2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ ಭವನದಲ್ಲಿ ಮಂಡಿಸಿದರು. ಈ ಭಾರಿ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಬಜೆಟ್ ಮಂಡನೆಯಾಗಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಕಾರಣ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟವನ್ನು ಉಂಟು ಮಾಡಿತ್ತು. ಹಾಗಾಗಿ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಲ್ಲಿ ಹಿಂದುಳಿದರು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆಯಡಿ 'ಒಂದು ವರ್ಗ, ಒಂದು ಟಿವಿ ಚಾನೆಲ್' ಕಾರ್ಯಕ್ರಮವನ್ನು 12 ದೂರದರ್ಶನ ಚಾನೆಲ್ಗಳಿಂದ ಒಟ್ಟು 200 ಚಾನೆಲ್ಗಳಿಗೆ ವಿಸ್ತರಿಸಲಾಗುವುದು ಎಂದು ವಿದ್ಯಾರ್ಥಿಸ್ನೇಹಿ ನಡೆಯನ್ನು ಅವರು ಘೋಷಿಸಿದ್ದಾರೆ.
1 ರಿಂದ 12 ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆಗಳಲ್ಲಿ ಪೂರಕ ಶಿಕ್ಷಣವನ್ನು ಒದಗಿಸಲು ಎಲ್ಲಾ ರಾಜ್ಯಗಳಿಗೆ ಈ ಕಾರ್ಯಕ್ರಮವು ಅನುವು ಮಾಡಿಕೊಡುತ್ತದೆ. ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವುದರಿಂದ ಉಂಟಾಗುವ ಕಲಿಕೆಯ ನಷ್ಟದಿಂದ ವಿದ್ಯಾರ್ಥಿಗಳು ಚೇತರಿಸಿಕೊಳ್ಳಲು ಪೂರಕ ಶಿಕ್ಷಣದ ಅಗತ್ಯವನ್ನು ಸರ್ಕಾರ ಗುರುತಿಸುತ್ತದೆ ಎಂದು ಅವರು ಹೇಳಿದರು.
ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಇ-ಕಂಟೆಂಟ್ ಅನ್ನು ರೇಡಿಯೋ, ಟಿವಿ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯನ್ನು ಹೊಂದಿರದವರಿಗೆ ರೇಡಿಯೋ ಮತ್ತು ಡಿಟಿಎಚ್ ಚಾನೆಲ್ಗಳನ್ನು ಒದಗಿಸಲು ಕೇಂದ್ರ ಶಿಕ್ಷಣ ಸಚಿವಾಲಯವು 'ಒಂದು ವರ್ಗ, ಒಂದು ಟಿವಿ ಚಾನೆಲ್' ಅನ್ನು ಪ್ರಾರಂಭಿಸಿದೆ.
ಯುವಜನತೆಗೆ ಬಜೆಟ್ನಲ್ಲಿ ಸಿಹಿ ಸುದ್ದಿ ನೀಡಿರುವ ಅವರು, ಒಟ್ಟಾರೆ 60 ಲಕ್ಷ ಉದ್ಯೋಗ ಭರವಸೆ ನೀಡಿದ್ದಾರೆ. ಇದರಲ್ಲಿ ಆಂತರಿಕವಾಗಿ 30 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟನ್ನು ಡೈನಾಮಿಕ್ ಉದ್ಯಮದ ಅಗತ್ಯತೆಗಳೊಂದಿಗೆ ಜೋಡಿಸಲಾಗುತ್ತದೆ. ನಾಗರಿಕರಲ್ಲಿ ಸಂಬಂಧಿತ ಉದ್ಯೋಗಗಳು, ಉದ್ಯಮಶೀಲತೆಯ ಅವಕಾಶಗಳ ಆವಿಷ್ಕಾರವನ್ನು ಸಕ್ರಿಯಗೊಳಿಸಲು ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಇಕೋಸಿಸ್ಟಮ್ ಇ-ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲ್ ವಿಶ್ವವಿದ್ಯಾಲಯ ಬಹುದೊಡ್ಡ ನಿರ್ಧಾರವಾಗಿದ್ದು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಗುಣಮಟ್ಟದ ಶಿಕ್ಷಣ ನೀಡಲು ಈ ಯೋಜನೆ ತರಲಾಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ಯೋಜನೆಯಲ್ಲಿ ಕೈಜೋಡಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಾಹಿತಿ ನೀಡಿದ್ದಾರೆ.
ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಮಹತ್ವ ಕೊಡುಗೆಗಳು :
* ಕೌಶಲ್ಯಾಭಿವೃದ್ಧಿಗೆ ಆನ್ಲೈನ್ ತರಬೇತಿ ಒದಗಿಸುವುದು
* ಮಾತೃಭಾಷೆಯಲ್ಲಿಯೇ ಡಿಟಿಟಲ್ ಪಠ್ಯ ಲಭ್ಯ
* ಸರ್ಕಾರಿ ಶಾಲೆ ಮಕ್ಕಳಿಗೆ ಒಂದು ವರ್ಗ ಒಂದು ಟಿವಿ ಕಾರ್ಯಕ್ರಮ ಯೋಜನೆ
* ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗಿದೆ
* 12 ರಿಂದ 200 ಟಿವಿ ಚಾನೆಲ್ಗಳ ವಿಸ್ತರಣೆ ಮೂಲಕ ಪರ್ಯಾಯ ಶಿಕ್ಷಣ ಯೋಜನೆ
* ಕೊರೊನಾ ಸಾಂಕ್ರಾಮಿಕದಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಪಾಠ ಮಾಡುವುದು
* 1 ರಿಂದ 12 ನೇ ತರಗತಿ ವರೆಗೆ ಆನ್ಲೈನ್ ಶಿಕ್ಷಣಕ್ಕೆ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಮಾಡಲಾಗುವುದು
* 2 ಲಕ್ಷ ಅಂಗನವಾಡಿಗಳ ಉನ್ನತೀಕರಣಕ್ಕೆ ಒತ್ತು ನೀಡಲಾಗಿದೆ
* ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಪರಿಷ್ಕೃತಗೊಳಿಸಿ, ನೈಸರ್ಗಿಕ, ಕಡಿಮೆ ವೆಚ್ಚ, ಜೈವಿಕ ಕೃಷಿ, ಆಧುನಿಕ ಕೃಷಿ ಸಂಸ್ಕೃತಿಗೆ ತಕ್ಕಂತೆ ಅಳವಡಿಸುವ ಯೋಜನೆಯಿದೆ.
* ಯುವಜನತೆ ಕೌಶಲ್ಯ ತರಬೇತಿ ನೀಡುವುದು, ರೀಸ್ಕಿಲಿಂಗ್ ಗಾಗಿ DESH e-portal ಸ್ಥಾಪನೆ ಮಾಡಲಾಗಿದೆ
* ಆನ್ಲೈನ್ ಶಿಕ್ಷಣಕ್ಕಾಗಿ ಉತ್ತಮ ತರಬೇತಿಯನ್ನು ಶಿಕ್ಷಕರಿಗೂ ನೀಡಲು ಗುಣಮಟ್ಟದ ಇ-ಮಾಹಿತಿ ಅಭಿವೃದ್ಧಿಪಡಿಸಲಾಗುವುದು.