ಫೈನ್ ಆರ್ಟ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಈಗ ಸಂಕಷ್ಟ ಎದುರಾಗಿದೆ. ರಾಜ್ಯದ ಕೆಲವು ವಿವಿಗಳ ಉದಾಸೀನತೆಯಿಂದಾಗಿ ಉನ್ನತ ವ್ಯಾಸಂಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬಯಸುವ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶವೇ ಇಲ್ಲದಂತಾಗಿದೆ.
ರಾಜ್ಯದ ಕೆಲವು ವಿಶ್ವವಿದ್ಯಾಲಯದ ಚಿತ್ರಕಲಾ ಕಾಲೇಜುಗಳು ಹಾಗೂ ಚಿತ್ರಕಲಾ ಮಹಾವಿದ್ಯಾಲಯಗಳು ಯುಜಿಸಿ ನಿಯಮಾವಳಿಯಂತೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳದಿರುವುದೇ ಇದಕ್ಕೆ ಕಾರಣ.
ಎಸ್ ಎಸ್ ಎಲ್ ಸಿ ಪೂರೈಸಿ ಬಂದವರಿಗೆ ಮಾನ್ಯತೆ ಇಲ್ಲ
ಈ ಹಿಂದೆ ಎಸ್ಎಸ್ಎಲ್ಸಿ ಪ್ರಮಾಣ ಪತ್ರ ಆಧರಿಸಿಯೇ 5 ವರ್ಷದ ಫೈನ್ ಆರ್ಟ್ ಕೋರ್ಸ್ ಅನ್ನು ವಿದ್ಯಾರ್ಥಿಗಳು ಪಡೆಯಬಹುದಿತ್ತು. ಆದರೆ ಯುಜಿಸಿ ವಿಶುವಲ್ ಆರ್ಟ್ ಮಾಡೆಲ್ ಕರಿಕ್ಯೂಲಮ್-2001 ರ ಅನುಸಾರ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಫೈನ್ ಆರ್ಟ್ ಕೋರ್ಸ್ ಅನ್ನು ವಿದ್ಯಾರ್ಥಿಗಳಿಗೆ ಪಿಯುಸಿ ಬಳಿಕವೇ ಪಡೆಯುವ ನಿಯಮಾವಳಿಯನ್ನು ಹೊರಡಿಸಲಾಗಿದೆ.

ಆ ಬಳಿಕ ದೇಶದ ವಿವಿಧೆಡೆ ಹೆಚ್ಚಿನ ವಿಶ್ವವಿದ್ಯಾಲಯಗಳು ಫೈನ್ ಆರ್ಟ್ ಕೋರ್ಸ್ಗೆ ದ್ವಿತೀಯ ಪಿಯುಸಿ ಶಿಕ್ಷಣವನ್ನು ನಿಗದಿಪಡಿಸಿದವು. ಆದರೆ ಈ ನಿಯಮಾವಳಿಯನ್ನು ರಾಜ್ಯದ ಬಹುತೇಕ ಫೈನ್ ಆರ್ಟ್ ಕೋರ್ಸ್ ನಡೆಸುವ ವಿವಿಗಳು ಅನುಸರಿಸದ ಕಾರಣ ಕರ್ನಾಟಕದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
ದೇಶದ ಉನ್ನತ ಶಿಕ್ಷಣದ ನಿರ್ವಹಣೆಗಾಗಿ ಇರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಇದರ ನಿಯಮಾವಳಿ ಪ್ರಕಾರವೇ ದೇಶದ ಎಲ್ಲ ವಿಶ್ವವಿದ್ಯಾಲಯಗಳು ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಯುಜಿಸಿ ಆದೇಶವನ್ನು ನಮ್ಮ ರಾಜ್ಯದ ಕೆಲವು ವಿವಿಗಳು ಪಾಲಿಸದೇ ಇರುವದರಿಂದ ವಿದ್ಯಾರ್ಥಿಗಳಿಗೆ ಹೊರರಾಜ್ಯದಲ್ಲಿ ಸ್ನಾತಕೊತ್ತರ ಪದವಿ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಯುಜಿಸಿ ನಿಯಮಗಳನ್ನೇ ಅನುಸರಿಸುತ್ತಿದೆ. ಆದರೆ ಮಂಗಳೂರಿನಲ್ಲೇ ಇರುವ ಮಹಾಲಸಾ ವಿದ್ಯಾಲಯ ಹಂಪಿಯ ಕನ್ನಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಎಸ್ಎಸ್ಎಲ್ಸಿ ಪ್ರಮಾಣ ಪತ್ರ ಆಧರಿಸಿ ವಿದ್ಯಾರ್ಥಿಗಳಿಗೆಈ ಬಾರಿಯೂ ಪ್ರವೇಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್, ಬೆಂಗಳೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಯುಜಿಸಿನಿಯಮಾವಳಿಗಳನ್ನು ಪಾಲಿಸಿಪಿಯುಸಿ ಬಳಿಕವೇ ಫೈನ್ ಆರ್ಟ್ ಕೋರ್ಸ್ಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದ ಹಲವು ವಿವಿಗಳಲ್ಲಿ ಇದೇ ಸಮಸ್ಯೆ
ಯುಜಿಸಿ ನಿಯಮಾವಳಿ ಇದ್ದರೂ ಇದನ್ನು ಪರಿಗಣಿಸದೆ 2017- 18 ಪ್ರವೇಶಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ , ಕನ್ನಡ ವಿಶ್ವವಿದ್ಯಾಲಯದ ಹಂಪಿಯ ಬಾದಾಮಿ ಕೇಂದ್ರದ ಚಿತ್ರಕಲಾ ವಿಭಾಗ ಮತ್ತೆ ಎಸ್ಎಸ್ಎಲ್ಸಿ ಮಾನದಂಡದಂತೆ ಅರ್ಜಿ ಆಹ್ವಾನಿಸಿ ತರಗತಿ ನಡೆಸಲಾಗುತ್ತಿದೆ.
ಸಮಸ್ಯೆ ಕುರಿತು ಸಚಿವರಿಗೆ ಪತ್ರ
ವಿಶ್ವವಿದ್ಯಾಲಯಗಳಿಂದ ಆಗಿರುವ ಪ್ರಮಾದದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಈಗಾಗಲೇ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಿಳಿಸಿರುವುದಾಗಿ ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತಿರುವ ಚಂದ್ರಕಾಂತ ಜಟ್ಟಣ್ಣನವರ್ ಹೇಳುತ್ತಾರೆ.


Click it and Unblock the Notifications











