2017-2018 ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ಸೇಠ್ ತಿಳಿಸಿದ್ದಾರೆ.
ಮಾರ್ಚ್ 23ರಿಂದ ಏಪ್ರಿಲ್ 6ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ
ಕಳೆದ ಬಾರಿ ಯಾವುದೇ ಗೊಂದಲಗಳಿಲ್ಲದೆ ಸರಾಗವಾಗಿ ಪರೀಕ್ಷೆ ನಡೆಸಿ ಫಲಿತಾಂಶಗಳನ್ನು ನಿಗದಿತ ಸಮಯದಲ್ಲೇ ನೀಡಲಾಗಿತ್ತು, ಈ ಬಾರಿಯೂ ಅದೇ ರೀತಿ ಕ್ರಮಬದ್ಧವಾಗಿ ಇನ್ನು ಹೆಚ್ಚಿನ ಭದ್ರತೆಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸಚಿವರು ಹೇಳಿದರು.
ಪರೀಕ್ಷೆ ಅಕ್ರಮ, ನಕಲು, ಪ್ರಶ್ನೆ ಪತ್ರಿಕೆ ಸೋರಿಕೆ ಇತರೆ ಅಕ್ರಮಗಳಿಗೆ ಕಡಿವಾಣ ಹಾಕಲು 'ಕರ್ನಾಟಕ ಸುರಕ್ಷಿತ ಪರೀಕ್ಷಾ ವ್ಯವಸ್ಥೆ (ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಂ)ಯನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯದ 788 ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಾರ್ಚ್ 23 ರಿಂದ ಏಪ್ರೀಲ್ 6 ರವರಗೆ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯಲಿದ್ದು, ಕಳೆದ ಬಾರಿಯಂತೆ ಹೆಚ್ಚು ಕಟ್ಟುನಿಟ್ಟಿನ ವ್ಯವಸ್ಥೆ ನಡುವೆ ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಅನೇಕ ವರ್ಷಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಏನಾದರು ಒಂದು ಅಕ್ರಮಗಳು ನಡೆಯುತ್ತಿದ್ದವು. ಕಳೆದ ಸಲದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಬಾರಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಈ ಬಾರಿ ಕೈಗೊಳ್ಳಲಾಗಿದೆ. ಪರೀಕ್ಷೆ ಹಿಂದೆಯೇ ಮೌಲ್ಯ ಮಾಪನ ನಡೆಯಲಿದ್ದು, ಏಪ್ರಿಲ್ ಕೊನೆವಾರದಲ್ಲಿ ಫಲಿತಾಂಶ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಸಿಸಿ ಕ್ಯಾಮೆರಾ ಜೊತೆಗೆ ಅತ್ಯಂತ ಸೂಕ್ಷ್ಮ ಸ್ಥಳಗಳಲ್ಲಿ ಪೋಲಿಸ್ ಬಂದೋ ಬಸ್ತ್ ಕೂಡ ಮಾಡಲಾಗುತ್ತಿದ್ದು, ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಎಚ್ಚರ ವಹಿಸಲಾವುದು ಎಂದು ಅವರು ತಿಳಿಸಿದರು.
ಮಾರ್ಚ್ 1 ರಿಂದ 17 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ
ಚುನಾವಣೆ ಹತ್ತಿರ ಇರುವುದರಿಂದ ಪಿಯುಸಿ ಫಲಿತಾಂಶವನ್ನು ಆದಷ್ಟು ಬೇಗ ಪ್ರಕಟಿಸುವುದಾಗಿ ಮಾಹಿತಿ ನೀಡಿದರು. ಮಾರ್ಚ್ 1ರಿಂದ 17ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ ಮೂರನೇ ವಾರದಲ್ಲಿ ಫಲಿತಾಂಶ ನೀಡಲಾಗುವುದು. ಇದಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಮೌಲ್ಯಮಾಪನಕ್ಕೆ ತಕರಾರಿಲ್ಲದೆ ಸಹಕರಿಸುವುದಾಗಿ ಶಿಕ್ಷಕರೂ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.