ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯ ವಿಚಾರವಾಗಿ ಗೊಂದಲದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಕರ್ನಾಟಕ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ಚಿಂತನೆ ನಡೆಸಿದೆ.
ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಅತಂತ್ರರಾಗಿರುವ 3 ಲಕ್ಷ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಏರ್ಪಡಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆಯು ಸಲಹೆ ನೀಡಿದೆ.
ಕೆಎಸ್ಒಯು ಜಾಗಕ್ಕೆ ನೂತನ ಮುಕ್ತ ವಿಶ್ವವಿದ್ಯಾಲಯ?
ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದಿದ್ದರೂ ಅದರಿಂದ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸಾಮರ್ಥ್ಯ ಪರೀಕ್ಷೆ (ಪ್ರೊಫೀಶಿಯೆನ್ಸಿ ಟೆಸ್ಟ್) ಏರ್ಪಡಿಸಬೇಕು. ಈ ಪರೀಕ್ಷೆಯು ವಸ್ತುನಿಷ್ಠ ಮಾದರಿಯಲ್ಲಿದ್ದು, ಆಯಾ ವಿಷಯದ ಪಠ್ಯವನ್ನೊಳಗೊಂಡಿರಬೇಕು. ಇದರಲ್ಲಿ ಉತ್ತೀರ್ಣರಾದವರಿಗೆ ಪದವಿ ಮಾನ್ಯತೆಯನ್ನು ಮಂಜೂರು ಮಾಡಬೇಕು ಎಂದು ವೇದಿಕೆಯು ಸಲಹೆ ನೀಡಿದೆ
ಈ ಪರೀಕ್ಷೆಯನ್ನು ನಡೆಸಲು ರಾಜ್ಯ ಸರಕಾರ ಹಾಗೂ ಮುಕ್ತ ವಿವಿ ಪ್ರಯತ್ನಿಸಬೇಕು. ಇದಕ್ಕೆ ಯುಜಿಸಿಯಿಂದ ಅನುಮತಿ ಪಡೆದುಕೊಳ್ಳಲು ಪ್ರಸ್ತಾವ ಸಲ್ಲಿಸಬೇಕು. ಪರೀಕ್ಷೆಯನ್ನು ಮುಕ್ತ ವಿವಿ ಅಥವಾ ಬಾಹ್ಯ ಸಂಸ್ಥೆಯಿಂದ ಮಾಡಿಸಬಹುದು ಎಂದು ವೇದಿಕೆ ತಿಳಿಸಿದೆ.
ಮುಕ್ತ ವಿಶ್ವವಿದ್ಯಾಲಯವು ಯುಜಿಸಿಯ ಅನೇಕ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಅದಕ್ಕೆ ಮಾನ್ಯತೆ ನೀಡಲು ನಿರಾಕರಿಸಲಾಗಿದೆ. ಮುಕ್ತ ವಿವಿಯು 2016, 2017, 2018 ನೇ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾನ್ಯತೆ ನೀಡಲು ಅರ್ಜಿ ಸಲ್ಲಿಸಿದೆ. ಆದರೆ ಈ ಕುರಿತು ಯುಜಿಸಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇಲ್ಲಿ ವ್ಯಾಸಂಗ ಮಾಡಿ ಪದವಿ, ಡಿಪ್ಲೊಮಾ ಪಡೆದ 3 ಲಕ್ಷ ವಿದ್ಯಾರ್ಥಿಗಳಿಗೆ ಈಗ ಭವಿಷ್ಯವಿಲ್ಲದಂತಾಗಿದೆ.
ವಿಶ್ವವಿದ್ಯಾಲಯದ ಸುಧಾರಣೆ, ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅಧ್ಯಕ್ಷತೆಯಲ್ಲಿ ವ್ಹಿ.ಬಿ. ಕುಟಿನ್ಹೊ, ಬಿ.ಕೆ.ರವಿ, ಎಸ್.ಎ. ಕೋರಿ ಸದಸ್ಯರಾಗಿರುವ ಸಮಿತಿ ರಚಿಸಿ, ನವೆಂಬರ್ 15ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸಮಿತಿ ನೀಡಲಿರುವ ವರದಿ ಆಧರಿಸಿ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ.
ಈ ನಡುವೆ ಮುಕ್ತ ವಿವಿಯು ಮಾನ್ಯತೆ ನೀಡಬೇಕೆಂದು ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದೆ. ಇದು ವಿಚಾರಣೆಯಾಗಿ ಅಂತಿಮ ತೀರ್ಪು ಬರುವವರೆಗೂ ರಾಜ್ಯ ಸರ್ಕಾರ ಯಾವುದೇ ಶಿಫಾರಸ್ಸುಗಳನ್ನು ಮಾಡಿದರೂ, ಕೋರ್ಟ್ ತೀರ್ಪು ಬಂದ ಬಳಿಕವೇ ಆ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ವೇದಿಕೆಯು ಒತ್ತಾಯಿಸಿದೆ.