ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯದ ಲೋಪದೋಶಗಳೇ ಹೆಚ್ಚಾಗಿ ಸದ್ದು ಮಾಡುತ್ತಿವೆ. ಕೆಲ ದಿನಗಳ ಹಿಂದಷ್ಟೆ ರಾಜ್ಯದ ಶಾಲಾ ಪುಸ್ತಕಗಳಲ್ಲಿ ತಪ್ಪು ಮಾಹಿತಿ ಮತ್ತು ಮುದ್ರಣದಿಂದಾಗಿ ಸುದ್ದಿಯಾಗಿದ್ದ ಪುಸ್ತಕಗಳ ಪರಿಷ್ಕರಣಾ ಸಮಿತಿ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಈಗ ಮತ್ತೊಂದು ಭಾರಿ ತಪ್ಪಿನಿಂದ ಸುದ್ದಿಯಾಗಿದ್ದಾರೆ.
ಬರಗೂರರ ಲೇಖನವೊಂದನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪುಸ್ತಕ ಪದಚಿತ್ತಾರದಲ್ಲಿ ಪಠ್ಯವಾಗಿ ಅಳವಡಿಸಿದ್ದು, ಅದರಲ್ಲಿ ಸೈನಿಕರ ಬಗ್ಗೆ ಅವಹೇಳನಕಾರಿ ವಾಕ್ಯಗಳನ್ನು ರಚಿಸಲಾಗಿದೆ ಎಂದು ಮಾಜಿ ಸೈನಿಕ ಸಂಘದ ವಕ್ತಾರ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಆರೋಪಿಸಿದ್ದಾರೆ.

ಪದಚಿತ್ತಾರ ಪುಸ್ತಕದಲ್ಲಿ 'ಯುದ್ಧ: ಒಂದು ಉದ್ಯಮ' ಎಂಬ ಪಾಠದಲ್ಲಿ ಸೈನಿಕರ ಬಗ್ಗೆ ವಿವಾದಾತ್ಮಕ ವಿಚಾರಗಳು ಪ್ರಸ್ತಾಪವಾಗಿದ್ದು, ದೇಶದ ಸೈನಿಕರ ಬಗ್ಗೆ ಕೀಳು ಭಾವನೆ ಬರುವಂತೆ ಬಿಂಬಿಸಲಾಗಿದೆ. ಇದರಿಂದಾಗಿ ಸೈನಿಕರ ಮೇಲಿನ ಗೌರವಕ್ಕೆ ದಕ್ಕೆಯುಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
'ಯುದ್ಧ ಉದ್ಯಮ' ಲೇಖನದಲ್ಲಿ ಏನಿದೆ?
ಈ ಲೇಖನದಲ್ಲಿ ಯುದ್ಧ ಮತ್ತು ದೇಶಭಕ್ತಿಗೆ ಬೇರೆಯದ್ದೇ ಅರ್ಥವನ್ನು ಕಲ್ಪಿಸಲಾಗಿದೆ. ದೇಶ ಕಾಯುವ ಸೈನಿಕರನ್ನು ಹೀನಾಯವಾಗಿ ಕಾಣುವುದಲ್ಲದೆ, ದೇಶಪ್ರೇಮವನ್ನು ಉದ್ಯಮ ಎಂದು ಬಿಂಬಿಸಲಾಗಿದೆ. ದೇಶಭಕ್ತಿ ವಿಕೃತಿಗೆ ಕಾರಣವಾಗುತ್ತದೆ ಎಂದು ಬರೆಯಲಾಗಿದೆ. ಗಡಿ ಪ್ರದೇಶದಲ್ಲಿ ಕ್ರೌರ್ಯದ ಪ್ರದರ್ಶನ ಮಾಡುವ ಸಂದರ್ಭದಲ್ಲಿ ಗಡಿಗ್ರಾಮಗಳಲ್ಲಿ ಅತ್ಯಾಚಾರಗಳು ನಡೆಯುತ್ತದೆ. ಎರಡೂ ರಾಷ್ಟ್ರದ ಸೈನಿಕರು ಇದರಲ್ಲಿ ಭಾಗಿಗಳು ಎಂದು ಪಠ್ಯ ವಿವರಿಸುತ್ತದೆ.
ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರವಲ್ಲ, ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಎಂಬ ಕಲ್ಪನೆ ಸೈನಿಕರಲ್ಲಿ ಸೃಷ್ಟಿಸಲಾಗಿದೆ. ಯುದ್ಧ ಎನ್ನುವುದು ಸಾಮ್ರಾಜ್ಯಶಾಹಿ ಧೋರಣೆಯ ಸಂಕೇತವಾಗಿರುವುದಷ್ಟೇ ಅಲ್ಲ, ಅದೊಂದು ಉದ್ಯಮ. ದೇಶಗಳ ನಡುವೆ ಒಮ್ಮತ ಮೂಡದೇ ಇದ್ದಾಗ ಯುದ್ಧದ ಭಯ ಮೂಡಿಸಿ ಬಲಾಡ್ಯ ದೇಶಗಳು ತಮ್ಮಲ್ಲಿರುವ ಮಿಲಿಟರಿ ಸಾಮಾಗ್ರಿಗಳ ಮಾರಾಟ ಮಾಡುತ್ತವೆ. ಹೀಗಾಗಿ ಯುದ್ಧ ಎನ್ನುವುದು ಉದ್ಯಮ ಎಂಬ ವಿಶ್ಲೇಷಣೆ ಈ ಲೇಖನದಲ್ಲಿದೆ.
'ಸೈನಿಕರನ್ನು ಸಜ್ಜನರು, ದೇಶಭಕ್ತರೆಂದು ನಂಬಿಸಲಾಗುತ್ತಿದೆ. ಸೈನಿಕರು ಗಡಿಗ್ರಾಮದಲ್ಲಿ ಅತ್ಯಾಚಾರ ನಡೆಸುತ್ತಾರೆ, ಸೈನ್ಯಕ್ಕೆ ಸೇರಿದರೆ ಮನುಷ್ಯ ಕ್ರೂರಿಯಾಗುತ್ತಾನೆ, ಸೈನಿಕನ ಮಡದಿಗೆ ಒಂಟಿತನ ಕಾಡಿದರೆ ತಪ್ಪುದಾರಿ ಹಿಡಿಯುತ್ತಾಳೆ, ಮದ್ಯ ಮಾಂಸದಿಂದ ಸೈನಿಕರಲ್ಲಿ ದೇಶ ಭಕ್ತಿ ಉಕ್ಕಿಸಲಾಗುತ್ತಿದೆ. ವೀರಮರಣ ಎಂಬ ಭ್ರಮೆಯನ್ನು ಸೈನ್ಯಕ್ಕೆ ಸೇರುವವರ ಮನದಲ್ಲಿ ತುಂಬಲಾಗುತ್ತದೆ. ಸೈನಿಕರಿಗೆ ಸಭ್ಯತೆ ಇರುವುದಿಲ್ಲ' ಎಂಬ ಅಂಶಗಳನ್ನು ಪಠ್ಯ ಒಳಗೊಂಡಿದೆ.
ಈ ಪುಸ್ತವು ಮಂಗಳೂರು ವಿವಿಯ ಪ್ರಥಮ ವರ್ಷದ ಬಿಸಿಎ,ಬಿಎಸ್ಸಿ (ಅನಿಮೇಶನ್) ಸೇರಿ ಪ್ರಥಮ ವರ್ಷದ ಪದವಿಯ ವಿವಿಧ ತರಗತಿಗಳಿಗೆ ಪಠ್ಯವಾಗಿದೆ. ಈ ಪುಸ್ತಕದಲ್ಲಿ ಒಟ್ಟು 12 ಗದ್ಯವಿದ್ದು, 10ನೇ ಗದ್ಯವಾಗಿ ಈ ಲೇಖವನ್ನು ಸೇರಿಸಲಾಗಿದೆ. ಈ ಲೇಖನವನ್ನು ಬರಗೂರರ 'ಸಂಸ್ಕೃತಿ: ಶ್ರಮ ಮತ್ತು ಸೃಜನಶೀಲತೆ' ಎನ್ನುವ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ದೇಶ ಕಾಯುವ ಸೇನೆಯ ಮೇಲೆ ಗೌರವವನ್ನು ತೋರಿ, ಯುವಕರನ್ನು ಸೈನ್ಯಕ್ಕೆ ಸೇರಿಸಿ ದೇಶ ಸೇವೆ ಮಾಡುಲು ಪ್ರೇರೇಪಿಸಬೇಕಾದ ಜಾಗದಲ್ಲಿ ಸೈನ್ಯದ ಬಗ್ಗೆ ಈ ರೀತಿ ಬರೆದಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ, ಅಲ್ಲದೆ ಈ ಪಾಠವನ್ನು ತೆಗೆದುಹಾಕಬೇಕೆಂದು ಮಾಜಿ ಸೈನಿಕರ ಸಂಘ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದೆ.


Click it and Unblock the Notifications











