ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಿಸಲಾತಿ ಪಡೆಯಲು ಇರುವ ಕೆನೆಪದರ (ಕ್ರೀಮಿ ಲೇಯರ್) ಆದಾಯದ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ನಿಗದಿಗೊಳಿಸಲಾಗಿದ್ದ ಆದಾಯ ಮಿತಿಯನ್ನು 6 ರಿಂದ 8 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಪ್ರತ್ಯೇಕ ಆಯೋಗ ರಚನೆ
ಒಬಿಸಿ ಉಪಜಾತಿಗಳ ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ ರಚಿಸುವ ಇನ್ನೊಂದು ಮಹತ್ವದ ನಿರ್ಧಾರವನ್ನೂ ಕೈಗೊಂಡಿದೆ.
ಒಬಿಸಿಗೆ ನೀಡಲಾದ ಮೀಸಲಾತಿ ಸೌಲಭ್ಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅದರ ಎಲ್ಲ ಉಪಜಾತಿಗಳಿಗೂ ತಲುಪಬೇಕು ಎಂಬ ಆಶಯದೊಂದಿಗೆ ಉಪಜಾತಿಗಳ ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಪ್ರತ್ಯೇಕ ಆಯೋಗವು ಒಬಿಸಿ ಉಪಜಾತಿಗಳಿಗೂ ಸಮವಾಗಿ ಮತ್ತು ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯಗಳನ್ನು ತಲುಪಿಸುವ ಹೊಣೆಯನ್ನು ನಿಭಾಯಿಸಲಿದೆ. ಈ ಆಯೋಗವು ಅಸ್ತಿತ್ವಕ್ಕೆ ಬಂದ 12 ವಾರಗಳ ಒಳಗಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಕೇಂದ್ರ ಪಟ್ಟಿಯಲ್ಲಿರುವ ಒಬಿಸಿಯಲ್ಲಿ ಸದ್ಯ ಯಾವುದೇ ಉಪಜಾತಿಗಳಿಲ್ಲ. ಆದರೆ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಪಶ್ವಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿಯ ಉಪಜಾತಿಗಳಿಗೂ ಮೀಸಲಾತಿ ಸೌಲಭ್ಯ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಒಬಿಸಿ ಕೆನೆಪದರದ ಆದಾಯ ಮಿತಿಯನ್ನು ₹10.50 ಲಕ್ಷಕ್ಕೆ ಏರಿಸುವಂತೆ ಇತ್ತೀಚೆಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಅದರ ಆಧಾರದಲ್ಲಿ ಕೇಂದ್ರ ನಿರ್ಧಾರ ಕೈಗೊಂಡಿದ್ದು ₹8 ಲಕ್ಷಕ್ಕೆ ಏರಿಸಲಾಗಿದೆ.
ಈ ಪ್ರಸ್ತಾಪ ಜಾರಿಗೆ ಬಂದಲ್ಲಿ ಮತ್ತಷ್ಟು ಒಬಿಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯ ಸೌಲಭ್ಯ ಪಡೆಯಲಿದ್ದಾರೆ.