ಬೆಂಗಳೂರಿನಲ್ಲಿ 1 ರಿಂದ 9ನೇ ತರಗತಿ ವರೆಗಿನ ಶಾಲೆಗಳನ್ನು ಸೋಮವಾರದಿಂದ ಪುನರಾರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಕೋವಿಡ್ ನಿರ್ಬಂಧಗಳ ಸಡಿಲಿಕೆ ಕುರಿತು ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಗಳ ಪುನರಾರಂಭದ ಬಗ್ಗೆಯೂ ಚರ್ಚೆ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳ ಹಿಂದೆ ಕೊರೊನಾ ಸೋಂಕು ಪ್ರಕರಣಗಳ ಹೆಚ್ಚಳದಿಂದ ಬೆಂಗಳೂರಿನಲ್ಲಿ 1-9ನೇ ತರಗತಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಶಾಲೆ ಆರಂಭಕ್ಕೆ ತಜ್ಞರು ಮತ್ತು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಸೋಮವಾರದಿಂದ ಎಲ್ಲಾ ತರಗತಿಗಳು ಪ್ರಾರಂಭ ಆಗುತ್ತವೆ. ಆದರೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು. ರಾಜ್ಯದ ಇತರೆ ಶಾಲೆಗಳಿಗಿರುವ ಮಾರ್ಗಸೂಚಿಗಳು ಬೆಂಗಳೂರಿನ ಶಾಲೆಗಳಿಗೂ ಇರುತ್ತವೆ. ಯಾವುದಾದರೂ ವಿದ್ಯಾರ್ಥಿಗೆ ಪಾಸಿಟಿವ್ ಬಂದರೆ ಆ ತರಗತಿ ಮಾತ್ರ ಮುಚ್ಚಲಾಗುತ್ತದೆ. ತರಗತಿಯ ಎಲ್ಲಾ ಮಕ್ಕಳಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಆ ತರಗತಿ ಎಷ್ಟು ದಿನ ಮುಚ್ಚಬೇಕು ಎಂದು ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಉಳಿದಂತೆ ಶಾಲೆ ತೆರೆದಿರುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ಹೇಳಿದ ಸಚಿವ ಬಿ.ಸಿ. ನಾಗೇಶ್, ಶೇ.100ರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದರು.
ಸಭೆಯಲ್ಲಿ ಕೈಗೊಂಡ ಮಹತ್ವ ನಿರ್ಧಾರಗಳು :
* ಮುಂದಿನ ಸೋಮವಾರದಿಂದ ಬೆಂಗಳೂರಿನ ಶಾಲೆಗಳ ಪುನರಾರಂಭಕ್ಕೆ ಅನುಮತಿ
* ಚಿತ್ರ ಮಂದಿರಗಳಲ್ಲಿ ಶೇ.50ಃ50ಗೆ ಅನುಮತಿ ಮುಂದುವರಿಕೆ
* ಸರ್ಕಾರಿ ಕಚೇರಿಗಳಲ್ಲಿ ಶೇ.100 ನೌಕರರ ಕೆಲಸಕ್ಕೆ ಅನುಮತಿ
* ಜಿಮ್, ಈಜು ಕೊಳಗಳಲ್ಲಿ ಶೇ.50ರಷ್ಟು ಮಂದಿಗೆ ಅವಕಾಶ
* ಸಾರ್ವಜನಿಕ ಬಸ್ಗಳಲ್ಲಿ ಸೀಟಿಂಗ್ ಕ್ಯಾಪಾಸಿಟಿಗೆ ಮಾತ್ರ ಅವಕಾಶ
* ಮಂದಿರ, ಮಸೀದಿ ಹಾಗೂ ಚರ್ಚ್ಗಳಲ್ಲಿ ಪಾರ್ಥನೆ, ಪೂಜೆ ಆರಂಭ
* ಮದುವೆ ಹಾಲ್ನಲ್ಲಿ 200 ಜನರಿಗೆ ಅವಕಾಶ
* ಎಲ್ಲಾ ಕಡೆ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ