ಕರ್ನಾಟಕ ಸರ್ಕಾರದ ಪ್ರತಿಷ್ಟಿತ ರಂಗಸಂಸ್ಥೆಯಾದ ರಂಗಾಯಣದ ರೆಪರ್ಟರಿಗೆ ಹೊಸ ಕಲಾವಿದರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
18 ರಿಂದ 40 ವರ್ಷದೊಳಗಿನ ಒಬ್ಬ ಮಹಿಳಾ ಕಲಾವಿದೆ ಮತ್ತು 3 ಜನ ಪುರುಷ ಕಲಾವಿದರನ್ನು ಒಂದು ವರ್ಷದ ಅವಧಿಗೆ ಮಾಸಿಕ ರೂ.12000/- ಗಳು ಗುತ್ತಿಗೆ ಸಂಭಾವನೆ ಮೂಲಕ ತೆಗೆದುಕೊಳ್ಳಲಾಗುವುದು.
ಎನ್ ಎಸ್ ಡಿ, ರಂಗಾಯಣ, ನೀನಾಸಂ ಹಾಗೂ ಇತರೆ ರಂಗ ತರಬೇತಿ ಸಂಸ್ಥೆಗಳಿಂದ ಡಿಪ್ಲೊಮಾ ಪದವಿ ಪಡೆದಿರುವ ಅಥವಾ ಹವ್ಯಾಸಿ ರಂಗತಂಡಗಳಲ್ಲಿ 10 ವರ್ಷಗಳ ಅನುಭವ ಹೊಂದಿರುವ ಆಸಕ್ತರು ದಿನಾಂಕ: 28-07-2017 ರಂದು ಬೆಳಿಗ್ಗೆ 10:30 ಗಂಟೆಗೆ ರಂಗಾಯಣದಲ್ಲಿ ನಡೆಯುವ ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಲು ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರ 1989ರಲ್ಲಿ ಅಸ್ತಿತ್ವಕ್ಕೆ ತಂದ ರಂಗಾಯಣ ದಿವಂಗತ ಬಿ.ವಿ. ಕಾರಂತರ ಕನಸಿನ ಕೂಸು. ರಂಗಾಯಣ ಬಿ.ವಿ. ಕಾರಂತರ ಕಲ್ಪನೆ, ಕನಸು, ಹಾಗೂ ಪ್ರತಿಜ್ಞೆಗಳನ್ನು ಒಳಗೊಂಡ ಕಲಾವಿದರು, ತಾಂತ್ರಿಕವರ್ಗ, ಮತ್ತು ಸಿಬ್ಬಂದಿಗಳ ಶ್ರಮದಿಂದ ಅರಳಿ ನಿಂತಿದೆ. ಕಾರಂತರ ನಂತರ ಸಿ. ಬಸವಲಿಂಗಯ್ಯ, ಪ್ರಸನ್ನ, ಮತ್ತು ಚಿದಂಬರರಾವ್ ಜಂಬೆ ನಿರ್ದೇಶಕರಾಗಿದ್ದು ಕಾರಂತರ ಕಸನನ್ನು ನನಸು ಮಾಡುವಲ್ಲಿ ಬಹಳಷ್ಟು ದುಡಿದಿದ್ದಾರೆ.
ಸಮಾಜವನ್ನು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸದೃಢಗೊಳಿಸುವಲ್ಲಿ ರಂಗಾಯಣ ಮಹತ್ವದ ಪಾತ್ರವನ್ನು ವಹಿಸಿದೆ. ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ರಸಿಕವೃಂದ ಕಲಾರಾಧನೆಯಲ್ಲಿ ತೊಡಗಿಯೇ ಇದ್ದಿತು. ರಂಗಾಯಣ ಇಂಥ ರಸಿಕ ಮಂಡಲಿಯ ಚಿತ್ತವನ್ನಾಕರ್ಷಿಸುವಲ್ಲಿ ಸಫಲತೆಯನ್ನು ಪಡೆದಿದೆ.
1994ರಲ್ಲಿ ರಂಗಸಮಾಜ ಅಸ್ತಿತ್ವಕ್ಕೆ ಬಂದಾಗಿನಿಂದ ರಂಗಾಯಣದ ಕಾರ್ಯ ಚಟುವಟಿಕೆಗಳಿಗೆ ಗರಿಮೂಡಿತು.
ರಂಗಸಮಾಜದ ಉದ್ದೇಶಗಳು
- ರಂಗಾಯಣದ ರೀತಿಯಲ್ಲೇ ಗುರಿ ಹೊಂದಿದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ಮಟ್ಟಕ್ಕೆ ರಂಗಾಯಣವನ್ನು ಕೊಂಡೊಯ್ಯುವುದು
- ರಂಗಾಯಣವನ್ನು ಕರ್ನಾಟಕದ ಪ್ರಾತಿನಿಧಿಕ ರೆಪರ್ಟರಿಯನ್ನಾಗಿ ರೂಪಿಸುವುದು
- 'ವನರಂಗ', 'ಮಿನಿ ರಂಗಮಂದಿರ', 'ದುಂಡು ಕಣ', ಮತ್ತು 'ಚಿಣ್ಣರ ರಂಗಭೂಮಿ'ಗಳನ್ನು ಸ್ಥಾಪಿಸುವುದು
- ರಂಗಭೂಮಿ ತಜ್ಞರು, ಸಂಶೋಧಕರು, ನಾಟಕಕಾರರು, ನಿರ್ದೇಶಕರು, ಕಲಾವಿದರು, ಹಾಗೂ ರಂಗತಂಡಗಳನ್ನು ಆಹ್ವಾನಿಸುವುದು; ರಂಗಶಿಬಿರಗಳು, ನಾಟಕ ರಚನೆ, ಮತ್ತು ನಿರ್ದೇಶನವನ್ನೇರ್ಪಡಿಸುವುದು; ವಿಚಾರ ಸಂಕಿರಣಗಳು, ಸಮ್ಮೇಳನಗಳು, ನಾಟಕೋತ್ಸವ, ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು
- ರಂಗಭೂಮಿಯಲ್ಲಿ ಆಸಕ್ತಿ ಇರುವವರನ್ನೆಲ್ಲ ಒಟ್ಟುಗೂಡಿಸಿ ತರಬೇತಿಯ ಮೂಲಕ ಅವರನ್ನು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು
- ರಂಗಭೂಮಿಗೆ ಸಂಬಂಧಿಸಿದ ಪರಿಕರಗಳ ಸಂಗ್ರಹಣೆ; ಲೇಖನಗಳು, ಪುಸ್ತಕಗಳು, ಹಾಗೂ ಪತ್ರಿಕೆಗಳಿಂದ ಸಂಶೋಧನೆಯನ್ನು ನಡೆಸುವುದು; ಹೊಸ ನಾಟಕಗಳನ್ನು ಪ್ರಕಟಿಸುವುದು; ಇತರ ಭಾಷೆಗಳಿಂದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವುದು
- 'ರಂಗ ಮಾಹಿತಿ ಕೇಂದ್ರ'ವನ್ನು ಸ್ಥಾಪಿಸುವುದು
- ಇದೇ ರೀತಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಕುದುರಿಸುವುದು
ಆರಂಭದಲ್ಲಿಯೇ ರಂಗಾಯಣದ ನಾಲ್ಕು ರೆಪರ್ಟರಿಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಯಿತು: ಮೈಸೂರು ರಂಗಾಯಣ, ಕರಾವಳಿ ರಂಗಾಯಣ, ಮಲೆನಾಡು ರಂಗಾಯಣ, ಮತ್ತು ಹೈದರಾಬಾದ್-ಕರ್ನಾಟಕ ರಂಗಾಯಣ. ಅವುಗಳನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯ ಸೊಗಡನ್ನು ಜೀವಂತವಾಗಿಡುವ ಪ್ರಯತ್ನ ಇದಾಗಿದೆ. ಶಿವಮೊಗ್ಗ, ಧಾರವಾಡ, ಮತ್ತು ಕಲಬುರಗಿ ರಂಗಾಯಣ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.