2016-17 ನೇ ಸಾಲಿನ ರಾಷ್ಟ್ರೀಯ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಕರ್ನಾಟಕದ 8 ಶಾಲೆಗಳು ಆಯ್ಕೆಯಾಗಿವೆ.
ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ ಡಿ) ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸ್ಚಚ್ಛ ಭಾರತ ರಾಷ್ಟ್ರಿಯ ಸ್ಚಚ್ಛ ವಿದ್ಯಾಲಯ ಪುರಸ್ಕಾರ ಯೋಜನಾ ಸ್ಪರ್ಧೆಯನ್ನು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ನಗರ, ಗ್ರಾಮೀಣ ವಿಭಾಗದಲ್ಲಿ ನೈರ್ಮಲ್ಯ ಮತ್ತು ನೈರ್ಮಲ್ಯದ ಅಭ್ಯಾಸ ಉತ್ತೇಜನಕ್ಕಾಗಿ ಆಯೋಜಿಸಲಾಗಿತ್ತು.
ಶಾಲೆಗಳಲ್ಲಿನ ನೀರು, ಶೌಚಾಲಯ, ಸಾಬೂನಿನಿಂದ ಕೈ ತೊಳೆಯೋ ಅಭ್ಯಾಸ, ಉತ್ತಮ ಕಾರ್ಯವಿಧಾನ ಮತ್ತು ನಿರ್ವಹಣೆ ಹಾಗೂ ನಡವಳಿಕೆಯಲ್ಲಿನ ಬದಲಾವಣೆ ಮತ್ತು ಸಾಮರ್ಥ್ಯ ವೃದ್ಧಿಯ ಮಾನದಂಡವನ್ನಾಧರಿಸಿ ಶಾಲೆಗಳ ಶುಚಿತ್ಚವನ್ನು ನಡೆಸಲಾಗಿತ್ತು.

ರಾಜ್ಯಮಟ್ಟದ ಪ್ರಾಥಮಿಕ ವಿಭಾಗದಿಂದ 20 ಹಾಗೂ ಮಾಧ್ಯಮಿಕ ವಿಭಾಗದಿಂದ 20 ಶಾಲೆಗಳ ಸಹಿತ ಒಟ್ಟು 40 ಶಾಲೆಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು ಉಡುಪಿ 2, ದಕ್ಷಿಣ ಕನ್ನಡ 2, ಕೊಡಗು, ಮೈಸೂರು, ಬೆಂಗಳೂರು ನಗರ (ದಕ್ಷಿಣ), ಹಾಸನದ ತಲಾ ಒಂದು ಶಾಲೆಗಳ ಸಹಿತ ಒಟ್ಟು 3 ಪ್ರಾಥಮಿಕ, 5 ಮಾಧ್ಯಮಿಕ ಶಾಲೆಗಳು ಪುರಸ್ಕಾರ ಗಳಿಸಿವೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸೂಡ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಗ್ರಾಮೀಣ ಮಾಧ್ಯಮಿಕ ವಿಭಾಗದಲ್ಲಿ ಶೇ.84 ಅಂಕಗಳಿಸಿ ಮೊದಲ ಸ್ಥಾನದಲ್ಲಿದೆ. ಕಾರ್ಕಳ ತಾಲೂಕಿನ ಪೆರ್ವಾಜೆಯ ಸುಂದರ ಪುರಾಣಿಕ್ ಸರಕಾರಿ ಪ್ರೌಢಶಾಲೆ ನಗರ ಮಾಧ್ಯಮಿಕ ವಿಭಾಗದಲ್ಲಿ ಶೇ.81 ಅಂಕ ಗಳಿಸಿದೆ.
ನಗರ ಪ್ರಾಥಮಿಕ ವಿಭಾಗದಲ್ಲಿ ಬೆಂಗಳೂರು ನಗರ(ದಕ್ಷಿಣ) ಅನ್ನಸಂದ್ರ ಸರ್ಕಾರಿ ಶಾಲೆ ಶೇ.80 ಹಾಗೂ ಹಾಸನದ ಅಗ್ರಹಾರ ಎಸ್ ಕೆ ಪಿ ಸರಕಾರಿ ಶಾಲೆ ಶೇ.76 ಅಂಕ ಪಡೆದಿದೆ.
ಗ್ರಾಮೀಣ ಮಾಧ್ಯಮಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಬೈಲು ಸರಕಾರಿ ಹಿ.ಪ್ರಾ ಶಾಲೆ ಶೇ.76, ನಡಗೋಡು ಸರಕಾರಿ ಹಿ.ಪ್ರಾ ಶಾಲೆ ಶೇ.77 ಅಂಕಗಳಿಸಿವೆ. ಗ್ರಾಮೀಣ ಮಾಧ್ಯಮಿಕ ವಿಭಾಗದಲ್ಲಿ ಕೊಡಗಿನ ಬದ್ರಗೋಳ ಹೆಬ್ಬಾಳೆ ಸರಕಾರಿ ಕಿ.ಪ್ರಾ ಶಾಲೆ ಶೇ.83.2, ನಗರ ಮಾಧ್ಯಮಿಕ ವಿಭಾಗದಲ್ಲಿ ಮೈಸೂರಿನ ಕುವೆಂಪುನಗರ ಸಂಯುಕ್ತ ಜೂನಿಯರ್ ಕಾಲೇಜು ಶೇ.81 ಅಂಕ ಪಡೆದಿವೆ.
ರಾಷ್ಟ್ರದ್ಯಂತ ಒಟ್ಟು 643 ಶಾಲೆಗಳ ಆಯ್ಕೆಯಾಗಿದ್ದು, ಅದರಲ್ಲಿ ಅಂತಿಮವಾಗಿ 172 ಶಾಲೆಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಆಯ್ಕೆಯಾದ ಶಾಲೆಗಳಿಗೆ ಸೆಪ್ಟೆಂಬರ್ 1ರಂದು ಹೊಸದಿಲ್ಲಿಯ ಎಪಿಎಸ್ ಕಾಲೊನಿಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಆಡಿಟೋರಿಯಂನಲ್ಲಿ ಬೆಳಗ್ಗೆ 10 ಗಂಟೆಗೆ 50.ಸಾವಿರ ರೂ. ಬಹುಮಾನ, ಪ್ರಮಾಣ ಪತ್ರ ಪ್ರದಾನವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಾಡಲಿದ್ದಾರೆ.


Click it and Unblock the Notifications











