ದೇಶದೆಲ್ಲೆಡೆ ಕೋವಿಡ್ ಆವರಿಸಿದ್ದು ಇದರಿಂದಾಗಿ ಜನಜೀವನ ವ್ಯಸ್ತಗೊಂಡಿದೆ. ಸಾವು ನೋವು ಆರ್ಥಿಕ ಸಂಕಷ್ಟಗಳ ಸಂಖ್ಯೆ ಹೇಳತೀರದು. ಈ ನಡುವೆಯೂ ವಿದ್ಯಾರ್ಥಿಗಳ ಶಿಕ್ಷಣ ಮುಂದುವರೆಯುವುದು ಅತ್ಯಗತ್ಯ ಹಾಗಾಗಿ ಸಿಬಿಎಸ್ಇ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.
ಕೋವಿಡ್ ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸುವಂತಿಲ್ಲ ಎಂದು ಸಿಬಿಎಸ್ಇ ತಿಳಿಸಿದೆ. ದೇಶದಾದ್ಯಂತ ಸಿಬಿಎಸ್ಇ ಅಂಗೀಕೃತ ಶಾಲೆಗಳಲ್ಲಿ 2021-22ನೇ ಸಾಲಿನಲ್ಲಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸಲಾಗುವುದು ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಈ ಪ್ರಕ್ರಿಯೆಯು ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಅಕ್ಟೋಬರ್ 9 ರವರೆಗೆ ವಿಳಂಬ ಶುಲ್ಕದೊಂದಿಗೆ ಮುಂದುವರಿಯುತ್ತದೆ.
10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಐದು ವಿಷಯಗಳಿಗೆ ಮೂಲ ಶುಲ್ಕ ರೂ 1500 ಮತ್ತು ದೆಹಲಿ ಸರ್ಕಾರಿ ಶಾಲೆಗಳ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ 1,200/-ರೂ , ಪ್ರತಿ ಪ್ರಾಯೋಗಿಕ ಮತ್ತು ಹೆಚ್ಚುವರಿ ಅಥವಾ ಆಯ್ಕೆ ಮಾಡಿಕೊಳ್ಳುವ ವಿಷಯಕ್ಕೆ ಹೆಚ್ಚುವರಿ ಮೊತ್ತದೊಂದಿಗೆ ಶುಲ್ಕವು ಸುಮಾರು 2,500 ರೂ ಆಗುವ ಸಾಧ್ಯತೆ ಇದೆ.
ಸಿಬಿಎಸ್ಇ ಟರ್ಮ್ 1 ಪರೀಕ್ಷೆಗಳನ್ನು ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆಸಲು ಸಜ್ಜಾಗಿದೆ. ಮಂಡಳಿಯು ಪರಿಷ್ಕೃತ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ ಮತ್ತು 10 ಹಾಗೂ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾದರಿ ಪತ್ರಿಕೆಗಳನ್ನು ನೀಡಿದೆ.
2021-22ನೇ ಸಾಲಿನಲ್ಲಿ10 ಮತ್ತು 12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಎರಡು ಅವಧಿಗಳಲ್ಲಿ ಪರೀಕ್ಷೆಗಳನ್ನು ಸಿಬಿಎಸ್ಇ ನಡೆಸುತ್ತಿದೆ.
ಟರ್ಮ್ 1 ಪರೀಕ್ಷೆಯು ನವೆಂಬರ್ ಮತ್ತು ಡಿಸೆಂಬರ್ 2021 ರ ನಡುವೆ ನಡೆಯಲಿದೆ ಮತ್ತು ಟರ್ಮ್ 2ರ ಪರೀಕ್ಷೆಯು ಮಾರ್ಚ್ ಮತ್ತು ಏಪ್ರಿಲ್ 2022ರ ನಡುವೆ ನಡೆಯಲಿದೆ.
ಕೊರೊನಾ ಕಾರಣದಿಂದಾಗಿ ದೇಶದೆಲ್ಲೆಡೆ ಹಲವಾರು ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಅವರ ಬದುಕಿನ ಆಸರೆಗಾಗಿ ಪರದಾಡುತ್ತಿದ್ದಾರೆ. ಇನ್ನು ಕೆಲವು ನರೆ ಹೊರೆಯವರು ಮತ್ತು ಸಂಬಂಧಿಕರ ಪೋಷಣೆಯಲ್ಲಿದ್ದಾರೆ. ಹೀಗಾಗಿ ಸರ್ಕಾರ ಪೋಷಕರು ಇಲ್ಲದ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದೆ.
ಇನ್ನು ರಾಜ್ಯದಲ್ಲಿಯೂ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ರಕ್ಷಣೆಗೆ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ಜಿಲ್ಲೆಯಲ್ಲೂ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ದತ್ತು ಕೋವಿಡ್ ಕೇರ್ ಸ್ಥಾಪನೆ ಮಾಡಲಾಗಿದೆ. ಅನಾಥ ಮಕ್ಕಳನ್ನು ದತ್ತು ನಿಯಮಾವಳಿ ಪ್ರಕಾರ ದತ್ತು ನೀಡಲು ಸಹ ಅನುಮತಿ ನೀಡಲಾಗಿದೆ. ಅಲ್ಲಿಯವರೆಗೂ ಮಕ್ಕಳ ಆರೈಕೆ, ಪೋಷಣೆ ಹೊಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.
ಒಟ್ಟಾರೆ ಕೋವಿಡ್ ನಿಂದಾಗಿ ಜನರ ಬದುಕು ಬೀದಿಗೆ ಬಂದಂತಾಗಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಹಸಿವಿನಿಂದ ಕಂಗಾಗಲಾಗಿದ್ದಾರೆ. ಇನ್ನು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯ ಹಸ್ತ ಚಾಚುವುದು ಸರ್ಕಾರದ ಜವಾಬ್ದಾರಿಯಾಗಿದೆ.