ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಚಿತವಾಗಿ ನೀಡುವ ಪಠ್ಯಪುಸ್ತಕಗಳನ್ನು ಮರುಬಳಕೆ ಮಾಡುವಂತೆ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಆದೇಶ ನೀಡಿದೆ.
ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಪುಸ್ತಕ ಬ್ಯಾಂಕ್ ತೆರೆಯುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ಪರೀಕ್ಷೆ ಮುಗಿದ ಬಳಿಕ ಪುಸ್ತಕಗಳನ್ನು ವಾಪಸ್ ಪಡೆಯಲು ಎಲ್ಲಾ ಶಾಲೆಗಳಲ್ಲೂ 'ಪುಸ್ತಕ ಬ್ಯಾಂಕ್' ಪ್ರಾರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲಾಗುತ್ತಿದೆ. ತರಗತಿಯಿಂದ ಉತ್ತೀರ್ಣರಾಗಿ ಹೋದ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ಮತ್ತೆ ಬಳಸುವುದಿಲ್ಲ ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ.
ಈ ಪಠ್ಯ ಪುಸ್ತಕವನ್ನು ವ್ಯರ್ಥ ಮಾಡದೆ ಮರುಬಳಕೆ ಮಾಡಬೇಕು. ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳಿಂದ ಹಳೆ ಪಠ್ಯ ಪುಸ್ತಕಗಳನ್ನು ಪಡೆದುಕೊಳ್ಳಬೇಕು. ಬಳಿಕ ಇದನ್ನು ಸಂಗ್ರಹಿಸಿ ಬ್ಯಾಂಕ್ ಮಾಡಬೇಕು. ಶಾಲಾ ಮುಖ್ಯಸ್ಥರ ನೇತೃತ್ವದಲ್ಲಿ ಬ್ಯಾಂಕ್ ಆರಂಭವಾಗಬೇಕು ಎಂದು ಇಲಾಖೆಯು ಸೂಚನೆ ನೀಡಿದೆ.
2015 ರಲ್ಲಿ ಮರುಬಳಕೆಗೆ ವಿರೋಧ
ಹಿರಿಯ ವಿದ್ಯಾರ್ಥಿಗಳು ಬಳಸಿದ ಮೇಲೆ ರಕ್ಷಾಪುಟ ಸಡಿಲಗೊಂಡು ಕೆಲವು ಹಾಳೆಗಳು ಕಾಣೆಯಾಗಿರುತ್ತವೆ. ಉತ್ತರಗಳನ್ನು ಗುರುತು ಮಾಡಿರುತ್ತಾರೆ. ಬರೆದಿರುತ್ತಾರೆ. ಚಿತ್ರಗಳಿಗೆ ಬಣ್ಣ ಹಾಕಿರುತ್ತಾರೆ. ಹೀಗಿದ್ದಾಗ ಕಿರಿಯ ವಿದ್ಯಾರ್ಥಿಗೆ ಇದರಿಂದ ಕಿರಿಕಿರಿಯಾಗುತ್ತದೆ.
ಸ್ವಕಲಿಕೆ, ಸ್ವವೇಗದ ಕಲಿಕೆ, ಸ್ವಮೌಲ್ಯಮಾಪನ ಮಾಡಿಕೊಳ್ಳಲು ಅಡ್ಡಿಯಾಗುತ್ತದೆ. ಶಾಲೆಗೆ ಚಕ್ಕರ್ ಹಾಕುವ ಸಾಧ್ಯತೆ ಇರುತ್ತದೆ. ಪಠ್ಯಪುಸ್ತಕ ರಚನಾ ಸಮಿತಿ, ಮಕ್ಕಳಿಗೆ ಹೊರೆಯಾಗದ ಹಾಗೆ ಪಠ್ಯಪುಸ್ತಕಗಳನ್ನು ರಚಿಸಿದೆ. ಕಾಲಕಾಲಕ್ಕೆ ಪರಿಷ್ಕರಣೆಯಾಗುವ ಕಾರಣದಿಂದಲೂ ಮರುಬಳಕೆ ಸರಿಯಲ್ಲ ಎಂದು ಮರುಬಳಕೆಯ ಬಗ್ಗೆ ವಿರೋಧ ವ್ಯಕ್ತವಾಗಿತ್ತು.