ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಸೀಟು ಪಡೆಯುವ ಉದ್ದೇಶದಿಂದ ಸುಳ್ಳು ಪ್ರಮಾಣ ಪತ್ರ ನೀಡಿ ಮೀಸಲಾತಿ ಪಡೆಯುವುದನ್ನು ತಪ್ಪಿಸಲು ಶಿಕ್ಷಣ ಇಲಾಖೆ ನೂತನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಮೀಸಲಾತಿ ಸೀಟುಗಳಲ್ಲಿ ಅಕ್ರಮ ನಡೆದಿರುವುದು ಕಂಡುಬಂದಲ್ಲಿ ತಕ್ಷಣವೇ ಆ ಸೀಟು ಸಾಮಾನ್ಯ ವರ್ಗಕ್ಕೆ ಬದಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಹೇಗಾದರು ಮಾಡಿ ಉತ್ತಮ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲೇಬೇಕೆಂಬ ಉದ್ದೇಶದಿಂದ ಬಹುತೇಕ ಪಾಲಕರು ಮೀಸಲಾತಿಯ ಸೀಟುಗಳ ಮೇಲೆ ಕಣ್ಣಿಟ್ಟಿರುವುದು ಬೆಳಕಿಗೆ ಬಂದಿದೆ. ವಿಶೇಷ ಅಗತ್ಯವುಳ್ಳ ಮಕ್ಕಳು ಎಂಬ ವರ್ಗದಲ್ಲಿ ಅರ್ಜಿ ಸಲ್ಲಿಸಿ ಸೀಟು ಗಿಟ್ಟಿಸುವ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರ್ ಟಿ ಇ ಸೀಟುಗಳ ಲೆಕ್ಕ
ಏಪ್ರಿಲ್ 15 ಆರ್ ಟಿ ಇ ಗೆ ಅರ್ಜಿ ಸಲ್ಲಿಸಲು ಕಡೆಯ ದಿನವಾಗಿತ್ತು. ಪೋಷಕರ ತೀವ್ರ ಒತ್ತಾಯದಿಂದಾಗಿ ಎರಡು ಬಾರಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮುಂದೂಡಲಾಗಿತ್ತು. ಈವರೆಗೂ 2.1 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.
ಲಭ್ಯವಿರುವ ಸೀಟುಗಳು 1.30 ಲಕ್ಷ
ನೋಂದಾಯಿಸಿರುವ ಅರ್ಜಿಗಳು 2.1 ಲಕ್ಷ
ಈ ವರ್ಷ ಲಭ್ಯವಿರುವ 1.30 ಲಕ್ಷ ಸೀಟುಗಳಿಗೆ 2.1 ಲಕ್ಷ ಅರ್ಜಿಗಳು ಬಂದಿದ್ದು, ಈ ಪೈಕಿ 3,500 ಅಂಗವೈಕಲ್ಯ ಕೋಟಾದಡಿ ವಿಶೇಷ ಅಗತ್ಯವುಳ್ಳ ಮಕ್ಕಳ ವರ್ಗಕ್ಕೆ ಸೇರಿದವಾಗಿವೆ.
ರೈತರ ಆತ್ಮಹತ್ಯೆ ಹೆಸರಲ್ಲಿ ಅರ್ಜಿ
ನೋಂದಾವಣೆಗೊಂಡ ಒಟ್ಟು ಅರ್ಜಿಗಳಲ್ಲಿ 402 ಅರ್ಜಿಗಳು ರೈತರ ಆತ್ಮಹತ್ಯೆ ವಿಭಾಗದಲ್ಲಿ ಬಂದಿದೆ. ಬೆಂಗಳೂರು ವಿಭಾಗದಲ್ಲಿ ಸೀಟು ಪಡೆಯಲು ಹೆಚ್ಚಿನ ಜನ ಬಯಸುತ್ತಿರುವುದು ಗೊತ್ತಾಗಿದೆ. 24,613 ಅರ್ಜಿಗಳು ಬೆಂಗಳೂರು ಉತ್ತರ ಹಾಗೂ 31,867 ಬೆಂಗಳೂರು ದಕ್ಷಿಣ ವಿಭಾಗಕ್ಕೆ ಬಂದಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಹೀಗಾಗಿ ಒಟ್ಟಾರೆ ಈ ವರ್ಷ ಆರ್ಟಿಇ ಸೀಟು ಪಡೆಯಲು ಸಾಕಷ್ಟು ಪೈಪೋಟಿ ಇದೆ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಸಾಮಾನ್ಯ ಸೀಟಿಗೆ ವರ್ಗಾವಣೆ
ಈಗಾಗಲೇ ಹಲವು ಕಡೆ ನಕಲಿ ಪ್ರಮಾಣ ಪತ್ರಗಳನ್ನು ನೀಡುರುವ ಮಾಹಿತಿ ದೊರೆತಿದೆ, ಆದರೆ ಪ್ರಮಾಣ ಪತ್ರಗಳ ನೈಜತೆಯ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ಅಂತಹ ಸೀಟುಗಳನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.


Click it and Unblock the Notifications











