ಭಾರತದ ಬಾವುಟ ವಿಶ್ವದಲ್ಲೇ ವಿಶಿಷ್ಟವಾಗಿ ರೂಪುಗೊಂಡಿರುವ ಬಾವುಟ. ನಮ್ಮ ಈ ಧ್ವಜವು ಒಮ್ಮಿಂದೊಮ್ಮೆಲೆ ರೂಪುಗೊಂಡಿದ್ದಲ್ಲ. ಈ ರಾಷ್ಟ್ರಧ್ವಜದ ಕಲ್ಪನೆ ಹುಟ್ಟಿದ್ದು 1906 ರಲ್ಲಿ, ಅಲ್ಲಿಂದ 1947 ರವರೆಗೆ ಹಲವಾರು ಮಾರ್ಪಾಡುಗಳನ್ನು ಹೊಂದುತ್ತ, ದೇಶ ಸ್ವಾತಂತ್ರ್ಯಗಳ್ಳುವ ಸಮಯಕ್ಕೆ ಪೂರ್ಣಪ್ರಮಾಣವಾಗಿ, ಅರ್ಥಗರ್ಭಿತವಾಗಿ ರೂಪುಗೊಂಡಿತು ನಮ್ಮ ಹೆಮ್ಮೆಯ ಧ್ವಜ.
ನಮ್ಮ ಹೆಮ್ಮೆಯ ರಾಷ್ಟ್ರಧ್ವಜಕ್ಕೆ ರೂಪ ನೀಡಿದವರು ಸ್ವಾತಂತ್ರ್ಯ ಹೋರಾಟಗಾರರಾದ ಆಂಧ್ರದ ಪಿಂಗಳಿ ವೆಂಕಯ್ಯ. ಧ್ವಜ ನಿರ್ಮಾತೃ ಪಿಂಗಳಿ ವೆಂಕಯ್ಯ 1916 ರಿಂದ 1921 ರ ತನಕ ಹಲವು ರಾಷ್ಟ್ರಗಳ ಧ್ವಜದ ಅಧ್ಯಯನ ನಡೆಸಿ 30 ಧ್ವಜಗಳ ಮಾದರಿಯನ್ನು ಬುಕ್ಲೆಟ್ ರೂಪದಲ್ಲಿ ನೀಡಿದ್ದರು. ಅವುಗಳಲ್ಲಿ ಎರಡು ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಕೆಂಪು ಮತ್ತು ಹಸಿರು ಪಟ್ಟಿಯಿಂದ ಕೂಡಿದ ಭಾರತದ ಧ್ವಜವನ್ನು ಆರಿಸಲಾಯಿತು.
1921 ಮಾರ್ಚ್ 30ರಂದು ಆಂಧ್ರದ ವಿಜಯವಾಡ ದಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದಲ್ಲಿ ಧ್ವಜ ಪ್ರಸ್ತುತಪಡಿಸಲಾಯಿತು. ಗಾಂಧೀಜಿಯವರು ಕೆಂಪು, ಹಸಿರು ಬಣ್ಣದ ಮಧ್ಯೆ ಬಿಳಿಯನ್ನು ಸೇರಿಸಿ ಚರಕವನ್ನು ಸೂಚಿಸಿದರು.
1931 ಆಗಸ್ಟ್ 6 ರಂದು ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೇಸರಿ, ಬಿಳಿ, ಹಸಿರು ಧ್ವಜದ ಮಧ್ಯೆ ಚರಕವಿರುವ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು.
ಜಲಂಧರ್ ನ ಶಿಕ್ಷಣ ತಜ್ಞ ಲಾಲಾ ಹಂಸರಾಜ್ ಚರಕದ ಬದಲಾಗಿ ಅಶೋಕ ಚಕ್ರವನ್ನು ಪರಿಗಣಿಸಲು ಒತ್ತಾಯಿಸಿದರು. ಸರ್ವಪಳ್ಳಿ ರಾಧಾಕೃಷ್ಣನ್ ತ್ರಿವರ್ಣಕ್ಕೆ ಹೊಸ ಅರ್ಥ ಕಲ್ಪಿಸಿದರು. ಕೇಸರಿ ತ್ಯಾಗ ಮತ್ತು ಬಲಿದಾನ, ಬಿಳಿ ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಸಮೃದ್ಧಿ, ಅಶೋಕ ನ್ಯಾಯ ಧರ್ಮದ ಸಂಕೇತವೆಂದು ಹೊಸ ಭಾಷ್ಯ ಬರೆದರು.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ 22, 1947 ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಪಂಡಿತ್ ಜವಾಹರ್ ಲಾಲ್ ನೆಹರೂ ರವರ ಮುಂದಾಳತ್ವದಲ್ಲಿ 1947 ರ ಜುಲೈ 22 ರಂದು ಅಸೆಂಬ್ಲಿಯಲ್ಲಿ ರಾಷ್ಟ್ರಧ್ವಜಕ್ಕೆ ಅಂತಿಮ ಸ್ಪರ್ಶ ನೀಡಿ ಅಧಿಕೃತ ಘೋಷಣೆ ಮಾಡಲಾಯಿತು. 1950 ಜನವರಿ 26ರ ತನಕ ಸ್ವತಂತ್ರ ಭಾರತದ ಸ್ವರಾಜ್ಯಭಾರದ ಬಾವುಟವಾಗಿ ನಂತರದ ದಿನಗಳಲ್ಲಿ ಗಣರಾಜ್ಯ ಭಾರತದ ಬಾವುಟವಾಗಿದೆ.
ಆಗಸ್ಟ್ 31 ರಂದು ಮೊದಲ ಬಾರಿ ಧ್ವಜಾರೋಹಣ ಮಾಡಿದ ಫಲವಾಗಿ ಆ ದಿನವನ್ನು ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ.