ರಾಜ್ಯದಲ್ಲಿ ಜುಲೈವರೆಗೆ ಶಾಲಾ ಮತ್ತು ಕಾಲೇಜುಗಳನ್ನು ತೆರೆಯದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ದೇಶದೆಲ್ಲೆಡೆ ವ್ಯಾಪಿಸಿರುವ ಈ ಕೊರೋನಾ ಸೋಂಕಿನಿಂದಾಗಿ ಅನೇಕ ಪರೀಕ್ಷೆಗಳು ರದ್ದಾಗಿವೆ. ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಹಾಗೂ ಪರಿಷ್ಕೃತ ವೇಳಾಪಟ್ಟಿಯು ಪ್ರಕಟವಾಗಿದೆ ಮತ್ತು ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ ಆದರೆ ಈಗ ಲಾಕ್ಡೌನ್ ಸಡಿಲಿಕೆಯನ್ನು ಮಾಡಿರುವ ಬೆನ್ನಲ್ಲೆ ಶಾಲಾ ಕಾಲೇಜುಗಳನ್ನು ಜುಲೈವರೆಗೆ ತೆರೆಯುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ.
ಶಾಲೆ, ಕಾಲೇಜು, ಟ್ಯುಟೋರಿಯಲ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಜೂನ್ ಅಂತ್ಯದವರೆಗೆ ತೆರೆಯುವಂತಿಲ್ಲ ಎಂದು ಭಾನುವಾರ ಬಿಡುಗಡೆ ಮಾಡಿದ ಮಾರ್ಗದರ್ಶಿ ಸೂತ್ರಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಇವುಗಳನ್ನು ತೆರೆಯುವ ಬಗ್ಗೆ ಜುಲೈನಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ದ್ವಿತೀಯ ಪಿಯುಸಿ ಬಾಕಿ ಉಳಿದ ಇಂಗ್ಲೀಷ್ ಪರೀಕ್ಷೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳು ನಿಗದಿತ ದಿನಾಂಕದಂದೇ ನಡೆಯಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಲಾಕ್ಡೌನ್ ಸಡಿಲಿಕೆ ಬಗ್ಗೆ ಕೇಂದ್ರ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿದ ನಿಯಮಾವಳಿಯಲ್ಲಿ ಕೇಂದ್ರದ ನಿಯಮಗಳನ್ನೇ ಬಹುತೇಕ ಪಾಲಿಸಲಾಗಿದೆ.