ದಾವಣಗೆರೆ ವಿಶ್ವವಿದ್ಯಾಲಯದ ಬಿಎ ಪದವಿಯ ಮೂರನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಅದಲು ಬದಲು ಆಗಿರುವ ಘಟನೆ ನಡೆದಿದೆ. ಪರೀಕ್ಷಾ ಸಿಬ್ಬಂದಿಗಳ ಎಡವಟ್ಟಿಗೆ ವಿದ್ಯಾರ್ಥಿಗಳು ನಷ್ಟ ಅನುಭವಿಸಬೇಕಾಗಿ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಉಪನ್ಯಾಸಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಯಲುಗೊಂಡು ಪರೀಕ್ಷೆಯನ್ನೇ ಮುಂದೂಡಿದ್ದ ವಿವಿ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಪರೀಕ್ಷಾ ಮೇಲ್ವಿಚಾರಕರ ಎಡವಟ್ಟಿನಿಂದ ಪ್ರಶ್ನೆಪತ್ರಿಕೆ ಅದಲು ಬದಲಾಗಿದ್ದು, ಮೂರು ಗಂಟೆ ವಿದ್ಯಾರ್ಥಿಗಳು ಹಳೆಯ ಪಠ್ಯ ಕ್ರಮದ ಪ್ರಶ್ನೆಪತ್ರಿಕೆಗೆ ಉತ್ತರ ಬರೆದಿದ್ದಾರೆ.
ಭಾನುವಾರ ನಡೆದ ಮೂರನೇ ಸೆಮಿಸ್ಟರ್ ನ್ ಸಮಾಜಶಾಸ್ತ್ರದ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ. ಒಟ್ಟು 40 ವಿದ್ಯಾರ್ಥಿಗಳು ಸಮಾಜಶಾಸ್ತ್ರದ ಪರೀಕ್ಷೆ ಬರೆದಿದ್ದು, 14 ಹಳೆ ವಿದ್ಯಾರ್ಥಿಗಳು, 26 ಹೊಸ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 11 ವಿದ್ಯಾರ್ಥಿಗಳಿಗೆ ಪುನರಾವರ್ತಿತರಿಗೆ ನೀಡಬೇಕಿದ್ದ ಪ್ರಶ್ನೆಪತ್ರಿಕೆ ಸಿಕ್ಕಿದೆ. ವಿವಿಯ ಎಡವಟ್ಟಿಗೆ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ.
ಹಳೆ ವಿದ್ಯಾರ್ಥಿಗಳು ಮತ್ತು ಹೊಸ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದು, ಪ್ರತ್ಯೇಕವಾಗಿ ಕೂರಿಸಲಾಗುತ್ತಿತ್ತು. ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆ ಬೇರೆ ನೀಡಿದ್ದರೂ ಈ ತಪ್ಪು ನಡೆದಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವ ಘಟನೆ ಬಗ್ಗೆ ಗೊತ್ತಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಅವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ದಾವಣಗೆರೆ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎನ್ ಗಂಗಾನಾಯ್ಕ ಹೇಳಿದ್ದಾರೆ.
ಇನ್ನು ಪ್ರಶ್ನೆಪತ್ರಿಕೆ ಅದಲುಬದಲಾದ ಬಗ್ಗೆ ಮೇಲ್ವಿಚಾರಕರಿಗೆ ನಂತರ ಪ್ರಾಂಶುಪಾಲರಿಗೆ ತಿಳಿಸಿದರು ಏನು ಪ್ರಯೋಜನವಾಗಿಲಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಲ್ಲದೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಬಗ್ಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











