ಸರಕಾರಿ ಉದ್ಯೋಗಕ್ಕೆ ಬೇಡಿಕೆ ಯಾವಾಗಲೂ ಜಾಸ್ತಿಯೇ, ಅದರಲ್ಲೂ ಕೋವಿಡ್ ಬಂದ ಮೇಲಂತೂ ಎಲ್ಲರ ಗಮನ ಸರ್ಕಾರಿ ಉದ್ಯೋಗದ ಮೇಲೆಯೇ ಇದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣವನ್ನು ಹೊಂದಿರುವ ಬಹುತೇಕ ಮಹಿಳೆಯರು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಸೇರುತ್ತಿದ್ದಾರೆ.
ಒಟ್ಟು 242 ಹುದ್ದೆಗಳ ನೇಮಕಾತಿಗಾಗಿ ಪೊಲೀಸ್ ತರಬೇತಿ ಶಾಲೆಯ ಆರನೇ ಬ್ಯಾಚ್ನಲ್ಲಿ ತಮ್ಮ ತರಬೇತಿ ಮುಗಿಸಿದ ಅಭ್ಯರ್ಥಿಗಳು ಪಾಸಿಂಗ್ ಔಟ್ ಪರೇಡ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಪೈಕಿ 38 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಮತ್ತು 182 ಮಂದಿ ಪದವೀಧರರಾಗಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿಯನ್ನು ನಿಗದಿಪಡಿಸಲಾಗಿದ್ದು, ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರುವ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂಟು ತಿಂಗಳ ಅವಧಿಯ ತರಬೇತಿಯನ್ನು ಪಡೆದಿದ್ದರು. 13 ಕಾನ್ಸ್ಟೇಬಲ್ಗಳು ಎಂಎ ಪದವಿಗಳನ್ನು ಹೊಂದಿದ್ದರೆ ಇತರರು ಎಂಎಸ್ಸಿ ಮತ್ತು ಎಂಕಾಂ ಪದವೀಧರರಾಗಿದ್ದರು. ಅದಲ್ಲದೇ 14 ಎಂಜಿನಿಯರಿಂಗ್ ಅಭ್ಯರ್ಥಿಗಳು, ಆರು ಬಿಬಿಎ ಮತ್ತು ಬಿಸಿಎ ಪದವೀಧರರು ಕೂಡ ಇದ್ದಾರೆ.
ಇದೇ ವೇಳೆ 214 ಹೊಸ ನೇಮಕಾತಿಗಳನ್ನು ಗ್ರಾಮೀಣ ಪ್ರದೇಶಗಳಿಂದ ಮತ್ತು 28 ನಗರ ಭಾಗಗಳಿಂದ ಮಾಡಲಾಗಿದೆ. ಈ ಅಭ್ಯರ್ಥಿಗಳನ್ನು ಚಾಮರಾಜನಗರ, ಮೈಸೂರು, ತುಮಕೂರು, ಕೊಡಗು, ರಾಯಚೂರು, ಮಂಗಳೂರು, ಕಲಬುರಗಿ ಮತ್ತು ರಾಜ್ಯದ ಇತರ ಪೊಲೀಸ್ ಘಟಕಗಳಲ್ಲಿ ನೇಮಿಸಲಾಗಿದೆ.
ಹೊಸ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಳಲ್ಲಿ ಶೈಕ್ಷಣಿಕವಾಗಿ ಟಾಪರ್ ಆದವರೂ ಕೂಡ ಸೇರಿದ್ದಾರೆ. ಆಲ್ ರೌಂಡ್ ಬೆಸ್ಟ್ ಟ್ರೇನಿ ಪ್ರಶಸ್ತಿಯನ್ನು ಪಡೆದ ಲತಾ ಎಂ ತನ್ನ ಜಿಲ್ಲೆಯಿಂದ ವಿಶ್ವವಿದ್ಯಾನಿಲಯದ ಟಾಪರ್ ಆಗಿದ್ದವರು ನಂತರ ಬಿಎ ಮುಗಿಸಿ ಕಾನ್ಸ್ಟೇಬಲ್ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತರಬೇತಿಯ ಸಮಯದಲ್ಲಿ ಗುಂಡಿನ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ಸುಜಾತ ಎಸ್ ಬಿರಾದಾರ್, ಚಂದ್ರಕಲಾ ಬಿರಾದಾರ ಮತ್ತು ಚಿತ್ರಾ ಜಿ ಎಲ್ಲರೂ ತಮ್ಮ ಹಳ್ಳಿಯಿಂದ ಬಂದ ಮೊದಲ ಪೊಲೀಸ್ ಮಹಿಳೆಯರಾಗಿದ್ದಾರೆ.
ಪಾಸಿಂಗ್ ಔಟ್ ಪರೇಡ್ನಲ್ಲಿ ಭಾಗವಹಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಅರ್ಹ ಮಹಿಳೆಯರು ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಇದು ಒಳ್ಳೆಯ ಸಂಕೇತವಾಗಿದ್ದರೂ ಹೆಚ್ಚಿನವರು ಇತರ ಸ್ಪರ್ಧಾತ್ಮಕ ಅಥವಾ ಅಂತರ-ವಿಭಾಗದ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದರಲ್ಲಿ ಉತ್ತೀರ್ಣರಾಗಿ ಮುನ್ನಡೆಯುತ್ತಾರೆ. ಹೀಗಾಗಿ ಈ ಹುದ್ದೆಗಳು ಮತ್ತೆ ಖಾಲಿಯಾಗುತ್ತವೆ ಎಂದು ಹೇಳಿದರು.