2018 ರ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಅವಧಿಗೆ ಮುನ್ನವೇ ನಡೆಯುವ ಸಾಧ್ಯತೆ ಇದೆ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಲಿದೆ.
ಸರ್ವ ಶಿಕ್ಷಣ ಅಭಿಯಾನದಲ್ಲಿ ಹಿಂದೆ ಬಿದ್ದ ಕರ್ನಾಟಕ
ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನಾಂಕ ಕುರಿತು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಮಾಲೋಚನೆ ನಡೆಸುತ್ತಿದ್ದು,ಈ ಸಂಬಂಧ ಕೇಂದ್ರ ಚುನಾವಣೆ ಆಯೋಗದ ಸಲಹೆ ಪಡೆದು ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ.
ಚುನಾವಣೆ ಎಫೆಕ್ಟ್
ಕಾಂಗ್ರೆಸ್ ಸರಕಾರದ ಅವಧಿ ಮುಂದಿನ ವರ್ಷ ಮೇ 13ಕ್ಕೆ ಪೂರ್ಣಗೊಳ್ಳಲಿದೆ. ಅದಕ್ಕೂ ಮುನ್ನವೇ ಏಪ್ರಿಲ್ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಬೇಕಿದೆ. ಇಡೀ ತಿಂಗಳು ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ಚುನಾವಣೆ ಕೆಲಸಕ್ಕೆ ಶಿಕ್ಷಕರು ಹಾಗೂ ಶಾಲಾ ಕೊಠಡಿಗಳನ್ನು ಬಳಸಲಾಗುತ್ತದೆ.
ಚುನಾವಣೆ ಸಿದ್ಧತೆ ಮಧ್ಯೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದರಿಂದ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಆಲೋಚನೆ ಹಿನ್ನೆಲೆಯಲ್ಲಿ ಮಾರ್ಚ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಸುವ ಕುರಿತು ಚಿಂತನೆ ನಡೆದಿದೆ. ಆದರೆ, ದ್ವಿತೀಯ ಪಿಯುಸಿಗೆ ಸಾಮಾನ್ಯವಾಗಿ ಮಾರ್ಚ್ನಲ್ಲೇ ಪರೀಕ್ಷೆ ನಡೆಯಲಿರುವುದರಿಂದ ಬದಲಾವಣೆ ಸಾಧ್ಯತೆ ಕಡಿಮೆ.
ಚುನಾವಣೆ ಆಯೋಗದ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಒಂದೆರಡು ದಿನಗಳಲ್ಲಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.
ಪಿಯು ಮಂಡಳಿ ನಿರ್ದೇಶಕರ ಪ್ರತಿಕ್ರಿಯೆ
ಪರೀಕ್ಷೆ ದಿನಾಂಕ ನಿಗದಿಪಡಿಸುವ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ. ಈಗಲೇ ಪರೀಕ್ಷೆ ವೇಳಾಪಟ್ಟಿ ನಿಗದಿ ಬಗ್ಗೆ ಏನನ್ನೂ ಹೇಳಲಾಗದು ಎಂದು ಪಿಯು ಮಂಡಳಿ ನಿರ್ದೇಶಕಿ ಸಿ. ಶಿಖಾ ಪ್ರತಿಕ್ರಿಯಿಸಿದ್ದಾರೆ.