ಉಚಿತ ಊಟ ನೀಡುತ್ತಾ ಮಕ್ಕಳ ಹಸಿವು ನೀಗಿಸುತ್ತಿದ್ದ ಅಕ್ಷಯ ಪಾತ್ರ ಯೋಜನೆಯಿಂದ ಇನ್ನು ಮುಂದೆ ಉಚಿತ ಶಿಕ್ಷಣ ಸಿಗಲಿದೆ.
ಇಸ್ಕಾನ್ 'ಅಕ್ಷಯ ಪಾತ್ರ' ಪ್ರತಿಷ್ಠಾನವು ಪ್ರತಿ ರಾಜ್ಯದಲ್ಲೂ ಉಚಿತ ಶಿಕ್ಷಣ ನೀಡಲು ಸಿದ್ಧತೆ ನಡೆಸಿದ್ದು, ದೇಶದಾದ್ಯಂತ ಸುಮಾರು 25,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಪ್ರತಿಷ್ಠಾನ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಜ್ಯದ ನಾಲ್ಕು ಭಾಗಗಳಲ್ಲಿ ತಲೆ ಎತ್ತಲಿರುವ ಆಧುನಿಕ ಗುರುಕುಲಗಳಲ್ಲಿ (ವಸತಿ ಶಿಕ್ಷಣ ಶಾಲೆ) 1ನೇ ತರಗತಿಯಿಂದ 10ನೇ ತರಗತಿವರೆಗೆ ಸುಮಾರು 8,000 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಇಸ್ಕಾನ್ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಮಾಧ್ಯಮ ವಿಭಾಗದ ಮುಖ್ಯಸ್ಥ ಕುಲಶೇಖರ ಚೈತನ್ಯದಾಸ ತಿಳಿಸಿದ್ದಾರೆ.
ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ ಭಾಗದಲ್ಲಿ ಗುರುಕುಲಗಳು ಆರಂಭವಾಗಲಿವೆ. ಒಂದೊಂದು ಗುರುಕುಲದಲ್ಲಿ ತಲಾ 2,000 ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ದೊರೆಯಲಿದೆ. ಶ್ರೀರಂಗಪಟ್ಟಣದ ಬನ್ನೂರು ರಸ್ತೆಯ ಮಹದೇವಪುರದಲ್ಲಿ ಗುರುಕುಲ ಆರಂಭಕ್ಕೆ 19 ಎಕರೆ ಗುರುತಿಸಲಾಗಿದ್ದು, ಒಂದೂವರೆ ವರ್ಷದಲ್ಲಿ ಅಲ್ಲಿ ವಸತಿ ಶಾಲೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
'ಮಹಾನ್ ಭಾರತದ ಪ್ರತಿಭಾ ಶಾಲೆ ಹೆಸರಿನಲ್ಲಿ ಆಧುನಿಕ ಗುರುಕುಲಗಳಿಗೆ ಅಕ್ಷಯ ಪಾತ್ರ ಬುನಾದಿ ಹಾಕುತ್ತಿದೆ. ಪರಂಪರೆ, ಸಂಸ್ಕೃತಿ ಮತ್ತು ಅಧ್ಯಾತ್ಮ ಮೌಲ್ಯಗಳನ್ನು ಶಿಕ್ಷಣದ ಮೂಲಕ ಮುಂದಿನ ಪೀಳಿಗೆಯಲ್ಲಿ ಬಿತ್ತಿ ಬೆಳೆಸುವುದು ಈ ಯೋಜನೆಯ ಉದ್ದೇಶ. ಆಧುನಿಕ ಗುರುಕುಲಗಳನ್ನು ಮುಂದಿನ ವರ್ಷ ದೇಶದಾದ್ಯಂತ ತೆರೆಯಲಾಗುತ್ತಿದೆ' ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಎಲ್ಕೆಜಿಯಿಂದ ಸ್ನಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್ನಂತಹ ವೃತ್ತಿಪರ ಕೋರ್ಸ್ಗಳವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಮಕ್ಕಳ ಕಲಿಕೆಯ ಹಂಬಲ ಗುರುತಿಸಿ, ಅವರು ಭವಿಷ್ಯದಲ್ಲಿ ಏನಾಗಬೇಕೆಂದು ಬಯಸುತ್ತಾರೋ ಅದರಂತೆ, ಅವರ ಕನಸುಗಳನ್ನು ಈಡೇರಿಸಲು ಪ್ರತಿಷ್ಠಾನ ಸಂಕಲ್ಪ ಮಾಡಿದೆ. ಇದಕ್ಕಾಗಿ ಪ್ರತಿಯೊಬ್ಬರನ್ನು ಪರೀಕ್ಷೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುಕುಲಕ್ಕೆ ದಾಖಲಿಸಿಕೊಳ್ಳಲಾಗುತ್ತದೆ.


Click it and Unblock the Notifications











