ಭಾರತದ ಇತಿಹಾಸದಲ್ಲಿ ಆಗಸ್ಟ್ ತಿಂಗಳು ವಿಶೇಷ ಸ್ಥಾನಪಡೆದಿದೆ. 1942 ರ ಆಗಸ್ಟ್ ಎರಡು ಪ್ರಮುಖ ಕಾರಣಗಳಿಂದಾಗಿ ಭಾರತೀಯರ ಹೃದಯದಲ್ಲಿ ಅಜರಾಮರವಾಗಿದೆ.
ಆಗಸ್ಟ್ 15 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತರೆ, 1942 ಅಗಸ್ಟ್ 9 ರಂದು ಬ್ರಿಟೀಷರನ್ನು ಭಾರತದಿಂದ ಹಿಮ್ಮೆಟಿಸಲು ಮಹಾತ್ಮ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದ ದಿನ.
ಗಾಂಧೀಜಿಯ ಕ್ವಿಟ್ ಇಂಡಿಯಾದಂತೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸುಭಾಷ್ ಚಂದ್ರ ಬೋಸ್ ರ ಆಜಾದ್ ಹಿಂದ್ ಫೌಝ್ ಕೂಡ 75ನೇ ವರ್ಷವನ್ನು ಪೂರೈಸಲಿದೆ.

ಕ್ವಿಟ್ ಇಂಡಿಯಾ ಚಳವಳಿ
ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಚಳವಳಿಗಳಲ್ಲೊಂದು. ಬ್ರಿಟೀಷರ ವಿರುದ್ಧ ಇಡೀ ಭಾರತವೇ ಒಂದಾಗಿ 'ಕ್ವಿಟ್ ಇಂಡಿಯಾ' ಎಂದು ಕೂಗಿದ ಅಂದಿನ ದಿನಕ್ಕೆ ಇಂದಿಗೆ 75 ವರ್ಷ.
ಆಗಸ್ಟ್ 9, 1942 ರಂದು ಕ್ವಿಟ್ ಇಂಡಿಯಾ ಚಳವಳಿಗೆ ಚಾಲನೆ ನೀಡಲಾಯಿತು. ಬ್ರಿಟೀಷರನ್ನು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ಚಳವಳಿ. ಬ್ರಿಟೀಷರ ಕಾನೂನುಗಳನ್ನು ಬದಿಗೊತ್ತಿ ಅಸಹಕಾರ ಚಳವಳಿಯಾರಂಭಿಸಲು ಮಹಾತ್ಮ ಗಾಂಧಿ ಕರೆ ನೀಡಿದ್ದರು.
ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆದ ಈ ಚಳವಳಿ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. 8 ಆಗಸ್ಟ್ ರಂದು ಮುಂಬಯಿಯ ಗೊವಾಳಿಯ ಮೈದಾನ(ಇಂದಿನ ಹೆಸರು - ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು. ಆದರೆ ಈ ಘೋಷಣೆಯ 24 ಗಂಟೆಗಳೊಳಗೆ ಬಹುತೇಕ ಕಾಂಗ್ರೆಸ್ ನಾಯಕರು ಬಂಧಿತರಾಗಿ ಆ ವರ್ಷವನ್ನು ಕಾರಾಗೃಹದಲ್ಲಿ ಕಳೆಯಬೇಕಾಯಿತು.
ಗಾಂಧಿಯವರ ಅಮೋಘವಾದ ಸತ್ವಯುತ ದೇಶಭಕ್ತಿಯ ಭಾಷಣದ ನಂತರ, ಹಲವಾರು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಗಾಂಧೀಜಿಯವರನ್ನು ಪುಣೆಯ ಆಗಾಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿರಿಸಲಾಯಿತು. ಇದು ಕ್ವಿಟ್ ಇಂಡಿಯ ಚಳವಳಿಯನ್ನು ಮತ್ತಷ್ಟು ಬಲಗೊಳಿಸಿತು.
ಕ್ವಿಟ್ ಇಂಡಿಯಾದಲ್ಲಿ ವಿದ್ಯಾರ್ಥಿಗಳ ಪಾತ್ರ
ಕ್ವಿಟ್ ಇಂಡಿಯಾ ಘೋಷಣೆ ದೇಶಾದ್ಯಂತ ದೊಡ್ಡ ಕ್ರಾಂತಿಯನ್ನೇ ಆರಂಭಿಸಿತು. ದೊಡ್ಡವರು ಚಿಕ್ಕವರು ಎನ್ನದೇ ಭಾರತದ ಪ್ರತಿ ಪ್ರಜೆಯು ಚಳವಳಿಯಲ್ಲಿ ಭಾಗವಹಿಸಿದರು. ಅದರಲ್ಲೂ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಚಳವಳಿಗೆ ಮತ್ತಷ್ಟು ಬಲವನ್ನು ತುಂಬಿತ್ತು.
ಅಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲಾ ಕಾಲೇಜುಗಳನ್ನು ಧಿಕ್ಕರಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಅಲ್ಲದೇ ಅನೇಕ ವಿದ್ಯಾರ್ಥಿಗಳು ಬಂಧನಕ್ಕೊಳಗಾಗಿದ್ದರು.
ಸುಭಾಷರ ಆಜಾದ್ ಹಿಂದ್ ಫೌಝ್
ಕ್ವಿಟ್ ಇಂಡಿಯಾ ಒಂದು ಕಡೆಯಾದರೆ, ಸುಭಾಷ್ ಚಂದ್ರ ಬೋಸ್ ರ ಕ್ರಾಂತಿ ಸೇನೆ ಮತ್ತೊಂದು ಮಗ್ಗುಲಿನಿಂದ ಭಾರತದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿತ್ತು. ಕೇವಲ ಚಳವಳಿಗಳಿಂದ ಸ್ವಾತಂತ್ರ್ಯ ಅಸಾಧ್ಯ ಎಂದು ಅರಿತಿದ್ದ ಬೋಸ್, ಯುವಕರನ್ನು ಒಟ್ಟುಗೂಡಿಸಿ ಭಾರತೀಯ ಸೇನೆಯನ್ನು ಕಟ್ಟಿದ್ದರು.
1942ರ ವೇಳೆಯಲ್ಲಿ ಬ್ರಿಟಿಷರು ಭಾರತದ ನಾಯಕರನ್ನು ಲೆಕ್ಕಿಸದೇ ಭಾರತದ ಸೇನೆಯನ್ನು ಎರಡನೇ ಮಹಾಯುದ್ಧದಲ್ಲಿ ಬಳಸಿಕೊಂಡರು. ಇದರಿಂದ ಕುಪಿತರಾದ ಸುಭಾಷ್ ಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೇನೆಯನ್ನು ಜಪಾನೀಯರ ಸಹಾಯದಿಂದ ಒಗ್ಗೂಡಿಸಿದರು.
ಈ ಸೇನೆಯು ಅಸ್ಸಾಂ, ಬಂಗಾಳ, ಮತ್ತು ಬರ್ಮಾ ಕಾಡುಗಳಲ್ಲಿ ಛಲದಿಂದ ಹೋರಾಟ ನಡೆಸಿತು. ಜಪಾನೀಯರ ಸಹಾಯದ ಕೊರತೆಯಿಂದ ಮತ್ತು ಆಯುಧಗಳ ಕೊರತೆಯಿಂದ ಹೋರಾಟವು ಮಂಕಾಯಿತು. ಆದರೆ, ಬೋಸರ ಧೈರ್ಯ-ಸಾಹಸಗಳಿಂದ ಉತ್ತೇಜಿತರಾದ ಹೊಸ ಪೀಳಿಗೆಯ ಭಾರತೀಯರು ಈ ಚಳುವಳಿಯನ್ನು ಸೇರಿದರು.


Click it and Unblock the Notifications











