ಡಿಸೆಂಬರ್ 4 ಭಾರತದ ಇತಿಹಾಸದ ಪುಟದಲ್ಲಿ ಭಾರತೀಯ ನೌಕಾ ಸೇನೆಯು ಎಂದಿಗೂ ಅಳಿಸಲಾಗದ ದಿನ. ಭಾರತವು ತನ್ನ ನೌಕಾ ಸೇನೆಯಿಂದ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ್ದ ದಿನ.
1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಭಾರತೀಯ ನೌಕಾಪಡೆಗಳು ಮೊದಲ ಬಾರಿ ಹಡಗು ನಿಗ್ರಹ ಕ್ಷಿಪಣಿಗಳನ್ನು ಬಳಸಿ ಪಾಕ್ನ ಮೂರು ಯುದ್ಧ ಹಡಗುಗಳನ್ನು ಕರಾಚಿಯ ಸಮುದ್ರಗಳಲ್ಲಿ ಹೊಡೆದುರುಳಿಸಿತ್ತು. ಅಂದಿನ ಈ ದಿನವನ್ನು ಭಾರತೀಯ ನೌಕಾ ಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ.
1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿಭಾರತದ ಮೂರು ಯುದ್ಧನೌಕೆಗಳು ಪಾಕಿಸ್ತಾನದ ವಿರುದ್ಧ ದಂಡೆತ್ತಿ ಹೋಗಿದ್ದವು.
ಅಪರೇಷನ್ ಟ್ರೈಡೆಂಟ್ ಎಂಬ ಹೆಸರಲ್ಲಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಣಿಜ್ಯ ರಾಜಧಾನಿಯಾಗಿದ್ದ ಕರಾಚಿ ಮೇಲೆ ಭಾರತದ ನೌಕಾ ಸೇನೆ ದಾಳಿ ಮಾಡಿತ್ತು. ಐಎನ್ಎಸ್ ನಿಪತ್, ಐಎನ್ಎಸ್ ನೀರ್ಘಾಟ್ ಮತ್ತು ಐಎನ್ಎಸ್ ವೀರ್ ಪಾಕಿಸ್ತಾನದ ಬಂದರುಗಳ ಮೇಲೆ ದಾಳಿ ಮಾಡಿದ್ದವು.
ಕರಾಚಿ ಬಂದರನ್ನು ಸುತ್ತುವರೆದ್ದ ಭಾರತೀಯ ಯುದ್ಧ ನೌಕೆಗಳು ಪಾಕಿಸ್ತಾನ ಸೈನಿಕರಿಗೆ ಬಿಸಿ ಮುಟ್ಟಿಸಿತ್ತು. ಕಮಾಂಡರ್ ಬಿ ಬಿ ಯಾದವ್ ನೇತೃದ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಧಿಗ್ವಿಜಯ ಸಾಧಿಸಿತ್ತು. ಯಾವೊಬ್ಬ ಭಾರತೀಯನಿಗೂ ಹಾನಿಯಾಗದಂತೆ, ಬಹಳ ಎಚ್ಚರಿಕೆಯಿಂದ ನಡೆದ ಕಾರ್ಯಾಚರಣೆಗೆ ಪಾಕಿಸ್ತಾನದ ನೌಕೆಗಳು ಧ್ವಂಸವಾಗಿತ್ತು.
ವಿಜಯೋತ್ಸವದ ಸಂದರ್ಭ ಭಾರತೀಯ ನೌಕಾಪಡೆ ನಡೆಸಿದ ಟ್ರಿಡೆಂಟ್ ಕಾರ್ಯಾಚರಣೆಯ ಸ್ಮರಣಾರ್ಥವಾಗಿ 'ನೌಕಾ ದಿನ'ವನ್ನು ಆಚರಿಸಲಾಗುತ್ತಿದೆ.
ಭಾರತೀಯ ನೌಕಾಪಡೆ ಇಂದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ಎಂಬತ್ತು ಸಾವಿರ ಜನರು ಕಾರ್ಯನಿರತರಾಗಿದ್ದಾರೆ. ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು.
ಬಲಿಷ್ಠವಾದ ಸೇನಾ ಸಾಮರ್ಥ್ಯ ಹೊಂದಿರುವ ಭಾರತವು 2030ರ ವೇಳೆಗೆ ವಿಶ್ವದ ಅತ್ಯಂತ ಶಕ್ತಿಶಾಲಿ ನೌಕಾ ಸೇನೆ ಹೊಂದಿರುವ ಮೂರನೇ ರಾಷ್ಟ್ರ ಎಂದು ಗುರುತಿಸಿಕೊಳ್ಳುವ ಗುರಿ ಹೊಂದಿದೆ.