ಗುಣಮಟ್ಟದ ಶಿಕ್ಷಣಕ್ಕಾಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಎಐಸಿಟಿಇ ಮುಂದಾಗಿದ್ದರೆ, ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಇಳಿಮುಖವಾಗಿದೆ ಎಂಬ ಕಾರಣಕ್ಕೆ ರಾಜ್ಯದ 70 ಸರಕಾರಿ ಪಿಯು ಕಾಲೇಜು ಮುಚ್ಚಲು ಸರಕಾರ ಪಟ್ಟಿ ತಯಾರಿಸಿದೆ.
ವರ್ಷದಿಂದ ವರ್ಷಕ್ಕೆ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದು, ಆ ಕಾಲೇಜುಗಳನ್ನು ಮುಚ್ಚಿ ಅಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರನ್ನು ಖಾಲಿ ಇರುವ ಸ್ಥಳಗಳಿಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ.
ಕಳೆದ ವರ್ಷವಷ್ಟೆ ರಾಜ್ಯಾದ್ಯಂತ 20ಕ್ಕೂ ಹೆಚ್ಚಿನ ಸರಕಾರಿ ಪಿಯು ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದರಿಂದ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಸರಕಾರಿ ಶಾಲೆ ಹಾಗೂ ಕಾಲೇಜು ಮುಚ್ಚ ಬಾರದು. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರೋಕ್ಷವಾಗಿ ಉತ್ತೇಜನ ಸಿಗಲಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಇದರ ಹೊರತಾಗಿಯೂ ಸರಕಾರ ಈಗ ಮತ್ತಷ್ಟು ಶಾಲಾ-ಕಾಲೇಜು ಮುಚ್ಚಲು ಮುಂದಾಗಿದೆ.
ಮಕ್ಕಳ ಸಂಖ್ಯೆ ಕೊರತೆ, ಕಳಪೆ ಫಲಿತಾಂಶ, ಅರ್ಧದಲ್ಲೇ ಕಾಲೇಜು ತೊರೆಯುವ ಪರಿಶಿಷ್ಟ ಮಕ್ಕಳು, ಪ್ರಯೋಗಾಲಯಗಳ ಕೊರತೆ ಮತ್ತಿತರ ಕಾರಣಗಳಿಂದ ಸರಕಾರಿ ಪಿಯು ಕಾಲೇಜುಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ.
ವಿದ್ಯಾರ್ಥಿಗಳ ಕೊರತೆಯಿಂದ ಭಾಷಾ ಹಾಗೂ ಐಚ್ಛಿಕ ವಿಷಯಗಳ ಉಪನ್ಯಾಸಕರು ಕೂಡ ಹೆಚ್ಚುವರಿಯಾಗಿರುವ ಕಾರಣ 70ಕ್ಕೂ ಅಧಿಕ ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ 311 ಪಿಯು ಕಾಲೇಜುಗಳಲ್ಲಿ 1357 ಉಪನ್ಯಾಸಕರಿಗೆ ವಾರಕ್ಕೆ ಇಂತಿಷ್ಟು ನಿಗದಿಪಡಿಸಿದ ಪಾಠದ ಅವಧಿ ಸಿಗುತ್ತಿಲ್ಲ. ಹೀಗಾಗಿ ಈ ಉಪನ್ಯಾಸಕರನ್ನು ಬೇರೆ ಕಡೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಅಕ್ಟೋಬರ್ನಲ್ಲಿ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿದೆ.
800 ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಎಐಸಿಟಿಇ ನಿರ್ಧಾರ
ಇತ್ತೀಚೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಕೋರ್ಸ್ಗಳನ್ನು ತೆರೆಯಲಾಗಿದೆ. ಆದರೆ, ಆ ಕೋರ್ಸ್ ಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳು ಸೇರ್ಪಡೆಯಾಗಿಲ್ಲ. ಅಲ್ಲದೆ, ಇದುವರೆಗೆ ಪ್ರಯೋಗಾಲಯಗಳನ್ನು ಸಹ ಕಾಲೇಜುಗಳಿಗೆ ಮಂಜೂರು ಮಾಡಿಲ್ಲ. ಸಂಯುಕ್ತ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಪರಸ್ಪರ ಹೊಂದಾಣಿಕೆ ಕೊರತೆಯಿಂದ ಪ್ರಯೋಗಾಲಯಗಳ ಬಳಕೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಮಕ್ಕಳ ಸಂಖ್ಯೆ ಹಾಗೂ ಕಾರ್ಯಭಾರದ ಒತ್ತಡಕ್ಕೆ ಅನುಗುಣವಾಗಿ ಸಮೀಕ್ಷೆ ನಡೆಸಿದಾಗ ಪಿಸಿಎಂಬಿಯಂತಹ ಕೋರ್ಸ್ಗಳಿಗೆ ಕೆಲವು ಕಡೆ ಮೂರ್ನಾಲ್ಕು ಮಕ್ಕಳಿದ್ದಾರೆ. ಕೆಲವು ಕಡೆ ಶೂನ್ಯ ದಾಖಲೆಯೂ ಇದೆ. ಇಂತಹ ಕಡೆಗಳಲ್ಲಿ ಹೆಚ್ಚುವರಿಯಾಗಿರುವ ಉಪನ್ಯಾಸಕರನ್ನು ಹುದ್ದೆ ಖಾಲಿಯಿರುವ ಕಾಲೇಜುಗಳಿಗೆ ಕೌನ್ಸೆಲಿಂಗ್ ನಡೆಸುವ ಮೂಲಕ ನಿಯೋಜಿಸಲಾಗುತ್ತದೆ. ಮಕ್ಕಳೇ ದಾಖಲಾಗದಿದ್ದ ಕೋರ್ಸ್ಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ. ಇಲ್ಲವೇ ಸಮೀಪದ ಕಾಲೇಜುಗಳಿಗೆ ಕೋರ್ಸ್ಗಳನ್ನು ಸಂಯೋಜನೆ ಗೊಳಿಸಬೇಕಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.