ಇನ್ನುಮುಂದೆ ನೇಮಕಾತಿ ಮಾಡಿಕೊಳ್ಳುವ ಹಕ್ಕನ್ನು ವಿಶ್ವವಿದ್ಯಾಲಯಗಳು ಕಳೆದುಕೊಳ್ಳಲಿವೆ. ರಾಜ್ಯದಲ್ಲಿರುವ ವಿವಿಗಳಲ್ಲಿ ನೇಮಕಾತಿ ವಿಚಾರವಾಗಿ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆ ನೂತನ ನಿರ್ಧಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಕೇಂದ್ರೀಕೃತ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ವಿವಿಗಳಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೇಂದ್ರೀಕೃತ ನೇಮಕಾತಿ ಸಮಿತಿ
ವಿಶ್ವವಿದ್ಯಾಲಯಗಳು ಸ್ವಾಯತ್ತ ಸ್ಥಾನಮಾನ ಹೊಂದಿದ್ದರೂ, ಸಮಿತಿ ರಚನೆಯಾದ ನಂತರ ಯಾವುದೇ ಹುದ್ದೆಗಳಿಗೆ ನೇಮಕಾತಿ ಮಾಡುವಂತಿಲ್ಲ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಈ ಸಮಿತಿಯೇ ನೇಮಿಸಲಿದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ (2000) ತಿದ್ದುಪಡಿ ಮಸೂದೆ ಸಿದ್ಧಪಡಿಸುತ್ತಿದ್ದು, ಕೇಂದ್ರೀಕೃತ ನೇಮಕಾತಿಗೆ ಪೂರಕವಾಗಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.
ಹೊಸ ನೇಮಕಾತಿ ಸಮಿತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವಿ.ಬಿ. ಕುಟಿನ್ಹೊ ಅವರ ಹೆಸರು ಕೇಳಿ ಬರುತ್ತಿದೆ. ಅಧ್ಯಕ್ಷರಾಗಿ ಕುಟಿನ್ಹೊ ಮತ್ತು ಇತರೆ ಮೂರು ಅಥವಾ ನಾಲ್ಕು ಜನರನ್ನು ಸದಸ್ಯರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಆದರೆ ಅಧಿಕೃತವಾಗಿ ಯಾರಾಗಲಿದ್ದಾರೆ ಎನ್ನುವು ಮಾಹಿತಿ ಇನ್ನು ಹೊರಬಿದ್ದಿಲ್ಲ.
ಉನ್ನತಾಧಿಕಾರ ಸಮಿತಿ ರಚನೆಯಾದ ನಂತರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಮೌಖಿಕವಾಗಿ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಸಮಿತಿ ರಚನೆಗೆ ಕಾರಣ
ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾದ್ದರಿಂದ ಅಲ್ಲಿನ ಬೋಧಕ, ಬೋಧಕೇತರ ಹುದ್ದೆಗಳ ನೇಮಕಕ್ಕೆ ಸರ್ಕಾರದ ಅನುಮತಿ ಪಡೆಯಬೇಕಿಲ್ಲ. ಆದರೆ, ಇದನ್ನೇ ನೆಪ ಮಾಡಿಕೊಂಡು ಅನೇಕ ವಿಶ್ವವಿದ್ಯಾಲಯಗಳ ಕುಲಪತಿಗಳು, ನೇಮಕಾತಿಗಳಲ್ಲಿ ಅಕ್ರಮ ಎಸಗಿದ್ದಾರೆಂಬ ದೂರುಗಳು ಬಂದಿದ್ದವು.
ಅರ್ಧಕ್ಕೆ ನಿಂತ ನೇಮಕಾತಿ
ಮೈಸೂರು ವಿವಿ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿ ಸೇರಿದಂತೆ ಈಗಾಗಲೇ ಹಲವು ವಿವಿಗಳಲ್ಲಿ ನೇಮಕಾತಿ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವುದು ಅನೇಕ ಉದ್ಯೋಗಾಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ. ಹೊಸ ನಿಯಮ ಜಾರಿಗೆ ಬಂದ ನಂತರ ಈ ರೀತಿಯ ತೊಂದರೆಗಳು ಸಂಭವಿಸುವುದಿಲ್ಲ ಎನ್ನವುದು ಸಮಾಧಾನದ ಸಂಗತಿ.