ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆ.ಎಸ್.ಐ.ಎಸ್.ಎಫ್) ಸಬ್ ಇನ್ಸ್ಪೆಕ್ಟರ್ (ಪುರುಷ ಮತ್ತು ಮಹಿಳಾ) ಮತ್ತು ವಿಶೇಷ ಮೀಸಲು ಸಬ್-ಇನ್ಸ್ಪೆಕ್ಟರ್ (ಕೆಎಸ್ಆರ್ಪಿ) (ಪುರುಷ) ಹುದ್ದೆಗಳ ನೇಮಕಾತಿಗೆ ಇದೆ ಭಾನುವಾರ ಲಿಖಿತ ಪರೀಕ್ಷೆಗಳು ನಡೆಯಲಿದೆ.
ಅಭ್ಯರ್ಥಿಯು ಸಹಿಷ್ಣುತೆ, ದೇಹದಾರ್ಢ್ಯತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಉತ್ತೀರ್ಣರಾದರೆ ಮಾತ್ರ ಲಿಖಿತ ಪರೀಕ್ಷೆಗೆ ಕರೆಯಲಾಗುವುದು.
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಆಯ್ಕೆ ಸಮಿತಿ ನಿಗದಿಪಡಿಸುವ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು.
ಲಿಖಿತ ಪರೀಕ್ಷೆಗೆ ತರಬೇಕಾದ ದಾಖಲಾತಿಗಳು
- ಲಿಖಿತ ಪರೀಕ್ಷೆಯ ಕರೆಪತ್ರ
- ಸಹಿಷ್ಣುತೆ, ದೇಹದಾರ್ಢ್ಯತೆ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆಯ ಫಲಿತಾಂಶ ಹಾಳೆ
- ಗುರುತಿನ ಚೀಟಿ
- ಆನ್ಲೈನ್ ಅರ್ಜಿಯ ಜೆರಾಕ್ಸ್ ಪ್ರತಿ
ಲಿಖಿತ ಪರೀಕ್ಷೆಯು ಪದವಿ ಮಟ್ಟದ ಎರಡು ಪತ್ರಿಕೆಗಳದ್ದಾಗಿರುತ್ತದೆ
ಪತ್ರಿಕೆ-1
ಈ ಪತ್ರಿಕೆಯು ಎರಡು ಭಾಗಗಳನ್ನೊಳಗೊಂಡಿರುತ್ತದೆ. ಒಂದನೇ ಭಾಗವು ಕನ್ನಡ ಅಥವಾ ಇಂಗ್ಲೀಷ್ನಲ್ಲಿ ಪ್ರಬಂಧ ಬರೆಯುವುದು. ಇದಕ್ಕೆ 30 ಅಂಕಗಳು ಮತ್ತು ಎರಡನೇ ಭಾಗವು ವಾಕ್ಯಗಳನ್ನು ಕನ್ನಡ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಹಾಗು ಇಂಗ್ಲೀಷ್ ಭಾಷೆಯಿಂದ ಕನ್ನಡ ಭಾಷೆಗೆ ಭಾಷಾಂತರಿಸುವುದು, ಇದಕ್ಕೆ 20 ಅಂಕಗಳು.
ಈ ಪರೀಕ್ಷೆಯ ಅವಧಿ ಒಂದು ಗಂಟೆಯದಾಗಿದ್ದು, ಒಟ್ಟು 50 ಅಂಕಗಳನ್ನು ಹೊಂದಿರುತ್ತದೆ. (30 ಅಂಕಗಳು ಪ್ರಬಂಧಕ್ಕೆ ಮತ್ತು 20 ಅಂಕಗಳು ಭಾಷಾಂತರಕ್ಕೆ) ಇದರಲ್ಲಿ ಕನಿಷ್ಟ ಅಂಕಗಳು ಇರುವುದಿಲ್ಲ.
ಪತ್ರಿಕೆ-2
ಈ ಪ್ರಶ್ನೆ ಪತ್ರಿಕೆಯು ಸಾಮಾನ್ಯ ಅಧ್ಯಯನದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ (i) ಸಾಮಾನ್ಯ ಜ್ಞಾನವು (ಎ) ವಿಜ್ಞಾನ (ಬಿ) ಭೂಗೋಳ (ಸಿ) ಆಧುನಿಕ ಭಾರತೀಯ ಇತಿಹಾಸ,ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ (ಡಿ) ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾತ್ಮಕ ತತ್ವಗಳನ್ನು ಒಳಗೊಂಡಿರುತ್ತದೆ. (ii) ಸಾಮಾನ್ಯ ಮಾನಸಿಕ ಸಾಮರ್ಥ್ಯವು (ಎ) ಗಣನಾ ಕೌಶಲ್ಯ (ಬಿ) ಪ್ರಾದೇಶಿಕ ಮನ್ನಣೆ ಕೌಶಲ್ಯ (ಸಿ) ಗ್ರಹಿಸುವಿಕೆ (ಡಿ) ತೀರ್ಮಾನ (ಇ) ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ (ಎಫ್) ನೈತಿಕ ಶಿಕ್ಷಣವನ್ನು ಒಳಗೊಂಡಿರುತ್ತದೆ.
ಇದು ಬಹುವಿಧ ಆಯ್ಕೆಯ ವಸ್ತುನಿಷ್ಠ ಮಾದರಿಯದಾಗಿದ್ದು, ಒಂದು ನೂರ ಐವತ್ತು ಅಂಕಗಳ ಒಂದೂವರೆ ಗಂಟೆಯ ಪರೀಕ್ಷೆಯಾಗಿರುತ್ತದೆ.
ಅಭ್ಯರ್ಥಿಗಳು ಪತ್ರಿಕೆ-1 ರಲ್ಲಿನ ಪ್ರಬಂಧ ಬರಹವನ್ನ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಉತ್ತರಿಸಬಹುದು.
ಪ್ರಶ್ನೆ ಪತ್ರಿಕೆ 2 ವಸ್ತುನಿಷ್ಠ (ಆಬ್ಜೆಕ್ಟಿವ್) ಮಾದರಿಯದಾಗಿರುತ್ತದೆ. ಕಪ್ಪು ಅಥವಾ ನೀಲಿ ಬಾಲ್ ಪಾಯಿಂಟ್ ಪೆನ್ ಮೂಲಕ ಮಾತ್ರ ಉತ್ತರಿಸಸಬೇಕಾಗುತ್ತದೆ.
ಒಎಂಆರ್ ತುಂಬಲು ಬಾಲ್ ಪೆನ್ ಬಳಸುವುದೇಕೆ?
ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನು / ಟ್ಯಾಬಲೆಟ್ / ಐ-ಪೋಡ್ಗಳನ್ನು ನಿಷೇಧಿಸಲಾಗಿದೆ. ಇಲೆಕ್ಟ್ರಾನಿಕ್ ಸಾಮಗ್ರಿಗಳಾದ ಪೇಜರ್, ಕ್ಯಾಲ್ಕುಲೇಟರ್ ಇತ್ಯಾದಿಗಳನ್ನು ಪರೀಕ್ಷಾ ಕೊಠಡಿಗೆತೆಗೆದುಕೊಂಡು ಹೋಗುವುದನ್ನು ನಿಷೇದಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಂಖ್ಯೆ, ರೋಲ್ ನಂಬರ್ ಇತ್ಯಾದಿ ಭರ್ತಿ ಮಾಡಿದ ನಂತರ ನಿಗದಿತ ಜಾಗದಲ್ಲಿ ತಪ್ಪದೇ ಸಹಿ ಮಾಡಬೇಕು ಮತ್ತು ಎಡಗೈ ಹೆಬ್ಬೆಟ್ಟಿನ ಗುರುತು ಹಾಕಬೇಕು ಇಲ್ಲವಾದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ.
ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನುಸಾರ ಹಾಗೂ ಅವರು ತೋರಿದ ಅರ್ಹತೆಗನುಗುಣವಾಗಿ 10 (ಹತ್ತು) ಅಂಕಗಳುಳ್ಳ ಮೌಖಿಕ ಪರೀಕ್ಷೆ / ವ್ಯಕ್ತಿತ್ವದ ಪರೀಕ್ಷೆಗೆ ಪ್ರತಿ ಗುಂಪು/ಜಾತಿ/ಪಂಗಡಗಳ ಅರ್ಹತೆ ಆಧಾರದ ಮೇಲೆ 1:2 ರ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ನೇಮಕಾತಿ ಸಮಿತಿಯ ಮುಂದೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.