388 ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಯಲ್ಲಿ ವಿಳಂಬವಾಗಿರುವುದು ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ.
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿ ವಾಣಿಜ್ಯ ತೆರಿಗೆ ಇಲಾಖೆ ಆಯ್ಕೆ ಮಾಡಿಕೊಂಡ 388 ಅಭ್ಯರ್ಥಿಗಳಿಗೆ ಇನ್ನು ನೇಮಕಾತಿ ಆದೇಶ ಸಿಕ್ಕಿಲ್ಲ.
ಹುದ್ದೆಗಳ ನೇಮಕಾತಿ
ರಾಜ್ಯ ಸಚಿವಾಲಯ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಫ್ಡಿಎ 1,742 ಮತ್ತು ಎಸ್ಡಿಎ 2,382 ಖಾಲಿ ಹುದ್ದೆಗಳ ನೇಮಕಾತಿಗೆ 2015ರ ಜೂನ್ನಲ್ಲಿ ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ), 2016ರ ಅ. 18ರಂದು ಪ್ರಕ್ರಿಯೆ ಪೂರ್ಣಗೊಳಿಸಿ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಅವುಗಳಲ್ಲಿ ಬಹುತೇಕ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು ವಾಣಿಜ್ಯ ತೆರಿಗೆ ಇಲಾಖೆಯ ನೇಮಕಾತಿ ಮಾತ್ರ ಇನ್ನು ಪೂರ್ಣಗೊಳ್ಳದೆ ಹಾಗೇ ಉಳಿದಿದೆ.
ನೇಮಕಾತಿ ವಿಳಂಬಕ್ಕೆ ಕಾರಣ
ಸಿಂಧುತ್ವ ಪ್ರಮಾಣ ಪತ್ರವೇ ನೇಮಕಾತಿ ವಿಳಂಬಕ್ಕೆ ಮುಖ್ಯ ಕಾರಣ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ರಿತ್ವಿಕ್ ಪಾಂಡೆ ತಿಳಿಸಿದ್ದಾರೆ.
ಇಲಾಖೆಯನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇನ್ನೂ ಎಲ್ಲ ಅಭ್ಯರ್ಥಿಗಳ ಪ್ರಮಾಣ ಪತ್ರ ಬಂದಿಲ್ಲ. ಎಲ್ಲರ ಸಿಂಧುತ್ವ ಪ್ರಮಾಣ ಪತ್ರ ತಲುಪದೆ ನೇಮಕಾತಿ ಪತ್ರ ನೀಡಲು ಸಾಧ್ಯ ಇಲ್ಲ. ಒಂದೊಮ್ಮೆ ನೀಡಿದರೆ ಸೇವಾ ಹಿರಿತನದಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ರಿತ್ವಿಕ್ ಪಾಂಡೆ ತಿಳಿಸಿದ್ದಾರೆ.
ಅಭ್ಯರ್ಥಿಗಳ ಅಳಲು
"ನಮ್ಮ ಜೊತೆ ಆಯ್ಕೆಯಾಗಿ ಕೆಪಿಎಸ್ಸಿ, ಅಲ್ಪಸಂಖ್ಯಾತ ನಿರ್ದೇಶನಾಲಯ, ಪೌರಾಡಳಿತ, ಆಹಾರ, ನ್ಯಾಯಾಂಗ ಇಲಾಖೆ ಆರಿಸಿಕೊಂಡ ಅಭ್ಯರ್ಥಿಗಳಿಗೆ ಆಯಾ ಇಲಾಖೆಗಳು ಷರತ್ತುಗಳನ್ನು ವಿಧಿಸಿ ಈಗಾಗಲೇ ನೇಮಿಸಿಕೊಂಡಿವೆ. ಅವರೆಲ್ಲ ಮೂರು ತಿಂಗಳಿಂದ ವೇತನ ಕೂಡಾ ಪಡೆಯುತ್ತಿದ್ದಾರೆ. ಆದರೆ ನಮಗೆ ಮಾತ್ರ ದಿನಕ್ಕೊಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಸರ್ಕಾರಿ ಹುದ್ದೆಗೆ ಆಯ್ಕೆಯಾದ ಖುಷಿಯಲ್ಲಿ ನಾವು ಇದ್ದ ಖಾಸಗಿ ಕೆಲಸ ಬಿಟ್ಟು ನೇಮಕಾತಿ ಆದೇಶ ಪತ್ರ ಇಂದು ಬರಬಹುದು, ನಾಳೆ ಬರಬಹುದು ಎಂದು ಕಾಯುತ್ತಿದ್ದೇವೆ" ಎಂದು ಕೆಲವು ಅಭ್ಯರ್ಥಿಗಳು ಹೇಳಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಎಫ್ಡಿಎ ಹುದ್ದೆಗೆ 178 ಮತ್ತು ಎಸ್ಡಿಎ ಹುದ್ದೆಗೆ 210 ಮಂದಿ ಆಯ್ಕೆಯಾಗಿದ್ದಾರೆ. ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳು ನೇಮಕಾತಿ ಆದೇಶ ನೀಡದೆ ಸತಾಯಿಸುತ್ತಿದ್ದಾರೆ ಎನ್ನುವುದು ಅಭ್ಯರ್ಥಿಗಳ ಆರೋಪ.
'ಸಿಂಧುತ್ವ ಪ್ರಮಾಣ ಪತ್ರ ಬಂದ ಅಭ್ಯರ್ಥಿಗಳನ್ನಾದರೂ ನೇಮಕಾತಿ ಮಾಡಿಕೊಳ್ಳಿ ಎಂದು ವಾಣಿಜ್ಯ ಇಲಾಖೆ ಕಚೇರಿಗೆ ಅಲೆದಾಡುತ್ತಿದೇವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ವಿಚಾರಿಸಿದರೆ ದರ್ಪದಿಂದ ವರ್ತಿಸುತ್ತಾರೆ. ತುರ್ತು ಇದ್ದರೆ ನಿಮಗೆ ಬೇಕಾದ ಇಲಾಖೆ ಆಯ್ಕೆ ಮಾಡಿಕೊಳ್ಳಿ ಎಂದು ದಬಾಯಿಸುತ್ತಿದ್ದಾರೆ' ಎಂದೂ ಅಳಲು ತೋಡಿಕೊಂಡಿದ್ದಾರೆ.
ನೇಮಕ ಪ್ರಕ್ರಿಯೆ
'ವಿವಿಧ ಮೀಸಲಾತಿಯಡಿ ಆಯ್ಕೆಯಾಗಿರುವವರು ಆಯ್ಕೆ ಮತ್ತು ನೇಮಕಾತಿಯು ಸಕ್ಷಮ ಪ್ರಾಧಿಕಾರ ನೀಡಬೇಕಾಗಿರುವ ಸಿಂಧುತ್ವ ಪ್ರಮಾಣ ಪತ್ರದ ಷರತ್ತಿಗೆ ಒಳಪಟ್ಟಿರುತ್ತದೆ' ಎಂದು ಷರತ್ತು ವಿಧಿಸಿ ಕೆಪಿಎಸ್ಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯ ನ. 28ರಂದು. ಪೌರಾಡಳಿತ ನಿರ್ದೇಶನಾಲಯ ಡಿ. 5ರಂದು ಅಭ್ಯರ್ಥಿಗಳಿಗೆ ಅಧಿಕೃತ ಜ್ಞಾಪನ ಪತ್ರ ಕಳುಹಿಸಿದೆ.
'ಎಫ್ಡಿಎ, ಎಸ್ಡಿಎ ಹುದ್ದೆ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಡಿ. 28ರಂದು ಅಧಿಕೃತ ಜ್ಞಾಪನ ಪತ್ರ ಕಳುಹಿಸಿ,15 ದಿನಗಳ ಒಳಗೆ ಕರ್ತವ್ಯಕ್ಕೆ ಹಾಜರಾಗಬೇಕು. ನೇಮಕಾತಿ ಆದೇಶ ತಲುಪಿದ 7 ದಿನಗಳ ಒಳಗೆ ಒಪ್ಪಿಕೊಂಡ ಅಥವಾ ತಿರಸ್ಕರಿಸಿದ ಕುರಿತು ಲಿಖಿತವಾಗಿ ತಿಳಿಸಬೇಕು.