯಗಳಿಗೆ ನೀಡುವ ಅಂಕಗಳು ಹೀಗಿವೆ :
ಪ್ರಥಮ ಭಾಷೆಯನ್ನು ಹೊರತುಪಡಿಸಿ ಕೋರ್ ವಿಷಯಗಳಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ 80 ಅಂಕಗಳಿಗೆ ಥಿಯರಿ ಮತ್ತು 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗೆ ಮಾತ್ರ 125 ಅಂಕಗಳನ್ನು ನೀಡಲಾಗಿದೆ.
ವಿದ್ಯಾರ್ಥಿಗಳ ಮಿಶ್ರ ಪ್ರತಿಕ್ರಿಯೆ :
ಪರೀಕ್ಷಾ ಮಾದರಿ ಬದಲಾವಣೆಗೆ ಸಂಬಂಧಿಸಿದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರೆ ಮತ್ತು ಇನ್ನೂ ಕೆಲವು ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ.
ಸರ್ಕಾರ ನಡೆಸುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಈ ಮುಂಚೆ ಇದ್ದ ಪರೀಕ್ಷಾ ಮಾದರಿಯೇ ಅನುಕೂಲವಾಗಿತ್ತು ಎಂದು 10ನೇ ತರಗತಿ ವಿದ್ಯಾರ್ಥಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಬರೆವಣಿಗೆ ಕೌಶಲ್ಯ ಅಭಿವೃದ್ಧಿ :
ಮಕ್ಕಳಲ್ಲಿ ಬರವಣಿಗೆ ಕೌಶಲ ಮತ್ತು ಜ್ಞಾನಮಟ್ಟ ಬೆಳೆಯುವುದು ಮುಖ್ಯ. ಬಹು ಆಯ್ಕೆ ಪ್ರಶ್ನೆಗಳಿಂದ ವಿದ್ಯಾರ್ಥಿಗಳು ಬರೆಯುವುದನ್ನು ಮರೆಯುತ್ತಾರೆ. ವಿದ್ಯಾರ್ಥಿಗಳು ವಿಷಯದ ವಿಶ್ಲೇಷನೆ ನಡೆಸಿ ಬರೆಯುವುದು ಮುಖ್ಯವಾಗಬೇಕು ಎಂದು ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.