ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಗೊಂದಲ ಬಗೆಹರಿಸಲು ಸ್ವತಃ ಮುಖ್ಯಮಂತ್ರಿಗಳೇ ಮುಂದಾಗಿದ್ದಾರೆ.
ಈಗಾಗಲೇ ಸಾಕಷ್ಟು ವಿವಾದಗಳನ್ನು ಹೊತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನ್ಯತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಷಯವಾಗಿ ರ್ಚಚಿಸಲು ಸೆ.16ರಂದು ದೆಹಲಿಗೆ ತೆರಳಲಿದ್ದಾರೆ.
'ಮಾನ್ಯತೆ ವಿಷಯ ಕುರಿತು ಸಿಎಂ ಮಾಹಿತಿ ಪಡೆದುಕೊಂಡಿದ್ದು, ಅವರ ಸೂಚನೆ ಮೇರೆಗೆ ವರದಿಯನ್ನು ತಯಾರಿಸಿ, ನಾನೇ ಖುದ್ದಾಗಿ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿದ್ದೇನೆ' ಎಂದು ಕರಾಮು ವಿವಿ ಕುಲಪತಿ ಪ್ರೊ.ಶಿವಲಿಂಗಯ್ಯ ತಿಳಿಸಿದ್ದಾರೆ.
ಯುಜಿಸಿ ಸೂಚನೆ ಪ್ರಕಾರ ತಾಂತ್ರಿಕ, ಅರೆವೈದ್ಯಕೀಯ ಕೋರ್ಸ್ಗಳನ್ನು ಸ್ಥಗಿತಗೊಳಿಸಲಾಗಿದೆ. ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ)ಕ್ಕೆ ಅಗತ್ಯ ದಾಖಲೆಗಳನ್ನು ಕಳೆದ ಫೆಬ್ರವರಿಯಲ್ಲಿಯೇ ನೀಡಲಾಗಿದೆ. ಆದರೆ, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜತೆಗೆ, ನಮ್ಮ ಪ್ರಸ್ತಾವನೆಯನ್ನು ಒಪ್ಪಿರುವ ಅಥವಾ ತಿರಸ್ಕರಿಸಿರುವ ಕುರಿತೂ ಮಾಹಿತಿ ನೀಡಿಲ್ಲ. ಹೀಗಾಗಿ, 2016-17ನೇ ಮತ್ತು 2017-18ನೇ ಸಾಲಿನ ಮಾನ್ಯತೆ ನವೀಕರಣ ಪ್ರಸ್ತಾವನೆ ಯುಜಿಸಿಯಲ್ಲಿಯೇ ಬಾಕಿ ಉಳಿದಿದೆ' ಎಂದು ಕುಲಪತಿ ಪ್ರೊ.ಶಿವಲಿಂಗಯ್ಯ ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಕ್ತ ವಿವಿ ಮಾನ್ಯತೆ ರದ್ದಾಗಲು ಸರ್ಕಾರ ಕಾರಣವಲ್ಲ. ಹಿಂದೆ ಇದ್ದ ಕುಲಪತಿಗಳ ಮಾಡಿದ ತಪ್ಪಿನಿಂದಾಗಿ ಮಾನ್ಯತೆ ರದ್ದಾಗಿದೆ. ಈ ಬಗ್ಗೆ ಈಗಾಗಲೆ ಕೇಂದ್ರಕ್ಕೆ ಪತ್ರ ಬರೆದಿದ್ದು. ಮುಂದಿನ ಬಾರಿ ದೆಹಲಿ ಭೇಟಿಯ ಸಂದರ್ಭದಲ್ಲಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ
ಆತಂಕ ಸೃಷ್ಠಿಸಿದ ಕಾರ್ಯದರ್ಶಿ ಟ್ವೀಟ್
ಇದೇ ವೇಳೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಅವರ ಟ್ವೀಟ್ ನಿಂದಾಗಿ ಕೆಎಸ್ಒಯು ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. " ಮುಕ್ತ ವಿವಿ ಯುಜಿಸಿ ನಿಯಮಗಳನ್ನ ಉಲ್ಲಂಘಿಸಿರುವುದನ್ನ ನೋಡಿದರೆ, ಸದ್ಯಕ್ಕೆ ಮುಕ್ತ ವಿವಿಗೆ ಮಾನ್ಯತೆ ಸಿಗೋದು ಕಷ್ಟಸಾಧ್ಯ. ಯಾರು ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು" ಟ್ವಿಟರ್ ನಲ್ಲಿ ಅವರು ಬರೆದುಕೊಂಡಿದ್ದರು.