ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು ಆರ್ ರಾವ್ (ಉಡುಪಿ ರಾಮಚಂದ್ರ ರಾವ್) ಕೊನೆಯುಸಿರೆಳೆದಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿರುವ ರಾವ್ ಅವರ ಸಾಧನೆ ಇಂದಿನ ಯುವಕರಿಗೆ ದಾರಿದೀಪ.
ಕನ್ನಡದ ನೆಲದಿಂದ ಬಾಹ್ಯಾಕಾಶದವರೆಗಿನ ಯು ಆರ್ ರಾವ್ ಅವರ ಸಾಧನೆಗೆ ಸಿಕ್ಕಿರುವ ಬಿರುದು ಸನ್ಮಾನಗಳಿಗೆ ಲೆಕ್ಕವಿಲ್ಲ. ಇತ್ತೀಚೆಗಷ್ಟೇ ಭಾರತ ಸರ್ಕಾರ ದೇಶದ ಉನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಿತ್ತು. ಅಲ್ಲದೇ ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸಾಧನೆಗ ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್ ಸಂಸ್ಥೆಯ ಐಎಎಫ್ ಹಾಲ್ ಆಫ್ ಫೇಮ್' ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದರು.
ಯು ಆರ್ ರಾವ್ ಬೆಳೆದು ಬಂದ ಹಾದಿ
ಮಾರ್ಚ್ 10, 1932 ರಲ್ಲಿ ಉಡುಪಿ ಜಿಲ್ಲೆಯ ಅದಮಾರು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದರು. ತಂದೆ ಲಕ್ಷ್ಮೀನಾರಾಯಣರಾವ್, ತಾಯಿ ಕೃಷ್ಣವೇಣಿಯಮ್ಮ . ತಮಮ ಪ್ರಾಥಮಿಕ ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ರಾವ್ ನಂತರ ಬಳ್ಳಾರಿಗೆ ತೆರಳಿದರು.
ಉಡುಪಿ, ಅನಂತಪುರ, ಮದ್ರಾಸ್, ಬನಾರಸ್ ಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ರಾವ್ 1952 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಮತ್ತು 1954ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಗಳಿಸಿದರು. ಆನಂತರ ವಿಕ್ರಂ ಸಾರಾಭಾಯಿ ಅವರ ಮಾರ್ಗದರ್ಶನದಲ್ಲಿ ವಿಶ್ವವಿಕಿರಣಗಳ ಬಗೆಗೆ ಮಾಡಿದ ಸಂಶೋಧನಾತ್ಮಕ ಅಧ್ಯಯನಕ್ಕೆ 1960 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಕೂಡ ಸಿಕ್ಕಿತು.
ಶಿಕ್ಷಣದ ನಂತರ ಉಪನ್ಯಾಸಕಾರಾಗಿ ಅಮೆರಿಕದ ಮೆಸಾಚುಸೆಟ್ಸ್ ತಾಂತ್ರಿಕ ಶಿಕ್ಷಣ ಸಂಸ್ಥೆ ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ರಾವ್ ಸೇವೆ ಸಲ್ಲಿಸಿದು.1966 ರಲ್ಲಿ ಅಮೆರಿಕಾದಿಂದ ಭಾರತಕ್ಕೆ ಹಿಂದಿರುಗಿದ ರಾವ್ ಅಹಮದಾಬಾದ್ ನ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯಲ್ಲಿ ಪ್ರೊಫೆಸರ್ ಹುದ್ದೆ ಅಲಂಕರಿಸಿದರು.
ತಿರುವನಂತಪುರದ ಇಂಡಿಯನ್ ಇನ್ಸ್ ಟಿಟ್ಯೂಟ್ ಫಾರ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ(ಐಐಎಸ್ ಟಿ)ಯ ಉಪಕುಲಪತಿಯಾಗಿಯೂ ಕಾರ್ಯನಿರವಹಿಸಿದ್ದರು. ಅಹಮದಾಬಾದ್ ನ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ ಮತ್ತು ಬೆಂಗಳೂರಿನ ನೆಹರೂ ಪ್ಲಾನೆಟೆರಿಯಂ ನ ಅಧ್ಯಕ್ಷರೂ ಆಗಿದ್ದರು.
1972 ರಲ್ಲಿ ಭಾರತದಲ್ಲಿ ಉಪಗ್ರಹಗಳ ನಿರ್ಮಾಣದ ಹೊಣೆಯನ್ನು ಹೊತ್ತಿದ್ದ ರಾವ್ ಭಾರತದ ಮೊದಲ ಉಪಗ್ರಹ ಎಂಬ ಖ್ಯಾತಿ ಗಳಿಸಿದ್ದ 'ಆರ್ಯಭಟ' ಉಪಗ್ರಹದ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಿಎಸ್ ಎಲ್ ವಿ, ಎಎಸ್ ಎಲ್ ವಿ, ಜಿಎಸ್ ಎಲ್ ವಿಗಳ ಯಶಸ್ವೀ ಉಡ್ಡಯನದ ಹಿಂದೆ ರಾವ್ ಅವರ ಅವಿರತ ಶ್ರಮವಿದೆ. ಭಾಸ್ಕರ, ಆಯಪಲ್, ರೋಹಿಣಿ, ಇನ್ಸಾಟ್-1, ಇನ್ಸಾಟ್-2, ಐಆರ್ ಎಸ್-1 ಮುಂತಾದ 18 ಉಪಗ್ರಹಗಳ ನಿರ್ಮಾಣದಲ್ಲಿ ರಾವ್ ಮುಖ್ಯ ಮಾರ್ಗದರ್ಶಕರಾಗಿದ್ದರು.
ತಮ್ಮ ಕರ್ತವ್ಯನಿಷ್ಠೆಯಿಂದ ಇಸ್ರೋದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ರಾವ್ ರವರು 1985 ರಲ್ಲಿ ಇಸ್ರೋ ಅಧ್ಯಕ್ಷರಾಗಿ ಆಯ್ಕೆಯಾದರು.
ಯು ಆರ್ ರಾವ್ ಅವರಿಗೆ ಸಂದ ಪ್ರಮುಖ ಪ್ರಶಸ್ತಿಗಳು
- 1975 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
- 1975 ಹರಿ ಓಂ ವಿಕ್ರಮ ಸಾರಾಭಾಯಿ ಪ್ರಶಸ್ತಿ
- 1976 ರಲ್ಲಿ ಪದ್ಮಭೂಷಣ ಪ್ರಶಸ್ತಿ
- 1983 ರಲ್ಲಿ ಮತ್ತೊಮ್ಮೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- 1994 ರಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ
- 2001 ರಲ್ಲಿ ನಾಡೋಜ ಪ್ರಶಸ್ತಿ
- 2002 ಸರ್ ಎಂ ವಿಶ್ವೇಶ್ವರಯ್ಯ ಮೆಮೋರಿಯಲ್ ಪ್ರಶಸ್ತಿ
- 2004 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ
- 2013 ರಲ್ಲಿ ವಾಷಿಂಗ್ಟನ್ ನ ಸೊಸೈಟಿ ಆಫ್ ಸೆಟಲೈಟ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್ ವತಿಯಿಂದ ಕೊಡಮಾಡುವ 'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್' ಗೌರವಕ್ಕೂ ಪಾತ್ರರಾಗಿದ್ದರು.
- 2017 ರಲ್ಲಿ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ
ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸುತ್ತಿರುವವರಿಗೆ, ಯುವ ವಿಜ್ಞಾನಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ರಾವ್ ಅವರ ಜೀವನವೇ ಒಂದು ಪಾಠ.