ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ ಪ್ರಯುಕ್ತ ನವೆಂಬರ್ 20ರಂದು ಸಂಸತ್ತಿನಲ್ಲಿ ಭಾಷಣ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ರಾಜ್ಯದ ಬಾಲಕಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿಬಂದಿದೆ.
ಬೆಂಗಳೂರಿನ ಹೆಸರಘಟ್ಟದ ಕೊಳಗೇರಿ ನಿವಾಸಿ, 16 ವರ್ಷ ವಿ.ಕನಕಾ, ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಸಂಸತ್ತಿನಲ್ಲಿ ಭಾಷಣ ಮಾಡಲು ಆಯ್ಕೆಯಾಗಿದ್ದಾಳೆ.
ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ (ವಿಜ್ಞಾನ) ಓದುತ್ತಿರುವ ಕನಕಾಳನ್ನು ಸ್ಪರ್ಶ ಸಂಸ್ಥೆ ದತ್ತು ಪಡೆದು ಓದಿಸುತ್ತಿದೆ. ಕನಕ ದೆಹಲಿಗೆ ತೆರಳಲು ಬೇಕಾದ ಎಲ್ಲ ಸೌಲಭ್ಯವನ್ನು ಸ್ಪರ್ಶ ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಭಾಷಣದಲ್ಲಿ ಬದುಕಿನ ಅನುಭವಗಳು
ಮಕ್ಕಳ ದೌರ್ಜನ್ಯದ ಬಗ್ಗೆ ಲೋಕಸಭೆಯಲ್ಲಿ ಎಂಟು ನಿಮಿಷ ಭಾಷಣ ಮಾಡಲು ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಭಾಷಣಕ್ಕೆ ನನ್ನ ಬದುಕೇ ವಸ್ತು. ಚಿಕ್ಕವಳಿದ್ದಾಗ ಎಲ್ಲಾ ರೀತಿಯ ದೌರ್ಜನ್ಯಕ್ಕೂ ಒಳಗಾಗಿದ್ದೇನೆ. ಆ ಘಟನೆಗಳನ್ನೇ ಆಧರಿಸಿ ಭಾಷಣ ಸಿದ್ಧಪಡಿಸಿಕೊಂಡಿದ್ದೇನೆ' ಎಂದು ಕನಕಾ ತಿಳಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಕಷ್ಟ
ಹೊಟ್ಟೆಪಾಡಿಗಾಗಿ 10 ವರ್ಷಗಳ ಹಿಂದೆ ನಾವು ತಮಿಳುನಾಡು ತೊರೆದು ಬೆಂಗಳೂರಿಗೆ ಬಂದೆವು. ಯಶವಂತಪುರದ ಒಂದು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದೆವು ಅಮ್ಮ ಮನೆಗೆಲಸಕ್ಕೆ ಹೋಗುತ್ತಿದ್ದರು. ಅಪ್ಪ ಅಂಗವಿಕಲರಾಗಿದ್ದರಿಂದ ಅಮ್ಮನ ಸಂಪಾದನೆಯಲ್ಲಿಯೇ ನಮ್ಮ ಜೀವನ ನಡೆಯುತ್ತಿತ್ತು. ಇಲ್ಲಿಗೆ ಬಂದ ಕೆಲವು ತಿಂಗಳಲ್ಲಿ ಅಮ್ಮ ಕಾಯಿಲೆಯಿಂದಾಗಿ ತೀರಿಕೊಂಡರು. ಆಗ ನಾವು ಬೀದಿಗೆ ಬಿದ್ದೆವು. ಆಗ ನಾನಿನ್ನೂ ಚಿಕ್ಕ ಹುಡುಗಿ. ತುತ್ತು ಅನ್ನಕ್ಕಾಗಿ ಪರದಾಡಿದ ಆ ದಿನಗಳು ಈಗಲೂ ಕಣ್ಣ ಮುಂದೆ ಬರುತ್ತವೆ. ನಮ್ಮ ಜೊತೆಗಿದ್ದ ಕೆಲವರು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆಯೂ ಒತ್ತಾಯಿಸಿದ್ದರು ಎಂದು ಕನಕಾ ತಮ್ಮ ನೋವನ್ನು ನೆನೆದು ಕಣ್ಣೀರಿಟ್ಟರು.
ಕನಕಾಲಿಗೆ ವಿಜ್ಞಾನಿಯಾಗುವ ಕನಸು
ಕಷ್ಟಗಳನ್ನು ಮೆಟ್ಟು ನಿಂತಿರುವ ಕನಕಾ ಮುಂದೆ ವಿಜ್ಞಾನಿಯಾಗುವ ಕನಸನ್ನು ಹೊತ್ತಿದ್ದಾರೆ. ಸಂಸತ್ತಿನಲ್ಲಿ ಭಾಷಣ ಮುಗಿದ ಮೇಲೆ 45 ನಿಮಿಷಗಳ ಕಾಲ ಸಂಸತ್ ಸದಸ್ಯರ ಜೊತೆ ಚರ್ಚಿಸಲು ಅವಕಾಶವಿದೆ. ಈ ಅವಿಸ್ಮರಣೀಯ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.