ಹೊಸ ಶೈಕ್ಷಣಿಕ ವರ್ಷದ ಪದವಿ ತರಗತಿಗಳ ದಾಖಲಾತಿ ಪ್ರಕ್ರಿಯೆಯು ಅಕ್ಟೋಬರ್ ತಿಂಗಳಿನಿಂದಲೇ ಆರಂಭವಾಗಲಿದೆ ಮತ್ತು ಈ ಭಾರಿ ಸಿಇಟಿ ಅಂಕಗಳನ್ನು ಬಿ.ಎಸ್ಸಿ ಪ್ರವೇಶಾತಿಗೆ ಪರಿಗಣಿಸಲಾಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಈವರ್ಷ ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು ಮತ್ತು ಬಿಎಸ್ಸಿ ಕೋರ್ಸ್ಗಳ ಪ್ರವೇಶಾತಿಗೆ ಸಿಇಟಿ ಅಂಕ ಪರಿಗಣಿಸುವ ಆಲೋಚನೆಯನ್ನು ಕೈಬಿಡಲಾಗಿದೆ. ಯಾವ ವಿಶ್ವವಿದ್ಯಾಗಳಲ್ಲಿ ಪದವಿ ಕೋರ್ಸ್ ಗಳಿಗೆ ಪರೀಕ್ಷೆ ನಡೆದಿಲ್ಲವೋ ಅವುಗಳ ಮಾಹಿತಿ ಪಡೆದುಕೊಂಡಿದ್ದೇವೆ. ರೆಗ್ಯುಲರ್ ಸೆಮಿಸ್ಟರ್ ಕೂಡ ರೆಗ್ಯುಲರ್ ಟೈಂ ಟೇಬಲ್ ಪ್ರಕಾರವೇ ನಡೆಸಬೇಕಾ ಎಂಬ ಬಗ್ಗೆ ಕೂಡ ಚರ್ಚೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಈ ವರ್ಷ ಪಿಯುಸಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ ಹಾಗಾಗಿ ವಿವಿಧ ಕೋರ್ಸ್ಗಳಿಗೆ ಬಹಳ ಬೇಡಿಕೆ ಬರುತ್ತಿದೆ. ವಿಶ್ವವಿದ್ಯಾಲಯಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, 4 ವರ್ಷದ ಪದವಿ ತರಗತಿ ಆರಂಭ ಮಾಡುವ ಮೂಲಕ ಪದವಿ ವ್ಯಾಸಂಗವನ್ನು ಮಾಡುವ ಹಂಬಲವುಳ್ಳ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಿ ಎಂದು ವಿಶ್ವವಿದ್ಯಾಲಯಗಳ .ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.