ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಕೂಲಿ ಕಾರ್ಮಿಕರ ಮಕ್ಕಳು ಮತ್ತು ಬಡ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನಲ್ಲಿ ರಾತ್ರಿ ಶಾಲೆ ನಡೆಸಲು ಚಿಂತನೆ ನಡೆಸಿದೆ.
ಈಗಾಗಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸಲಾಗಿದ್ದ 'ರಾತ್ರಿ ಶಾಲೆ' ಕಾರ್ಯಕ್ರಮ ಯಶಸ್ವಿಯಾಗಿದೆ. ಇದು ಆ ಜಿಲ್ಲೆಯ ಮಕ್ಕಳಲ್ಲಿ ಉತ್ತಮ ಬದಲಾವಣೆ ತಂದಿದೆ. ಇದರಿಂದ ಉತ್ತೇಜಿತವಾಗಿರುವ ಬಿಬಿಎಂಪಿ ನಗರದಲ್ಲೂ ರಾತ್ರಿ ಶಾಲೆ ಆರಂಭಿಸಲು ಯೋಜನೆ ರೂಪಿಸುತ್ತಿದೆ.
ಕೂಲಿ ಕಾರ್ಮಿಕರ ಮಕ್ಕಳು, ಬಡ ಕುಟುಂಬದ ಮಕ್ಕಳು ಶಾಲೆಗೆ ಬಾರದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನೂ ಎಷ್ಟೋ ಮಕ್ಕಳು ಶಾಲೆಯಿಂದ ಮರಳಿ ಸಂಜೆ ಮನೆಗೆ ಬಂದ ನಂತರ ಕಲಿಕೆಗೆ ಸೂಕ್ತ ಸೌಕರ್ಯ, ಅವಕಾಶಗಳು ಇರುವುದಿಲ್ಲ. ಅಂತಹ ಮಕ್ಕಳಿಗೆ ಅನುಕೂಲವಾಗಲೆಂದು ಬಿಬಿಎಂಪಿ ರಾತ್ರಿ ಶಾಲೆಯನ್ನು ಆರಂಭಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಬೆಳಕು ಯೋಜನೆಯಡಿಯಲ್ಲಿ 2016-2019ರವರೆಗೆ ರಾತ್ರಿಶಾಲೆ ಆರಂಭಿಸಲಾಗಿತ್ತು.
ಸಂಜೆ 6 ರಿಂದ ರಾತ್ರಿ 8 ಗಂಟೆವರೆಗೆ ತರಗತಿಗಳು ನಡೆದಿದ್ದು, ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ರಾಮ್ ಪ್ರಶಾಂತ್ ಮನೋಹರ್ ಅವರ ಪರಿಕಲ್ಪನೆಯ ರಾತ್ರಿಶಾಲೆ ಯಶಸ್ವಿಯಾಗಿದೆ.
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳಲ್ಲಿ ಶಿಕ್ಷಣ ವಂಚಿತ ಮಕ್ಕಳಿಗೆ ರಾತ್ರಿ ಶಾಲೆ ಆರಂಭಿಸಲು ಪಾಲಿಕೆ ಚಿಂತನೆ ನಡೆಸಲಾಗಿದ್ದು, ಆಗಸ್ಟ್ 15 ರಿಂದ ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ ಎನ್ನಲಾಗಿದೆ.
ಸುದ್ದಿಗಾರರ ಸಂಪರ್ಕಕ್ಕೆ ಸಿಕ್ಕ ವಿ.ರಾಮ್ ಪ್ರಶಾಂತ್ ಮನೋಹರ್ ಅವರು, ರಾತ್ರಿಶಾಲೆಯ ತರಗತಿ ನಡೆಸುವ ಶಿಕ್ಷಕರಿಗೆ ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತರಬೇತಿ ನೀಡುವುದು ಅವಶ್ಯಕವಾಗಿರುತ್ತದೆ. ಇದರಿಂದ ಅವರು ಶಾಲಾ ನಂತರದ ಸಮಯದಲ್ಲಿ ಸಂಜೆಯಿಂದ ರಾತ್ರಿವರೆಗೆ ಮಕ್ಕಳಿಗೆ ಸುಸುತ್ರವಾಗಿ ಶಿಕ್ಷಣ ಹೇಳಿಕೊಡಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಸೂಕ್ತ ಕಾರ್ಯಯೋಜನೆ ಸಹಿತ ಆರಂಭಿಸಿದ ರಾತ್ರಿಶಾಲೆಯ ಫಲಿತಾಂಶಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಮಕ್ಕಳ ಶಿಕ್ಷಣ ಸುಧಾರಿಸಲು ಸರ್ಕಾರೇತರ ಸಂಸ್ಥೆಗಳಿಗೆ ಆಸಕ್ತಿ ಇದ್ದಲ್ಲಿ ಅವುಗಳೊಂದಿಗೆ ಯೋಜನೆ ಬಗೆಗಿನ ಮಾಹಿತಿ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.