ಶಾಲಾ ಕಾಲೇಜುಗಳಲ್ಲಿ ರ್ಯಾಂಕ್ ಬಂದ ವಿದ್ಯಾರ್ಥಿಗಳನ್ನು 'ನೀನು ಮುಂದೇನಾಗುವೆ?' ಎಂದು ಕೇಳಿದರೆ ಡಾಕ್ಟರ್, ಇಂಜಿನಿಯರ್, ಐಎಎಸ್ ಎಂಬ ದೊಡ್ಡ ದೊಡ್ಡ ಹುದ್ದೆಗಳ ಹೆಸರು ಕೇಳಿ ಬರುವುದು ಸಹಜ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಎಲ್ಲವನ್ನು ತೊರೆದು ಸನ್ಯಾಸಿಯಾಗಿದ್ದಾರೆ.
12ನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಯೋರ್ವ ಸನ್ಯಾಸಿ ಆಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಹೀಗೆ ಸನ್ಯಾಸಿಯಾಗಿರು ವಿದ್ಯಾರ್ಥಿ ಹೆಸರು ವರ್ಷಿಲ್ ಷಾ. ಕಳೆದ ತಿಂಗಳ ಹಿಂದಷ್ಟೇ ಗುಜರಾತ್ ಪ್ರೌಢ ಶಿಕ್ಷಣ ಮಂಡಳಿ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿತ್ತು. 17 ವರ್ಷದ ವರ್ಷಿಲ್ ಪರೀಕ್ಷೆಯಲ್ಲಿ ಶೇ.99.9 ರಷ್ಟು ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು.
ಪರೀಕ್ಷೆಯಲ್ಲಿ ಶೇಕಡ 99.9 ಅಂಕಗಳು ಲಭಿಸಿರುವ ವರ್ಷಿಲ್ ಗೆ ಜೈನ ಸನ್ಯಾಸಿಯಾಗುವ ಬಯಕೆ. ಎಲ್ಲ ವ್ಯಾಮೋಹಗಳನ್ನು ತೊರೆದು, ದೀಕ್ಷೆ ಪಡೆಯುವ ಮೂಲಕ ಜೈನ ಸನ್ಯಾಸಿಯಾಗಿದ್ದಾರೆ.
ಅಹಮದಾಬಾದ್ ನ ವರ್ಷಿಲ್ ಅವರ ತಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿ. ಮಗನ ನಿರ್ಧಾರಕ್ಕೆ ತಂದೆ-ತಾಯಿ ಸಹ ಬೆಂಬಲ ನೀಡಿದ್ದಾರೆ. ವರ್ಷಿಲ್ ಅವರು ಕೈಗೊಂಡಿರುವ ನಿರ್ಧಾರಕ್ಕೆ ಪೋಷಕರಿಗೆ ಅಚ್ಚರಿಯಾಗಿಲ್ಲ. ಬದಲಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ವರ್ಷಿಲ್ ಈಗ ಸುವೀರ್ಯರತ್ನ ವಿಜಯಾಜಿ ಮಹರಾಜ್
ಸೂರತ್ ನ ತಪಿ ನದಿಯ ತೀರದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ವರ್ಷಿಲ್ ತಮ್ಮ ಆದ್ಯಾತ್ಮಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವರ್ಷಿಲ್ ಷಾ ಜೈನ ಧರ್ಮದ ಶ್ವೇತಾಂಬರ ದೀಕ್ಷೆ ಪಡೆಯುವ ಮುನ್ನ ತನ್ನ ಆಡಂಬರದ ಪೋಷಾಕು ಮತ್ತು ಆಭರಣಗಳನ್ನು ಪೋಷಕರಿಗೆ ಒಪ್ಪಿಸಿ ತಮ್ಮ ಗುರುಗಳಾದ ಕಲ್ಯಾಣ ರತ್ನ ವಿಜಯರವರಿಂದ ದೀಕ್ಷೆ ಪಡೆದಿದ್ದಾರೆ.