ನಾಲ್ಕರಿಂದ ಏಳನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಶಿಕ್ಷಣ ಗುಣಮಟ್ಟ ಪರೀಕ್ಷೆಗಾಗಿ ಪಬ್ಲಿಕ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ಸೇಠ್ ಹೇಳಿದ್ದಾರೆ.
ರಾಮನಗರದಲ್ಲಿ ಶಿಕ್ಷಕರ ಶೈಕ್ಷಣಿಕ ಸಾಮಥ್ರ್ಯ ಕುರಿತು ನಡೆಸಲಾದ ಪರೀಕ್ಷೆಯಲ್ಲಿ ಬಹುತೇಕರು ಅನುತ್ತೀರ್ಣರಾಗಿದ್ದು, ಶಿಕ್ಷಣದ ಗುಣಮಟ್ಟ ಸುಧಾರಿಸುವ ಮೂಲ ಉದ್ದೇಶದಿಂದ 4ರಿಂದ 7ನೇ ತರಗತಿವರೆಗೂ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಈಗಾಗಲೇ ಐದು ಮತ್ತು ಏಳನೆ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿತ್ತು. ಈ ವರ್ಷದಿಂದ 4ನೆ ತರಗತಿಯನ್ನು ಸೇರಿಸಿಕೊಂಡು ಒಟ್ಟು 4ರಿಂದ 7ನೇ ತರಗತಿವರೆಗೂ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಅನುತೀರ್ಣರಾದರೆ ಅವರಿಗೆ ಸೂಕ್ತ ತರಬೇತಿ ನೀಡಿ ಪೂರಕ ಪರೀಕ್ಷೆಯನ್ನೂ ನಡೆಸಲಾಗುವುದು. ಪಬ್ಲಿಕ್ ಪರೀಕ್ಷೆಯ ಮೌಲ್ಯಮಾಪನ ಆಯಾ ಶಿಕ್ಷಣಾಧಿಕಾರಿ ಕ್ಷೇತ್ರಗಳ ಶಾಲೆಗಳಲ್ಲೇ ನಡೆಯಲಿದ್ದು, ಒಂದು ಉತ್ತರ ಪತ್ರಿಕೆಯನ್ನು ಮತ್ತೊಂದು ಶಾಲೆಗೆ ಕಳುಹಿಸಿ ಮೌಲ್ಯಮಾಪನ ನಡೆಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹಾಗೂ ಶಿಕ್ಷಕರ ಬೋಧನಾ ಸಾಮರ್ಥ್ಯದ ಮೌಲ್ಯಮಾಪನ ಮಾಡಲು ಮೌಲ್ಯಾಂಕನ ಪರೀಕ್ಷೆ ಸಹಕಾರಿಯಾಗಿದೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್ಕ್ಯೂಎಎಸಿ) ಈ ಪರೀಕ್ಷೆ ನಡೆಸುತ್ತದೆ. ಮೌಲ್ಯಾಂಕನ ಪರೀಕ್ಷೆಯಲ್ಲಿ ಮಕ್ಕಳ ಬೌದ್ಧಿಕ ಗುಣಮಟ್ಟ ಪರೀಕ್ಷಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆ ಯಂತೆಯೇ ಈ ಪರೀಕ್ಷೆಗಳಿದ್ದರೂ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ. ಬದಲಿಗೆ ಪೂರಕ ತರಬೇತಿ ನೀಡಲಾ ಗುವುದು. ವಿದ್ಯಾರ್ಥಿ ತಪ್ಪು ಉತ್ತರ ಬರೆದಿದ್ದ ಪ್ರಶ್ನೆಗಳನ್ನು ಗುರುತಿಸಿ ಅದರ ಸರಿ ಉತ್ತರವನ್ನು ಅದೇ ವಿದ್ಯಾರ್ಥಿಗೆ ಮತ್ತೆ ಮನವರಿಕೆ ಮಾಡಿಸುವ ಕೆಲಸವನ್ನು ಶಿಕ್ಷಕರು ಮಾಡಿಸಲಿದ್ದಾರೆ. ಇದರಿಂದ ಶಿಕ್ಷಕರ ಬೋಧನಾ ಸಾಮರ್ಥ್ಯ ಕೂಡ ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.