ಶೀಘ್ರದಲ್ಲೆ ಪಿಯು ಕಾಲೇಜುಗಳಿಗೆ ಕ್ಯಾಂಟೀನ್ ಭಾಗ್ಯ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಯೂನಿಸೆಫ್ ಸಹಯೋಗದೊಂದಿಗೆ ಏರ್ಪಡಿಸಿದ್ದ 'ಮಕ್ಕಳ ಸಂವಾದ' ಕಾರ್ಯಕ್ರಮದಲ್ಲಿ ಹೊಸಕೋಟೆ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಭರವಸೆ ನೀಡಿದರು.
500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಪಿಯು ಕಾಲೇಜುಗಳಲ್ಲಿ ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಸೌಲಭ್ಯಗಳನ್ನು ಆರಂಭಿಸಲಾಗುವುದು ಅವರು ಹೇಳಿದ್ದಾರೆ.
'ಪಿಯು ಕಾಲೇಜುಗಳಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳು ಬೆಳಿಗ್ಗೆ ಉಪವಾಸ ಬಂದಿರುತ್ತಾರೆ. ಹೆಚ್ಚಿನ ಹಣ ಕೊಟ್ಟು ಹೋಟೆಲ್ಗಳಲ್ಲಿ ತಿನ್ನುವುದಕ್ಕೂ ಆಗುವುದಿಲ್ಲ. ಹೊಸಕೋಟೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಆಗುತ್ತಿದೆ. ನಮ್ಮ ಕಾಲೇಜಿಗೆ ಹೊಂದಿಕೊಂಡಂತೆ ಮತ್ತೊಂದು ಇಂದಿರಾ ಕ್ಯಾಂಟೀನ್ ಸ್ಥಾಪಿಸಿದರೆ ನಮ್ಮಂತಹ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ' ಎಂದು ವಿದ್ಯಾರ್ಥಿನಿಯಬ್ಬರು ಸಚಿವರನ್ನು ಕೇಳಿಕೊಂಡರು.
'ಇಂದಿರಾ ಕ್ಯಾಂಟೀನ್ ಪ್ರತ್ಯೇಕ ಕಾರ್ಯಕ್ರಮ ಆಗಿರುವುದರಿಂದ ಕಾಲೇಜಿಗೆ ಹೊಂದಿಕೊಂಡಂತೆ ನಿರ್ಮಿಸಿ ಎಂದು ಹೇಳಲು ಸಾಧ್ಯವಿಲ್ಲ' ಎಂದು ಹೇಳಿದ ಅವರು ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಡೆ ಕ್ಯಾಂಟೀನ್ ತೆರೆಯಲು ಅವಕಾಶ ನೀಡಲಾಗುವುದು, ಅತ್ಯಂತ ಕಡಿಮೆ ದರಕ್ಕೆ ಆಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು' ಎಂದು ಆಶ್ವಾಸನೆ ಕೊಟ್ಟರು.