ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಅಥವಾ ಆರ್ಎಎಸ್ ಪರೀಕ್ಷೆ 2018ರ ಅಂತಿಮ ಫಲಿತಾಂಶವನ್ನು ನಿನ್ನೆ ಪ್ರಕಟ ಮಾಡಲಾಗಿದೆ. ಈ ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆ ನಂತರ ಒಟ್ಟು 2,023 ಅರ್ಹ ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೋಧಪುರ ಮಹಾನಗರ ಪಾಲಿಕೆಯಲ್ಲಿ ಸ್ವೀಪರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಂದ್ರಾ ಕೂಡ ಇದ್ದಾರೆ ಎನ್ನುವುದು ವಿಶೇಷ ಸಂಗತಿ.
ಇಬ್ಬರು ಮಕ್ಕಳ ತಾಯಿಯಾದ ಆಶಾ ಅವರು ಅತೀ ಶೀಘ್ರದಲ್ಲೇ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕವಾಗಲಿದ್ದಾರೆ. ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸ್ ಮಾಡಿರುವ ಆಶಾ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಆಶಾ ತಮ್ಮ ಪತಿಯಿಂದ ವಿಚ್ಚೇದನ ಪಡೆದಿದ್ದು, ತಮ್ಮ ಯಶಸ್ಸಿನ ಹಾದಿಯ ಜೊತೆಗೆ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ತಾವೇ ನಿಭಾಯಿಸಿಕೊಂಡು ಬಂದಿದ್ದಾರೆ.
ಪದವೀಧರೆ ಆಶಾ ಅವರು ಎರಡು ವರ್ಷಗಳ ಹಿಂದೆ ರಾಜಸ್ಥಾನ ನಾಗರಿಕ ಸೇವಾ ಪರೀಕ್ಷೆಗಳಿಗೆ ಹಾಜರಾಗಿದ್ದರು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಫಲಿತಾಂಶವನ್ನು ಮುಂದೂಡಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಹನ್ನೆರಡು ದಿನಗಳ ನಂತರ ಜೋಧಪುರ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ಸ್ವೀಪರ್ ಆಗಿ ಕೆಲಸಕ್ಕೆ ಸೇರಿಕೊಂಡು ತಮ್ಮ ಫಲಿತಾಂಶಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದರು.
ಸಮಾಜದಲ್ಲಿ ತಾವು ಎದುರಿಸಿದ ತಾರತಮ್ಯದಿಂದಾಗಿ ಪ್ರಚೋದನೆಗೆ ಒಳಗಾದರು. ಹಾಗಾಗಿ ಅವರು ಇಂದು ಈ ಸಾಧನೆಯನ್ನು ಮಾಡಲು ಪ್ರೇರೇಪಿಸಿತು. ಕಠಿಣ ಪರಿಶ್ರಮವಿದ್ದರೆ ಯಶಸ್ಸು ಖಂಡಿತ ಎಂದು ಅವರು ನಂಬಿದ್ದಾರೆ. ಆಕೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಹೊಂದಿದ್ದರೂ ವಯಸ್ಸಿನ ಮಿತಿಯಿಂದಾಗಿ ಪರೀಕ್ಷೆಗಳಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ ಎಂದೂ ಅವರು ಹೇಳಿದರು.
ಈ ಕುರಿತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದ ಟಾಪರ್ಸ್ ಗಳಿಗೆ ಅಭಿನಂದಿಸಿದರು ಮತ್ತು ಅವರಿಗೆ ಶುಭ ಹಾರೈಸಿದರು.