ವಿದ್ಯಾರ್ಥಿಗಳು, ಸಾರ್ವಜನಿಕರು ಇನ್ನು ಮುಂದೆ ಪುಸ್ತಕ ಓದಲು ಪರದಾಡಬೇಕಿಲ್ಲ, ಏಕೆಂದರೆ ಗ್ರಂಥಾಲಯಗಳಲ್ಲಿ ಇರುವ ಪುಸ್ತಕಗಳೆಲ್ಲ ಅಂತರ್ಜಾಲದಲ್ಲೇ ಸಿಗಲಿದ್ದು ಡಿಜಿಟಲ್ ಗ್ರಂಥಾಲಯವು ಸೇವೆಗೆ ಸಿದ್ಧವಾಗಿದೆ.
ಗ್ರಂಥಾಲಯಗಳಲ್ಲಿ ಇರುವ ಹಳೇ ಪುಸ್ತಕಗಳನ್ನು ಪುನರ್ ಮುದ್ರಿಸುವ ಬದಲು ಅಂತರ್ಜಾಲದಲ್ಲಿ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ 50 ಸಾವಿರ ಪುಸ್ತಕವನ್ನು ಅಂತರ್ಜಾಲದಲ್ಲಿ ದಾಖಲಿಸಲಾಗಿದೆ.
ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಅಂಗವಾಗಿ ಭಾನುವಾರ ರಾಜ್ಯ ಕೇಂದ್ರ ಗ್ರಂಥಾಲಯದ ನವೀಕೃತ ಕಟ್ಟಡದ ಉದ್ಘಾಟನೆ, 'ಶತಮಾನದ ಬೆಳಕು' ಕೃತಿ ಬಿಡುಗಡೆ, ಅಂತರ್ಜಾಲ ಕೇಂದ್ರ ಉದ್ಘಾಟನೆ, 'ಶತಮಾನೋತ್ಸವ ಗೀತೆ' ಮತ್ತು ಸಾಕ್ಷ್ಯತ್ರದ ಸಿ.ಡಿ. ಬಿಡುಗಡೆ, ಶತಮಾನೋತ್ಸವ ಸ್ಮರಣಾರ್ಥ ಅಂಚೆಚೀಟಿ ಮತ್ತು ವಿಶೇಷ ಲಕೋಟೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ , ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ವೃತ್ತಿ ರೂಪಿಸಲು ಸಹಾಯಕವಾಗುವ ಮತ್ತು ಅಪರೂಪದ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, 50 ಸಾವಿರ ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ ಎಂದು ಹೇಳಿದ್ದಾರೆ.
ನವೀಕರಣ ವಿಳಂಬ
ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಸರ್ಕಾರಗಳು ಈಗಾಗಲೇ ಸುಸಜ್ಜಿತ ಕೇಂದ್ರ ಗ್ರಂಥಾಲಯಗಳನ್ನು ಹೊಂದಿವೆ ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಡಿಜಿಟಲ್ ಗ್ರಂಥಾಲಯವು ಉನ್ನತ ಮಟ್ಟದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಅವರು ಹೇಳಿದರು.
2015ರಲ್ಲೇ ಆಗಬೇಕಾದ ಈ ಕಾರ್ಯಕ್ರಮ ಬರಗಾಲ ಹಾಗೂ ಕಾವೇರಿ ವಿವಾದದಿಂದ ಸಾಧ್ಯವಾಗಿಲ್ಲ. ಇದೀಗ ಕೇಂದ್ರ ಸರ್ಕಾರದ ಗ್ರಂಥಾಲಯ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ಸೇರಿ 1.37ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ ಎಂದು ವಿಳಂಬಕ್ಕೆ ಸ್ಪಷ್ಟನೆ ನೀಡಿದರು.
ಸಾವಿರ ಐಟಿಎಚ್ ಸ್ಕೂಲ್
ಕಳೆದ ಸಾಲಿನ ಬಜೆಟ್ನಲ್ಲಿ ಒಂದು ಸಾವಿರ ಐಟಿಎಚ್ ಸ್ಕೂಲ್ಗಳನ್ನು ಆರಂಭಿಸಿದ್ದೇವೆ. ಅದೇ ರೀತಿ ಈ ಸಾಲಿನಲ್ಲೂ 1 ಸಾವಿರ ಐಟಿಎಚ್ ಸ್ಕೂಲ್ಗಳನ್ನು ನಿರ್ವಿುಸಲಾಗುವುದು. ಅಲ್ಲದೆ ಒಟ್ಟು 19 ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲಾಗುವುದು. ಉಳಿದಂತೆ ವಿಶಾಲ ಸಭಾಂಗಣ, ಮಕ್ಕಳ ಆಕರ್ಷಣೆ ಹೆಚ್ಚಿಸುವ ಕೊಠಡಿ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಗ್ರಂಥಾಲಯದಲ್ಲಿ ಅಳವಡಿಸುವ ಆಲೋಚನೆಯಿದೆ. ಪ್ರಾಯೋಗಿಕವಾಗಿ ವಿಜಯನಗರದ ಶಾಖಾ ಗ್ರಂಥಾಲಯದಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.
ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಆರಂಭಗೊಳ್ಳಲಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 1204 ಪದವಿಪೂರ್ವ ಕಾಲೇಜುಗಳ ಪೈಕಿ 369 ಕಾಲೇಜುಗಳಲ್ಲಿ ಗ್ರಂಥಾಲಯ ಆರಂಭಿಸಲಾಗುವುದು ಎಂದು ಹೇಳಿದರು.
ರಾಜ್ಯದ ಎಲ್ಲ ಕೇಂದ್ರದಲ್ಲೂ ಗ್ರಂಥಾಲಯ ತೆರೆಯುವ ಯೋಜನೆ ಹೊಂದಿದ್ದು, ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿ, ಗ್ರಂಥಾಲಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.