ಭಾರತದ 16 ವರ್ಷದ ಗ್ರ್ಯಾಂಡ್ಮಾಸ್ಟರ್ ರಮೇಶ್ಬಾಬು ಪ್ರಗ್ನಾನಂದ ಅವರು ಏರ್ಥಿಂಗ್ಸ್ ಮಾಸ್ಟರ್ಸ್ನ ಎಂಟನೇ ಸುತ್ತಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ. ಆನ್ಲೈನ್ ಕ್ಷಿಪ್ರ ಚೆಸ್ ಸ್ಪರ್ಧೆಯಲ್ಲಿ ಅವರ ವಿಜಯದ ನಂತರ ಸ್ಪೆಕ್ಟ್ರಮ್ನಾದ್ಯಂತ ಸೆಲೆಬ್ರಿಟಿಗಳು ಮತ್ತು ಚಿಂತಕರು ಹದಿಹರೆಯದ ಬಾಲಕನನ್ನು ಅಭಿನಂದಿಸಿದ್ದಾರೆ.
ಸತತವಾಗಿ ಮೂರು ಪಂದ್ಯಗಳಲ್ಲಿ ಗೆದ್ದಿದ್ದ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ 16 ವರ್ಷದ ಬಾಲಕ ಪ್ರಗ್ನಾನಂದ ಕೇವಲ 39 ನಡೆಗಳಲ್ಲಿ ಎದುರಾಳಿಯ ವಿರುದ್ಧ ಗೆದ್ದಿದ್ದಾನೆ. ಈ ಮೂಲಕ ವಿಶ್ವದ ನಂ. 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ರನ್ನು ಸೋಲಿಸಿದ ಭಾರತದ ಮೂರನೇ ಗ್ರಾಂಡ್ ಮಾಸ್ಟರ್ ಎಂಬ ಗೌರವಕ್ಕೆ ಪ್ರಗ್ನಾನಂದ ಪಾತ್ರರಾಗಿದ್ದಾನೆ. ಈ ಹಿಂದೆ ಭಾರತ ನಂ.1 ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಮತ್ತು ಪೆಂಡ್ಯಾಲ ಹರಿಕೃಷ್ಣ ಮಾತ್ರ ಮ್ಯಾಗ್ನಸ್ ಕಾರ್ಲ್ಸೆನ್ ರನ್ನು ಸೋಲಿಸಿದ್ದರು.
ಈ ಕುರಿತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, "ಪ್ರಗ್ನಾನಂದ ರಂತಹ ಅದ್ಭುತವಾದ ಪ್ರತಿಭೆಗಳು ಹುಟ್ಟಬೇಕು. ಅನುಭವಿ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ರನ್ನು ಸೋಲಿಸಿರುವುದು ನಿಜಕ್ಕೂ ಮಾಂತ್ರಿಕವಾಗಿದೆ. ಪ್ರಗ್ನಾನಂದನ ಮುಂದಿನ ದೀರ್ಘ ಮತ್ತು ಯಶಸ್ವಿ ಚೆಸ್ ವೃತ್ತಿಜೀವನಕ್ಕೆ ಶುಭಾಶಯಗಳು. ನೀವು ಭಾರತಕ್ಕೆ ಹೆಮ್ಮೆ ತಂದಿದ್ದೀರಿ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಗ್ನಾನಂದಾ ಅವರ ವಿಜಯವನ್ನು ಕಂಡು ಐದು ಬಾರಿ ವಿಶ್ವ ಚಾಂಪಿಯನ್ ಮತ್ತು ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ಆಗಿರುವವಿಶ್ವನಾಥನ್ ಆನಂದ್ ಅವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಗ್ನಾನಂದ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ.
ಪ್ರಗ್ನಾನಂದ ಯಾರು? :
ಆಗಸ್ಟ್ 10,2005 ರಂದು ಚೆನ್ನೈನಲ್ಲಿ ರಮೇಶ್ ಬಾಬು ಪ್ರಗ್ನಾನಂದ ಎಂದು ಜನಿಸಿದರು. ಅವರು ಪ್ರಸಿದ್ಧ ಭಾರತೀಯ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರ ಒಡಹುಟ್ಟಿದವರು. ಅಭಿಮನ್ಯು ಮಿಶ್ರಾ, ಗುಕೇಶ್ ಡಿ, ಸೆರ್ಗೆಯ್ ಕರ್ಜಾಕಿನ್ ಮತ್ತು ಜಾವೋಕಿರ್ ಸಿಂದರೋವ್ಟ್ ನಂತರ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ ಐದನೇ-ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಪ್ರಗ್ನಾನಂದ ಅವರು 2013 ರಲ್ಲಿ ವರ್ಲ್ಡ ಯೂತ್ ಚೆಸ್ ಚಾಂಪಿಯನ್ಶಿಪ್ ಅಂಡರ್-8 ಪ್ರಶಸ್ತಿಯನ್ನು ಗೆದ್ದರು. 7ನೇ ವಯಸ್ಸಿನಲ್ಲಿರುವಾಗಲೇ ಅವರಿಗೆ FIDE ಮಾಸ್ಟರ್ ಎಂಬ ಶೀರ್ಷಿಕೆಯನ್ನು ನೀಡಲಾಯಿತು. ಇದು ಗ್ರ್ಯಾಂಡ್ಮಾಸ್ಟರ್ ಮತ್ತು ಇಂಟರ್ನ್ಯಾಷನಲ್ ಮಾಸ್ಟರ್ಗಿಂತ ಕೆಳಗಿರುವ ಮುಕ್ತ ಪ್ರಶಸ್ತಿಯಾಗಿದೆ.
2016 ರಲ್ಲಿ 10 ವರ್ಷಗಳು, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಇವರದ್ದು. ನಂತರ 2018ರಲ್ಲಿ ರಷ್ಯಾದ ಚೆಸ್ ತಾರೆ ಸೆರ್ಗೆಯ್ ಕರ್ಜಾಕಿನ್ ನಂತರ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ್ದರು. ಇವರ FIDE ರೇಟಿಂಗ್ 2612 ಇದ್ದು, ಜುಲೈ 2019 ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದ ಎಕ್ಸ್ಟ್ರಾಕಾನ್ ಚೆಸ್ ಓಪನ್ನಲ್ಲೂ ಪರಾಕ್ರಮ ಮೆರೆದಿದ್ದರು. ಇಲ್ಲಿ 8½/10 ಅಂಕಗಳನ್ನು (+7-0=3) ಗಳಿಸಿದರು. ಅಲ್ಲದೇ 18 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್ ಶಿಪ್ ಗಳನ್ನು 9/11 ಅಂಕಗಳೊಂದಿಗೆ ಜಯಿಸಿದ ಸಾಧನೆ ಮಾಡಿದ್ದಾರೆ.
ಏಪ್ರಿಲ್ 2021 ರಲ್ಲಿ ಯುವ ಪ್ರತಿಭೆಗಳಿಗಾಗಿ ಜೂಲಿಯಸ್ ಬೇರ್ ಗ್ರೂಪ್ ಮತ್ತು ಚೇಸ್24.ಕಾಮ್ ಆಯೋಜಿಸಿದ ಆನ್ಲೈನ್ ಈವೆಂಟ್ ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್ನ ಮೊದಲ ಲೆಗ್ (ನಾಲ್ಕರಲ್ಲಿ) ಅವರು ಫೋಲ್ಗರ್ ಚಾಲೆಂಜ್ ಅನ್ನು ಗೆದ್ದಿದ್ದರು. ಪ್ರಗ್ನಾನಂದ ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022ರ ಮಾಸ್ಟರ್ಸ್ ವಿಭಾಗದಲ್ಲಿ ಆಡಿದ್ದರು. ಅಲ್ಲಿ ಆಂಡ್ರೆ ಎಸಿಪೆಂಕೊ, ವಿದಿತ್ ಗುಜರಾತಿ ಮತ್ತು ನಿಲ್ಸ್ ಗ್ರಾಂಡೆಲಿಯಸ್ ವಿರುದ್ಧದ ಪಂದ್ಯಗಳನ್ನು ಗೆದ್ದಿದ್ದರು. ನಂತರ ಅಂತಿಮ ಸ್ಕೋರ್ 5.5 ನೊಂದಿಗೆ 12ನೇ ಸ್ಥಾನ ಪಡೆದಿದ್ದರು.
ಪ್ರಗ್ನಾನಂದ ಅವರ ಹಿರಿಯ ಸಹೋದರಿ ವೈಶಾಲಿ ಕೂಡ ಅತ್ಯಂತ ಶ್ರೇಷ್ಠಆಟಗಾರ್ತಿ ಆಗಿದ್ದು (IM ಮತ್ತು ಮಹಿಳಾ ಗ್ರ್ಯಾಂಡ್ ಮಾಸ್ಟರ್) ಈಗಾಗಲೇ 12 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಶಿಪ್ ಪದಕಗಳನ್ನು ಗೆದ್ದಿದ್ದಾರೆ. ಪ್ರಸ್ತುತ 21 ವರ್ಷ ವಯಸ್ಸಿನ ಅವರು ಹಿರಿಯರಲ್ಲಿ (ಮಹಿಳಾ ವಿಭಾಗ) ಭಾರತದ ನಂ. 4 ಆಟಗಾರ್ತಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮದಿಂದ ದೂರವಿರುವ ಪ್ರಗ್ನಾನಂದ :
ಇಎಸ್ಪಿಎನ್ನ ವರದಿಯ ಪ್ರಕಾರ ಪ್ರಗ್ನಾನಂದ ಅವರು ಸಾಮಾಜಿಕ ಮಾಧ್ಯಮದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಅವರ ತರಬೇತುದಾರ ಆರ್ಬಿ ರಮೇಶ್ ಹೇಳುವ ಪ್ರಕಾರ ಸಾಮಾಜಿಕ ಮಾಧ್ಯಮಗಳ ವೀಕ್ಷಣೆ ಮಾಡದಿರುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
"ನಿರೀಕ್ಷೆಯ ಹೊರೆ ಕೆಲವೊಮ್ಮೆ ಅವನಿಗೆ ಭಾರವೆನಿಸಬಹುದು ಆದರೆ ಆತ ಕೇವಲ 16 ವರ್ಷ ವಯಸ್ಸಿನವನಾಗಿರುವಾಗಲೇ ಕೆಲವು ಉನ್ನತ ವ್ಯಕ್ತಿಗಳ ವಿರುದ್ಧ ಹೇಗೆ ತನ್ನನ್ನು ತಾನು ನಿಭಾಯಿಸಿದ್ದಾನೆ ಎಂಬುದರ ಬಗ್ಗೆ ನನಗೆ ತುಂಬಾ ಖುಷಿಯಿದೆ" ಎಂದು ಆರ್ಬಿ ರಮೇಶ್ ಹೇಳಿದ್ದಾರೆಂದು ಇಎಸ್ಪಿಎನ್ ಉಲ್ಲೇಖಿಸಿದೆ.