ಶಾಲಾ ಮಕ್ಕಳ ಸುರಕ್ಷತೆ ಮತ್ತು ಶಾಲೆಯ ಆವರಣದ ಸ್ವಚ್ಛತೆಗಾಗಿ ಶಾಲೆಯ ಹೆಡ್ ಮಾಸ್ಟರ್ ತಮ್ಮ ಸಂಬಳದ ಹಣದಿಂದಲೇ ಶೌಚಾಲಯ ನಿರ್ಮಾಣ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ತಮಿಳುನಾಡಿನ ಪೆರ್ನಾಂಪೇಟ್ ಪಂಚಾಯಿತಿ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ವಲ್ಲುವನ್ (50) ತಮ್ಮ ಕೈಯಿಂದ ರೂ.65,000 ಖರ್ಚು ಮಾಡಿ ಆಧುನಿಕ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ಬಯಲು ಶೌಚಾಲಯದ ದುಶ್ಪರಿಣಾಮಗಳನ್ನು ಮತ್ತು ಸ್ವಚ್ಛ ಭಾರತದ ಅರಿವನ್ನು ಮೂಡಿಸುವಲ್ಲಿ ಮುಖ್ಯೋಪಾಧ್ಯಾಯರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಪೆರ್ನಾಂಪೇಟ್ ಪಂಚಾಯಿತಿ ಸರಕಾರಿ ಶಾಲೆಯೊಂದರಲ್ಲಿ ಸುಮಾರು 250 ವಿದ್ಯಾರ್ಥಿಗಳಿದ್ದಾರೆ. ಆದರೆ ಅವರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಈ ಶಾಲೆಗೆ ಸರ್ವ ಶಿಕ್ಷಾ ಅಭಿಯಾನದ ಭಾಗವಾಗಿ ರೂ.1,96000 ಹಣ ಬಿಡುಗಡೆಯಾಗಿತ್ತು. ಆದರೆ ಆ ಹಣದಿಂದ ನಿಯಮಾನುಸಾರ ಆಧುನಿಕ ಶೌಚಾಲಯ ನಿರ್ಮಿಸಲು ಸಾಧ್ಯವಿರಲಿಲ್ಲ.
ಹಣದ ಕೊರತೆಯಿಂದ ಕೆಲಸ ಅರ್ಧಂಬರ್ಧವಾಗಬಾರದೆಂದು ತಮ್ಮ ಸಂಬಳದಿಂದ ರೂ.65,000 ನೀಡಿದ್ದಾರೆ. ಶೌಚಾಲಯದ ಗೋಡೆಗಳನ್ನು 6 ಅಡಿ ಎತ್ತರ ಮಾಡಲಾಗಿದ್ದು, ಸರಕಾರ ಹೇಳಿರುವುದಕ್ಕಿಂತ ಎರಡು ಪಟ್ಟು ಎತ್ತರ ಇದು. ಅದರಲ್ಲಿ ಮೂತ್ರವಿಸರ್ಜನೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಈ ಶೌಚಾಲಯಗಳು ಅತ್ಯಾಧುನಿಕವಾಗಿದ್ದು ಇಲ್ಲಿ ಭಾರತೀಯ ಮತ್ತು ಪಾಶ್ಚ್ಯಾತ್ಯ ಎರಡೂ ಶೈಲಿಗಳಲ್ಲಿ ನಿರ್ಮಿಸಲಾಗಿದೆ.
ಇಷ್ಟೇ ಅಲ್ಲ ಈ ಮುಖ್ಯೋಪಾಧ್ಯಾಯರು ಶಾಲೆಗಳ ಕೊಠಡಿಗಳನ್ನು ಸಹ ಅತ್ಯಾಕರ್ಷಕವಾಗಿ ಮಾಡಿ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಶಾಲಾ ಕೊಠಡಿ ಗೋಡೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರ, ವಿಜ್ಞಾನಿಗಳ ಮ್ಯೂರಲ್ ಚಿತ್ರಗಳನ್ನು ಅಳವಡಿಸಿದ್ದಾರೆ.
ಶಾಲೆಯ ಆವರಣದಲ್ಲಿ ಕಲಿಕೆಗೆ ಸಹಾಯವಾಗುವಂತಹ ಪರಿಸರ ನಿರ್ಮಾಣ ಮಾಡಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ್ದಾರೆ
ಸರ್ಕಾರ ನೀಡುವ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಇಂದಿನ ದಿನಗಳಲ್ಲಿ ಸ್ವಂತ ಹಣವನ್ನು ಸರ್ಕಾರದ ಯೋಜನೆಗೆ ನೀಡಿರುವ ಮುಖ್ಯೋಪಾಧ್ಯಾಯರಾದ ವಲ್ಲುವನ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.