ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣ ಕಥೆಗಳನ್ನು ಡಿಜಿಟಲೀಕರಣಗೊಳಿಸಲು ಐಐಟಿ ಕಾನ್ಪುರ ಮುಂದಾಗಿದೆ.
ಗೀತಾಸೂಪರ್ಸೈಟ್ ಎನ್ನುವ ವೆಬ್ಸೈಟ್ ಅಭಿವೃದ್ಧಿ ಪಡಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಗಿದ್ದು. ಈಗಾಗಲೇ ಈ ವೆಬ್ಸೈಟ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.
ಐಐಟಿ ಕಾನ್ಪುರದ ಪ್ರೊ.ಟಿ.ವಿ. ಪ್ರಭಾಕರ್ ನೇತೃತ್ವದಲ್ಲಿ 20 ಮಂದಿಯ ತಂಡವು ಈ ಗ್ರಂಥಗಳ ಡಿಜಿಟಲೀಕರಣಕ್ಕೆ ನಿರಂತರ ಶ್ರಮವಹಿಸಿದೆ. ಚಿನ್ಮಯ ಇಂಟರ್ನ್ಯಾಷನಲ್ ಫೌಂಡೇಷನ್ ಹಾಗೂ ಸಂಸ್ಕೃತ ವಿದ್ವಾಂಸರ ನೆರವು ಪಡೆಯಲಾಗಿದೆ. ತಾಳೆಗರಿಯಲ್ಲಿದ್ದ ಗ್ರಂಥಗಳ ಅಧ್ಯಯನವನ್ನೂ ಕೈಗೊಳ್ಳಲಾಗಿದೆ. ವಾಲ್ಮೀಕಿ ರಾಮಾಯಣ, ಭಗವದ್ಗೀತೆ ಸೇರಿ ಸುಮಾರು 14 ಗ್ರಂಥಗಳು ಈಗ ವೆಬ್ಗೆ ಅಪ್ಲೋಡ್ ಆಗಿವೆ. ಮತ್ತಷ್ಟು ಗ್ರಂಥ ಸಾಹಿತ್ಯ ಸೇರ್ಪಡೆಯ ಕಾರ್ಯ ಮುಂದುವರಿದಿದೆ.
ರಾಮಾಯಣ, ಮಹಾಭಾರತದಂತಹ ಕೃತಿಗಳನ್ನು ಒಳಗೊಂಡು ವೇದ, ಉಪನಿಷದ್ಗಳನ್ನು ಸಂರಕ್ಷಿಸಬೇಕು. ಈ ಗ್ರಂಥಗಳು ಸುಲಭವಾಗಿ ವೆಬ್ತಾಣದಲ್ಲಿ ಲಭ್ಯವಾಗಬೇಕು ಎನ್ನುವುದು ಐಐಟಿಯ ಕಾಳಜಿಯಾಗಿದೆ. ಇದಕ್ಕೆ 'ಪರಂಪರೆ ರಕ್ಷಣೆ' ಹೆಸರಿನ ಯೋಜನೆಯಡಿ ಕೇಂದ್ರ ಸರಕಾರವೇ ಇದಕ್ಕೆ ಬೆನ್ನೆಲುಬಾಗಿ ನಿಂತಿದೆ.
''ಪುರಾಣ ಪಠ್ಯಗಳ ಡಿಜಿಟಲೀಕರಣ 1997 ರಲ್ಲಿ ಪ್ರಾರಂಭವಾಗಿದೆ. ಅಂದಿನ ಕೇಂದ್ರ ಸರಕಾರವು ಮಾಹಿತಿ ಮತ್ತು ಪ್ರಸಾರ ಖಾತೆಯ ಮೂಲಕ ಪ್ರೋತ್ಸಾಹ ನೀಡಿತ್ತು. ನಂತರ 2001 ರ ವೇಳೆಗೆ ಮೊದಲ ಹಂತದ ಡಿಜಿಟಲೀಕರಣ ಪೂರ್ಣಗೊಂಡಿತ್ತು,'' ಎಂದು ಐಐಟಿ ಕಾನ್ಪುರದ ಪ್ರೊ.ಟಿ.ವಿ. ಪ್ರಭಾಕರ್ ಹೇಳುತ್ತಾರೆ.
ವೆಬ್ನಲ್ಲಿರುವ ಗ್ರಂಥಗಳು
ಭಗವದ್ಗೀತಾ, ರಾಮಚರಿತಮಾನಸ, ಬ್ರಹ್ಮಸೂತ್ರ, ಉಪನಿಷದ್, ವಾಲ್ಮೀಕಿ ರಾಮಾಯಣ, ಯೋಗಸೂತ್ರ, ಶ್ರೀರಾಮ ಗೀತಾ, ವಿಭೀಷಣ ಗೀತಾ ಮತ್ತು ಉದ್ಧವ ಗೀತಾ ಸೇರಿ ಇತರೆ 7 ಗೀತೆಗಳು.
ನಾನಾ ಗ್ರಂಥ ಸಾಹಿತ್ಯದ ಶ್ಲೋಕಗಳನ್ನು ಮೂಲ ದೇವನಾಗರಿ ಲಿಪಿ ಜೊತೆಗೆ ಕನ್ನಡ ಸೇರಿ 10 ಕ್ಕೂ ಹೆಚ್ಚು ಭಾಷೆಗಳ ಲಿಪಿಯಲ್ಲಿ ಬರೆದಿಟ್ಟಿರುವುದು ಈ ವೆಬ್ಸೈಟ್ನ ವೈಶಿಷ್ಟ್ಯವಾಗಿದೆ. ಜತೆಗೆ ವಿದ್ವಾಂಸರು ರಾಗಬದ್ಧವಾಗಿ ಶ್ಲೋಕ ಪಠಿಸಿರುವುದನ್ನು ಆಲಿಸಬಹುದಾಗಿದೆ.
ಹಲವು ಭಾಷೆಗಳಲ್ಲಿ ಲಭ್ಯ
ಹಿಂದಿ, ಇಂಗ್ಲಿಷ್ ,ಅಸ್ಸಾಮಿ, ಬೆಂಗಾಳಿ, ದೇವನಾಗರಿ, ಗುಜರಾತಿ, ಕನ್ನಡ, ಮಲಯಾಳಂ, ಓರಿಯಾ, ರೋಮನ್, ತಮಿಳು, ತೆಲಗು
ಇದರೊಂದಿಗೆ ನೇಪಾಳದಲ್ಲಿ ಪ್ರಚಲಿತದಲ್ಲಿರುವ ಪ್ರಾಚೀನ ಗ್ರಂಥ ಸಾಹಿತ್ಯ ರಕ್ಷಣೆ ಸಂಬಂಧ ಐಐಟಿ ಕಾನ್ಪುರದಿಂದ ಪ್ರತ್ಯೇಕ ಅದಕ್ಕಾಗಿ ವೆಬ್ ಅಭಿವೃದ್ಧಿ ಪಡಿಸಲಾಗಿದೆ. ಜತೆಗೆ ಭಾರತೀಯ ಗ್ರಂಥಗಳಿಗೆ ಸಂಬಂಧಿಸಿದ ವೆಬ್ನಲ್ಲಿ ವೇದಾಂತ ಮತ್ತು ನಾರದ ಭಕ್ತಿ ಸೂತ್ರದ ಪರಿಕಲ್ಪನೆಯ ನಕ್ಷೆಗಳನ್ನು ಕೊಡಲಾಗಿದೆ.
ವೆಬ್ಸೈಟ್ ತಲುಪಲು ಇಲ್ಲಿ ಕ್ಲಿಕ್ ಮಾಡಿ