ರಾಜ್ಯದಲ್ಲಿ ಕೋವಿಡ್ ಹೊಸ ರೂಪಾಂತರಿ ಒಮ್ರಿಕಾನ್ ಮತ್ತಷ್ಟು ಭೀಕರತೆಯನ್ನು ಉಂಟುಮಾಡಿದೆ. ಇದರ ನಡುವೆಯೇ ರಾಜ್ಯದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುತ್ತಿರುವುದು ಕೂಡ ಆತಂಕ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ಶಾಲಾ ಕಾಲೇಜುಗಳನ್ನು ಮತ್ತೆ ಬಂದ್ ಮಾಡಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು ಕೋವಿಡ್ಸೋಂಕು ಶಾಲೆಗಳಲ್ಲಿ ಹೆಚ್ಚುತ್ತಿರುವುದು ಬೇಸರ ತಂದಿದೆ. ಆದರೆ ಪರಿಸ್ಥಿತಿ ತೀವ್ರವಾಗಿ ಕಂಡು ಬಂದರೆ ಶಾಲೆಗಳನ್ನು ಬಂದ್ ಮಾಡೋದಕ್ಕೂ ಕೂಡ ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಸೋಂಕು ವಸತಿ ಶಾಲೆಗಳಲ್ಲಿ ಮತ್ತು ನವೋದಯ ಶಾಲೆಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಶಾಲಾ ಮಟ್ಟದಲ್ಲಿ 1 ರಿಂದ 10ನೇ ತರಗತಿವರಗೆ ಸರ್ಕಾರಿ ಸರ್ಕಾರಿ ಶಾಲೆಗಳಲ್ಲಿ ಸೋಂಕಿಲ್ಲ. ವಸತಿ ಮತ್ತು ನವೋದಯ ಶಾಲೆಗಳಲ್ಲಿ ಸೋಂಕು ಹಿನ್ನೆಲೆ ಅಗತ್ಯ ಕ್ರಮ ತಗೆದುಕೊಳ್ಳುತೇವೆ ಎಂದಿದ್ದಾರೆ.
ಮಕ್ಕಳಿಗೆ ತೊಂದರೆ ಆಗಿಲ್ಲ, ಅವರಿಗೆ ಚಿಕಿತ್ಸೆ ಕೊಡಲಾಗಿದೆ. ಇಬ್ಬರು ಶಿಕ್ಷಕರಿಗೆ ಸೋಂಕು ಬಂದಿದ್ದು ಯಾವುದೇ ಸಮಸ್ಯೆ ಮತ್ತು ಆತಂಕ ಇಲ್ಲ. ಇವತ್ತು ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ. ನೀತಿ ಸಂಹಿತೆ ಮುಗಿದ ಬಳಿಕ ಸೋಂಕಿತ ವಸತಿ ಮತ್ತು ನವೋದಯ ಶಾಲೆಗಳಿಗೆ ಭೇಟಿ ನಾನು ಕೊಡುತ್ತೇನೆ. ಸದ್ಯಕ್ಕೆ ವಸತಿ ಶಾಲೆಗಳಲ್ಲಿ ಎಸ್.ಓ.ಪಿ ಪಾಲನೆ ಆಗ್ತಿದೆಯಾ, ಇಲ್ಲವಾ? ಎಂಬುದನ್ನು ಸ್ವತಃ ಜಿಲ್ಲಾಧಿಕಾರಿಗಳೇ ಪರಿಶೀಲಿಸಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ತಜ್ಞರಿಂದ ಪ್ರತಿದಿನವೂ ವರದಿ ಪಡೆದುಕೊಳ್ಳುತ್ತಿದ್ದೇವೆ. ವರದಿ ಪ್ರಕಾರ ತಕ್ಷಣಕ್ಕೆ ಯಾವುದೇ ಆತಂಕ ಬೇಡ ಅಂತಲೇ ಹೇಳುತ್ತಿದ್ದಾರೆ. ಪೋಷಕರು ಯಾವುದೇ ರೀತಿಯ ಆತಂಕ ಪಡುವುದು ಬೇಡ ಎಂದರು. ಇವತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ಎಸ್.ಓ.ಪಿ ಮತ್ತಷ್ಟು ಕಠಿಣ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇವೆ. ಪರೀಕ್ಷೆಗಳಲ್ಲಿಯೇ ಹೆಚ್ಚು ಸಾಮಾಜಿಕ ಅಂತರ ನಿಯಮಗಳ ಪಾಲನೆ ಆಗುತ್ತದೆ. ಫೆಬ್ರವರಿ ಅಂತ್ಯದ ವೇಳೆಗೆ ಸ್ವಲ್ಪ ಕೋವಿಡ್ ಹೆಚ್ಚಾಗಬಹುದು. ಆದರೆ ಆ ವೇಳೆಗೆ ಮಕ್ಕಳಿಗೆ ಲಸಿಕೆ ಬರುವ ಸಾಧ್ಯತೆ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಪ್ರತಿ ಕ್ಷಣದಲ್ಲೂ ಸರ್ಕಾರ ನಿಗಾ ಇಟ್ಟಿದೆ ಎಂದು ಹೇಳಿದರು.