ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಕೌನ್ಸಲಿಂಗ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಿಇಟಿ ಬರೆದು ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಎಂಜಿನಿಯರಿಂಗ್ ಕೌನ್ಸೆಲಿಂಗ್ನಲ್ಲಿ ಮಾತ್ರ ಪಾಲ್ಗೊಳ್ಳಲು ಅವಕಾಶ ಇದೆ. ಸಿಇಟಿ 2ನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆ ಬಳಿಕ ಉಳಿದ ಸೀಟುಗಳನ್ನು ಈ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಿಇಟಿ ಮೆರಿಟ್ ಪಡೆದ ವಿದ್ಯಾರ್ಥಿಗಳ ರ್ಯಾಂಕ್ ಪಟ್ಟಿಯನ್ನು ಬುಧವಾರ (ಜುಲೈ 26) ದಂದು ಕೆಇಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ದಾಖಲಾತಿ ಪರಿಶೀಲನೆ ಜುಲೈ 28 ಮತ್ತು 29ರಂದು ನಡೆಯುತ್ತದೆ. ಆ. 1ರ ಸಂಜೆ 4ಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ.
ಎರಡನೇ ಸುತ್ತಿನ ಸೀಟು ಹಂಚಿಕೆ
ಸಿಇಟಿ ಎರಡು ಸುತ್ತಿನ ಸೀಟು ಹಂಚಿಕೆ ಬಳಿಕ ಖಾಲಿ ಉಳಿದ ಸೀಟುಗಳಿಗೆ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ಈ ಹಿಂದಿನ ಸುತ್ತಿನಲ್ಲಿ ಸೀಟು ಪಡೆದು ಬಳಿಕ ರದ್ದುಪಡಿಸಲಾದ, ಕಾಲೇಜುಗಳಿಂದ ಹೊಸದಾಗಿ ಸೇರಿಸಲ್ಪಟ್ಟ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ತೋಟಗಾರಿಕೆ, ಪಶುಸಂಗೋಪನೆ, ಬಿ-ಫಾರ್ಮಾ, ಆಯುಷ್ ಕೋರ್ಸ್ಗಳ ಸೀಟುಗಳನ್ನು ಈ ಸುತ್ತಿನಲ್ಲಿ ಹಂಚಿಕೆ ಮಾಡಲಾಗುತ್ತದೆ.
ಆಯ್ಕೆಗಳನ್ನು ದಾಖಲಿಸಲು ಜುಲೈ 27ರ ಸಂಜೆ 5ರವರೆಗೆ ಅವಕಾಶ ಇದೆ. ಜುಲೈ 29ರಂದು ಬೆಳಿಗ್ಗೆ 11ಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ. ಸೀಟುಗಳನ್ನು ದೃಢೀಕರಿಸಿ ಶುಲ್ಕ ಪಾವತಿಸಲು ಜುಲೈ 31 ಕೊನೆಯ ದಿನ. ಅದೇ ದಿನ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಸೂಚಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸೂಚನೆ
- ಎರಡನೇ ಸುತ್ತಿನಲ್ಲಿ ಎಲ್ಲ ಕೋರ್ಸ್ಗಳಿಗೂ ಹೊಸದಾಗಿ ಆಯ್ಕೆಗಳನ್ನು (ಆಪ್ಷನ್ ಎಂಟ್ರಿ) ದಾಖಲಿಸಲು ಅವಕಾಶ ಇದೆ.
- ಮೊದಲೆರೆಡು ಸುತ್ತಿನಲ್ಲಿ ಸೀಟು ಪಡೆದವರು ಈಗ ಹೊಸದಾಗಿ ಆಯ್ಕೆ ದಾಖಲಿಸಲು ಬಯಸಿದಲ್ಲಿ 27ರ ಸಂಜೆ 5ರೊಳಗೆ ಈಗಾಗಲೇ ಪಡೆದ ಸೀಟನ್ನು ರದ್ದುಪಡಿಸಿಕೊಳ್ಳಬೇಕು. ಅಂತಹ ಅಭ್ಯರ್ಥಿಗಳು ಪಾವತಿಸಿದ ಮೊತ್ತದಲ್ಲಿ ರೂ.5,000 ಹಿಡಿದು ಉಳಿದ ಮೊತ್ತ ಹಿಂದಿರುಗಿಸಲಾಗುತ್ತದೆ.
- ನಿಗದಿತ ಅವಧಿ ಪೂರ್ಣಗೊಂಡ ಬಳಿಕ ಸೀಟು ರದ್ದು ಮಾಡಿದರೆ ಪೂರ್ತಿ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
- ಎರಡನೇ ಮುಂದುವರಿದ ಸುತ್ತಿನಲ್ಲಿ ಹಂಚಿಕೆಯಾಗುವ ಸೀಟನ್ನು ರದ್ದುಪಡಿಸಿಕೊಂಡರೆ ಪೂರ್ಣ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.