ಕೆಲದಿನಗಳ ಹಿಂದಷ್ಟೆ ವಿವಿಗಳ ನೇಮಕಾತಿಗೆ ರಾಜ್ಯ ಸರ್ಕಾರ ತಡೆಯಾಜ್ಞೆ ನೀಡಿತ್ತು, ಆದರೆ ನಿನ್ನೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಮಂಗಳವಾರ ನಡೆದ ರಾಜ್ಯದ ವಿವಿಗಳ ಕುಲಪತಿಗಳ ಸಭೆಯಲ್ಲಿ ರಾಜ್ಯದ ಎಲ್ಲಾ ವಿವಿಗಳಲ್ಲಿ ಸಾಕಷ್ಟು ವರ್ಷಗಳಿಂದ ಖಾಲಿ ಉಳಿದಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭಿಸುವಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸೂಚಿಸಿದ್ದಾರೆ.
ವಿವಿಗಳು ಹುದ್ದೆಗಳು ಭರ್ತಿ ಮಾಡಿಕೊಂಡರೆ ಆರ್ಥಿಕ ಇಲಾಖೆಯಿಂದ ವೇತನಾನುದಾನ ನೀಡಬೇಕಾಗುತ್ತದೆ. ಆದ್ದರಿಂದ ಆರ್ಥಿಕ ಇಲಾಖೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಸಾಕಷ್ಟು ವರ್ಷಗಳಿಂದ ಹುದ್ದೆಗಳು ಭರ್ತಿಯಾಗಿರಲಿಲ್ಲ. ಸರ್ಕಾರದ ಈ ನಿರ್ಧಾರದಿಂದ ವಿವಿ ಶೈಕ್ಷಣಿಕ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕುಲಪತಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ತರಗತಿಗಳನ್ನು ನಡೆಸುತ್ತಿವೆ. ಆದರೂ ಬಹುತೇಕ ವಿಷಯಗಳಿಗೆ ಉಪನ್ಯಾಸಕರ ಕೊರತೆ ಇದೆ.
ವಿವಾದದಲ್ಲಿ ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯ
ಹೊಸ ನೇಮಕಾತಿಗಾಗಿ ಪರಿನಿಯಾಮಳಿಯನ್ನು ವಿವಿಗಳು ರೂಪಿಸಬೇಕಿದೆ. ಅನಂತರ ಖಾಲಿ ಹುದ್ದೆಗಳ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಅನುಮತಿ ಪಡೆದು ಅಧಿಸೂಚನೆ ಹೊರಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಯುಜಿಸಿ ಮಾನ್ಯತೆ ಇದ್ದರಷ್ಟೆ ನೇಮಕಾತಿ
ಯುಜಿಸಿಯಿಂದ ಮಾನ್ಯತೆ ಹೊಂದಿರುವ ಪ್ರವರ್ಗಗಳ ಬೋಧಕ ಹುದ್ದೆಗಳಿಗೆ ಮಾತ್ರ ನೇರ ನೇಮಕ ಪ್ರಕ್ರಿಯೆ ಕೈಗೊಳ್ಳಬೇಕು. ಯುಜಿಸಿ ಮಾನ್ಯತೆ ಪಡೆಯದ ಹುದ್ದೆಗಳಿಗೆ ಯಾವುದೇ ಸನ್ನಿವೇಶದಲ್ಲಿಯೂ ನೇಮಕ ಮಾಡಿಕೊಳ್ಳವಂತಿಲ್ಲ. ಯುಜಿಸಿಯಿಂದ ನಿಗದಿಪಡಿಸಲಾಗಿರುವ ಅರ್ಹತಾ ಮಾನದಂಡವನ್ನು ಯಾವುದೇ ಸಂದರ್ಭದಲ್ಲೂ ಸಡಿಲಗೊಳಿಸುವಂತಿಲ್ಲ ಎಂದು ಕುಲಪತಿಗಳು ಹಾಗೂ ಕುಲಸಚಿವರಿಗೆ ನಿರ್ದೇಶನ ನೀಡಲಾಗಿದೆ.
ಹೊಸದಾಗಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳು ತಮ್ಮದೇ ಆದ ನೇಮಕ ಪರಿನಿಯಾಮಳಿಗಳನ್ನು ರಚಿಸಿ, ಕುಲಾಧಿಪತಿಗಳಿಂದ ಅನುಮೋದನೆ ಪಡೆಯಬೇಕು. ಯುಜಿಸಿ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳು ಒಳಗೊಂಡಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಮೂಲಕ ನೇರ ನೇಮಕ ಪ್ರಕ್ರಿಯೆ ವಿಧಾನ ಅಳವಡಿಸಿಕೊಳ್ಳಲು ವಿಶ್ವವಿದ್ಯಾಲಯಗಳು ಪ್ರಯತ್ನಿಸಬೇಕು.
ನೇಮಕ ಜಾಹೀರಾತು ಪ್ರಕಟಣೆಯ ಆರಂಭಿಕ ಹಂತದಿಂಧ ಅಧಿಸೂಚನೆ ಹೊರಡಿಸುವ ಹಂತದವರೆಗೆ ಅಂದರೆ, ಅನ್-ಲೈನ್ ಪ್ರಕ್ರಿಯೆಯು ಅರ್ಜಿಗಳ ಆಹ್ವಾನ, ಮೀಸಲು ನೀತಿಯ ಅನುಷ್ಠಾನ ಹಾಗೂ ಇತರೆ ಎಲ್ಲಾ ಕ್ರಮಾನುಸರಣೆ ಒಳಗೊಂಡಿರಬೇಕು.